ನಗು ಹೆಚ್ಚಿಸುವ(ಮಂದಹಾಸ) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಯುವಕನೊಬ್ಬ ಅರಿವಳಿಕೆ ವಿಪರೀತವಾದ ಕಾರಣ ಮೃತಪಟ್ಟ ಘಟನೆ ತೆಲಂಗಾಣದ ಹೈದರಾಬಾದ್ನಲ್ಲಿ ನಡೆದಿದೆ.
28 ವರ್ಷದ ಲಕ್ಷ್ಮಿ ನಾರಾಯಣ ವಿನ್ಜಂ ಪ್ರಾಣ ಕಳೆದುಕೊಂಡ ಯುವಕ. ಈತ ತನ್ನ ಮುಂಬರುವ ಮದುವೆ ತಯಾರಿಗಾಗಿ ಹೈದರಾಬಾದ್ನ ಜುಬ್ಲಿ ಹಿಲ್ಸ್ ಠಾಣೆಯ ಎಫ್ಎಂಎಸ್ ಇಂಟರ್ನ್ಯಾಷನಲ್ ಡೆಂಟಲ್ ಕ್ಲಿನಿಕ್ ಫೆ.16ರಂದು ಚಿಕಿತ್ಸೆಗೆ ಒಳಗಾಗಿದ್ದ.
ನಗು ವೃದ್ದಿಸುವ ಶಸ್ತ್ರಚಿಕಿತ್ಸೆಗೂ ಮುನ್ನ ಅರಿವಳಿಕೆ ನೀಡಲಾಗಿತ್ತು. ಅರಿವಳಿಕೆಯಿಂದಾಗಿ ಪ್ರಜ್ಞಾಹೀನ ಸ್ಥಿತಿ ತಲುಪಿದ್ದ. ದುರಂತವೆಂದರೆ ಪ್ರಜ್ಞಾಹೀನಗೊಂಡವನು ಮತ್ತೆ ಎಚ್ಚರಗೊಳ್ಳಲಿಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ಅಪೊಲೊ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿನ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದರು.
ಅರಿವಳಿಕೆ ಹೆಚ್ಚಾಗಿರುವ ಕಾರಣ ತನ್ನ ಪುತ್ರ ಮೃತಪಟ್ಟಿದ್ದಾನೆ ಎಂದು ಲಕ್ಷ್ಮಿ ನಾರಾಯಣ ವಿನ್ಜಂ ತಂದೆ ರಾಮುಲು ವಿನ್ಜಂ ಆಸ್ಪತ್ರೆ ವಿರುದ್ಧ ಆರೋಪಿಸಿದ್ದಾರೆ. ”ನಾವು ಹತ್ತಿರದ ಆಸ್ಪತ್ರೆಗೆ ಕರೆದೊಯ್ದೆವು. ಅಲ್ಲಿನ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು” ಎಂದು ರಾಮುಲು ವಿನ್ಜಂ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆರಕ್ಷಕ ಇಲಾಖೆ ಯಾತಕ್ಕಾಗಿ, ಪೊಲೀಸರು ಇರುವುದು ಯಾರ ರಕ್ಷಣೆಗಾಗಿ?
”ಅವನು ಆರೋಗ್ಯವಂತನಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗುವುದರ ಬಗ್ಗೆ ತಮ್ಮ ಪುತ್ರ ತನಗೆ ತಿಳಿಸಿರಲಿಲ್ಲ. ಪುತ್ರನ ಸಾವಿಗೆ ವೈದ್ಯರೆ ಕಾರಣ” ಎಂದು ರಾಮುಲು ವಿನ್ಜಂ ತಿಳಿಸಿದ್ದಾರೆ.
ಒಂದು ವಾರದ ಹಿಂದಷ್ಟೆ ನಿಶ್ಚಿತಾರ್ಥಕ್ಕೆ ಒಳಗಾಗಿದ್ದ ಲಕ್ಷ್ಮಿನಾರಾಯಣ ಮುಂದಿನ ತಿಂಗಳು ಮದುವೆಯಾಗಬೇಕಿತ್ತು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಚಿಕಿತ್ಸೆ ನಿರ್ಲಕ್ಷ್ಯಕ್ಕಾಗಿ ಐಪಿಸಿ ಸೆಕ್ಷನ್ 304(ಎ)(ಕೊಲೆಯಲ್ಲದ ಹತ್ಯೆಯ ತಪ್ಪಿತಸ್ಥ) ಅಡಿ ಮೃತ ಯುವಕನ ತಂದೆ ದೂರು ದಾಖಲಿಸಿದ್ದಾರೆ. ಆಸ್ಪತ್ರೆಯ ದಾಖಲೆಗಳು ಹಾಗೂ ಸಿಸಿ ಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ತಾತ್ಕಾಲಿಕವಾಗಿ ಮುಖದಲ್ಲಿ ಅಂದವನ್ನು ಹೆಚ್ಚಿಸುವುದಕ್ಕಾಗಿ ಹಾಗೂ ಸದಾ ನಗು ತರಿಸುವುದಕ್ಕಾಗಿ ನಗು ವೃದ್ಧಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅಂಥದ್ದೇ ನಗುವಿಗಾಗಿ ಶಸ್ತ್ರ ಚಿಕಿತ್ಸೆಗೊಳಗಾದ ಯುವಕ, ಅರಿವಳಿಕೆಯಿಂದಾಗಿ ತನ್ನ ಪ್ರಾಣವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದದ್ದು ದುರಂತ.