ಅನಾರೋಗ್ಯದಿಂದ ಬಳಲುತ್ತಿದ್ದ ಸಹೋದರನಿಗೆ ಮಹಿಳೆ ಕಿಡ್ನಿ ದಾನ ಮಾಡಿದ್ದಾರೆ. ಇದರಿಂದ ಕೋಪಗೊಂಡ ಆಕೆಯ ಪತಿ ಆಕೆಗೆ ವಾಟ್ಸ್ಆಪ್ ಮೂಲಕ ತ್ರಿವಳಿ ತಲಾಖ್ ಹೇಳಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮಹಿಳೆಯ ಪತಿ ಮೊಹಮ್ಮದ್ ರಶೀದ್ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರೆ, ಪತ್ನಿ ತರನ್ನುಮ್ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಬೈರಿಯಾಹಿ ಗ್ರಾಮದಲ್ಲಿ ತನ್ನ ತಾಯಿ ಮತ್ತು ಸಹೋದರ ಜತೆಗೆ ನೆಲೆಸಿದ್ದರು.
ಏನಿದು ಘಟನೆ?
ಕೆಲ ದಿನದ ಹಿಂದೆ ಮಹಿಳೆಯ ಸಹೋದರ ಮೊಹಮ್ಮದ್ ಶಾಕಿರ್ನಿಗೆ ಅನಾರೋಗ್ಯ ಉಂಟಾಗಿತ್ತು. ಈ ಹಿನ್ನೆಲೆ, ಸಹೋದರನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೈದ್ಯರು ಪರೀಕ್ಷೆ ನಡೆಸಿದ ವೇಳೆ ಕಿಡ್ನಿಯಲ್ಲಿ ಸಮಸ್ಯೆ ಇದೆ ಎಂದು ತಿಳಿಸಿದ್ದಾರೆ. ಸಹೋದರನ ಜೀವ ಉಳಿಯಬೇಕಾದರೇ, ಕಿಡ್ನಿ ಬದಲಾವಣೆ ಮಾಡಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ವೈದ್ಯರು ಹೇಳಿದ ನಂತರ ಹಿಂದೆಮುಂದೆ ಯೋಚನೆ ಮಾಡದ ಮಹಿಳೆ ತನ್ನ ಕಿಡ್ನಿ ಕೊಡುವುದಾಗಿ ವೈದ್ಯರ ಬಳಿ ತಿಳಿಸಿದ್ದಾಳೆ. ಅದರಂತೆಯೇ, ಆಸ್ಪತ್ರೆಯಲ್ಲಿ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ, ಮಹಿಳೆಯ ಒಂದು ಕಿಡ್ನಿಯನ್ನು ಆಕೆಯ ಸಹೋದರನಿಗೆ ಕಸಿ ಮಾಡಿದ್ದಾರೆ.
ಮಹಿಳೆ ಈ ಬಗ್ಗೆ ಗಂಡನಿಗೆ ತಿಳಿಸಿರಲಿಲ್ಲ. ಆತನ ಬಳಿ ಈ ವಿಚಾರವಾಗಿ ಚರ್ಚೆ ಸಹ ಮಾಡಿರಲಿಲ್ಲ. ಇದಾದ ಬಳಿಕ ಇಬ್ಬರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಆ ಬಳಿಕ ಮಹಿಳೆ ನಡೆದ ಘಟನೆ ಬಗ್ಗೆ ತನ್ನ ಗಂಡನಿಗೆ ಕರೆ ಮಾಡಿ ತಿಳಿಸಿದ್ದಾಳೆ. ಈ ವಿಚಾರ ಕೇಳುತ್ತಲೇ ಕೋಪಗೊಂಡ ಆಕೆಯ ಪತಿ ಕಿಡ್ನಿ ಬದಲಾಗಿ ಆಕೆಯ ಸಹೋದರನ ಬಳಿ ₹40 ಲಕ್ಷ ಕೇಳುವಂತೆ ಒತ್ತಡ ಹೇರಿದ್ದಾನೆ. ಮಹಿಳೆ ಆತನ ಸಲಹೆಯನ್ನು ಪಾಲಿಸಲು ನಿರಾಕರಿಸಿದ್ದರಿಂದ, ವ್ಯಕ್ತಿ ವಾಟ್ಸಾಪ್ ಕರೆ ಮೂಲಕ ಆಕೆಗೆ ತ್ರಿವಳಿ ತಲಾಖ್ ನೀಡಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಎಲೆಕ್ಟ್ರಿಕ್ ವಾಹನಗಳ ನೋಂದಣಿ ಸಂಖ್ಯೆ ಮೂರು ಪಟ್ಟು ಏರಿಕೆ
ತ್ರಿವಳಿ ತಲಾಖ್ ನಂತರ, ತರನ್ನುಮ್ ಅನ್ನು ಆಕೆಯ ಗಂಡನ ಮನೆಯವರು ಹೊರಹಾಕಿದ್ದಾರೆ. ಈಗ ಆಕೆ ತನ್ನ ಹೆತ್ತವರೊಂದಿಗೆ ಉಳಿದುಕೊಂಡಿದ್ದಾಳೆ. ತರನ್ನುಮ್ ಅವರು ಜೈತಾಪುರ ಗ್ರಾಮದ ಮೊಹಮ್ಮದ್ ರಶೀದ್ ಅವರನ್ನು ಸುಮಾರು 25 ವರ್ಷಗಳ ಹಿಂದೆ ಮದುವೆಯಾಗಿದ್ದರು. ಮದುವೆಯಾಗಿ ಐದು ವರ್ಷಗಳಾದರೂ ತರನ್ನುಮ್ ಅವರು ಗರ್ಭಿಣಿಯಾಗಿರಲಿಲ್ಲ. ಹೀಗಾಗಿ, ರಶೀದ್ ಎರಡನೇ ಮದುವೆಯಾಗಿ ಸೌದಿ ಅರೇಬಿಯಾಕ್ಕೆ ಸಂಪಾದಿಸಲು ತೆರಳಿದ್ದರು.
ತರನ್ನುಮ್ ಹಿರಿಯ ಸಹೋದರ ಮೊಹಮ್ಮದ್ ಶಾಕಿರ್ ಕಳೆದ ಒಂದೂವರೆ ವರ್ಷಗಳಿಂದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತರನ್ನುಮ್ ಹೇಳಿದ್ದಾರೆ.
ಮಹಿಳೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೊಹಮ್ಮದ್ ರಶೀದ್ ಭಾರತಕ್ಕೆ ಮರಳಿದ ಕೂಡಲೇ ಆತನ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
2019ರಲ್ಲಿ ದೇಶದಲ್ಲಿ ತ್ರಿವಳಿ ತಲಾಖ್ ಪದ್ಧತಿಯನ್ನು ಕಾನೂನು ಬಾಹಿರ ಮತ್ತು ಅಸಂವಿಧಾನಿಕವೆಂದು ಘೋಷಿಸಲಾಗಿದೆ.