- ಸೋಮೇಶ್ವರ ಬೀಚ್ನಲ್ಲಿ ಅನೈತಿಕ ಪೊಲೀಸ್ ಗಿರಿ ಪ್ರಕರಣದ ಹಿನ್ನೆಲೆ
- ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಿರುವ ಗೃಹ ಸಚಿವ ಜಿ ಪರಮೇಶ್ವರ್
ಮಂಗಳೂರಿನ ಸೋಮೇಶ್ವರ ಬೀಚ್ನಲ್ಲಿ ನಡೆದ ಅನೈತಿಕ ಪೊಲೀಸ್ಗಿರಿಯಲ್ಲಿ ಆರಕ್ಷಕರ ವಿರುದ್ದವೇ ಸಂತ್ರಸ್ಥರು ದೂರು ದಾಖಲಿಸಿದ್ದಾರೆ. ಈ ವಿಚಾರದ ಹಿನ್ನೆಲೆಯಲ್ಲಿ ಗೃಹ ಸಚಿವ ಪರಮೇಶ್ವರ್ ಇಂದು (ಜೂನ್ 6) ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಪ್ರಮುಖರೊಂದಿಗೆ ಸಭೆ ನಡೆಸಲಿದ್ದಾರೆ.
ಗೃಹ ಸಚಿವರ ಭೇಟಿ ಈಗ ಕುತೂಹಲ ಕೆರಳಿಸಿದೆ. ಪೊಲೀಸ್ ಅಧಿಕಾರಿಗಳೊಂದಿಗೆ ಮೊದಲ ಸಭೆ ನಡೆಸಿದ ಡಾ.ಜಿ. ಪರಮೇಶ್ವರ್, ನಾಗರಿಕರೊಂದಿಗೆ ಪೊಲೀಸರು ಸೌಜನ್ಯ ಹಾಗೂ ಗೌರವಯುತವಾಗಿ ನಡೆದುಕೊಳ್ಳಬೇಕು ಎಂದಿದ್ದರು. ಜನರಿಗೆ ಕೊಂಚ ತೊಂದರೆಯಾದರೂ ಸಹಿಸುವುದಿಲ್ಲ ಎಂದಿದ್ದ ಅವರು, ಹಾಗೆಯೇ ನಾಗರಿಕರೂ ಪೊಲೀಸ್ ಜೊತೆ ಸಹಕಾರಯುತವಾದ ಬಾಂಧವ್ಯ ಹೊಂದಬೇಕೆಂದು ಹೇಳಿದ್ದರು.
ಈಗ ಅವರದ್ದೇ ಇಲಾಖೆ ಅಧಿಕಾರಿಗಳ ಮೇಲೆ ದಾಖಲಾಗಿರುವ ಅನೈತಿಕ ಪೊಲೀಸ್ ಗಿರಿ ವಿಚಾರದ ಬಗ್ಗೆ ಗೃಹ ಸಚಿವರು ಯಾವ ಪ್ರತಿಕ್ರಿಯೆ ನೀಡುತ್ತಾರೆನ್ನುವುದು ಈಗ ಕುತೂಹಲ ಹುಟ್ಟಿಸಿದೆ.
ಇಂದಿನ ತಮ್ಮ ಎರಡು ಜಿಲ್ಲಾ ಪ್ರವಾಸಗಳಲ್ಲಿ ಪಶ್ಚಿಮ ವಲಯದ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಲಿರುವ ಪರಮೇಶ್ವರ್, ಇಲ್ಲಿನ ಕಾನೂನು ಸುವ್ಯವಸ್ಥೆ ವಿಚಾರವಾಗಿ ಮಾಹಿತಿ ಪಡೆದುಕೊಳ್ಳಲಿದ್ದಾರೆ.
ಈ ಹಿಂದೆ ಜಿಲ್ಲೆಯಲ್ಲಿ ನಡೆದಿದ್ದ ಕೋಮು ಹತ್ಯೆಗಳ ಬಗ್ಗೆ ಮಾಹಿತಿ, ಹಾಗೂ ಹತ್ಯೆಗೀಡಾದ ಫಾಜಿಲ್, ಜಲೀಲ್, ಮಸೂದ್ ಹತ್ಯೆ ಮರು ತನಿಖೆಗೆ ಅವರ ಕುಟುಂಬ ವರ್ಗ ಸಿಎಂ ಅವರನ್ನು ಒತ್ತಾಯಿಸಿರುವುದು, ಗೃಹ ಸಚಿವರ ಭೇಟಿ ವೇಳೆ ಚರ್ಚೆಗೆ ಬರುವ ಸಾಧ್ಯತೆ ಇದೆ.
ಅನೈತಿಕ ಪೊಲೀಸ್ಗಿರಿ ಆರೋಪ
ಮಂಗಳೂರಿನ ಸೋಮೇಶ್ವರ್ ಬೀಚ್ನಲ್ಲಿ ಮೂವರು ಯುವತಿಯರು ಹಾಗೂ ಮೂವರು ಯುವಕರು ಜೊತೆಯಲ್ಲಿದ್ದ ಸಂದರ್ಭದಲ್ಲಿ ಸ್ಥಳೀಯ ಕೆಲ ಯುವಕರು ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿತ್ತು. ದೂರಿನನ್ವಯ ಹಲ್ಲೆ ನಡೆಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಈ ಸುದ್ದಿ ಓದಿದ್ದೀರಾ?: ನೂತನ ದಾಖಲೆ ಹೊಸ್ತಿಲಿನಲ್ಲಿ ಸಿಎಂ ಸಿದ್ದರಾಮಯ್ಯ; ಜುಲೈ 3ರಿಂದ ಬಜೆಟ್ ಅಧಿವೇಶನ
ಆದರೆ ಇದಾದ ಕೆಲವೇ ದಿನಗಳಲ್ಲಿ ಸಂತ್ರಸ್ತ ಯುವಕರ ಮೇಲೆ ಪೊಲೀಸರೇ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಂಗಳೂರು ಕಮಿಷನರ್ ಕುಲದೀಪ್ ಜೈನ್ ಅವರಿಗೆ ಯುವಕನ ಸಂಬಂಧಿ ದೂರು ನೀಡಿದ್ದಾರೆ.
ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಕಮಿಷನರ್, ಕಾನೂನು ಸುವ್ಯವಸ್ಥೆ ಡಿಸಿಪಿ ಅಂನ್ಶುಕುಮಾರ್ ಅವರಿಗೆ ತನಿಖೆ ನಡೆಸಿ ವರದಿ ನೀಡಲು ಸೂಚನೆ ನೀಡಿದ್ದಾರೆ. ಇತ್ತ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಿರುವ ಗೃಹ ಸಚಿವರು, ನೈತಿಕ ಪೊಲೀಸ್ ಗಿರಿ ಕಡಿವಾಣ ಹಾಕುವ ನಿಟ್ಟಿನಲ್ಲೂ ಸೂಚನೆ ನೀಡುವ ಸಾಧ್ಯತೆ ಹೆಚ್ಚಿದೆ.