- ಯೋಜನೆ ವಿಳಂಬಕ್ಕೆ ಕೇಂದ್ರ ಸರ್ಕಾರದ ನೀತಿ ಕಾರಣ: ಆರೋಪ
- ಛತ್ತಿಸ್ಗಢ, ಪಂಜಾಬ್ ಸರ್ಕಾರ ಅಕ್ಕಿ ಕೊಡಲು ಮುಂದೆ ಬಂದಿವೆ
ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಅನ್ನ ಭಾಗ್ಯ ಯೋಜನೆ ಮತ್ತೊಂದು ತಿಂಗಳು ವಿಳಂಬವಾಗಲಿದೆ. ಈ ಬಗ್ಗೆ ಸ್ವತಃ ಆಹಾರ ಸಚಿವ ಕೆ ಎಚ್ ಮುನಿಯಪ್ಪ ಸ್ಪಷ್ಟನೆ ನೀಡಿದ್ದು, ಜುಲೈ 1ರ ಬದಲು ಆಗಸ್ಟ್ 1ರಿಂದ ‘ಅನ್ನ ಭಾಗ್ಯ’ ಜಾರಿಯಾಗಲಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಜುಲೈ 1ರಿಂದ ಅನ್ನ ಭಾಗ್ಯ ಯೋಜನೆ ಪ್ರಾರಂಭಿಸುವುದಾಗಿ ಹೇಳಿದ್ದೆವು. ಆದರೆ, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಭಾರತೀಯ ಆಹಾರ ನಿಗಮ (ಎಫ್ಸಿಐ) ರಾಜ್ಯಕ್ಕೆ ಅಗತ್ಯವಿರುವ ಅಕ್ಕಿ ಪೂರೈಕೆ ಮಾಡಲು ಹಿಂದೆ ಸರಿದಿದೆ. ಈ ಕಾರಣದಿಂದ ವಿಳಂಬವಾಗಿದೆ” ಎಂದರು.
“ಬೇರೆ ರಾಜ್ಯಗಳಿಂದ ಅಕ್ಕಿ ಪಡೆಯಲು ಪ್ರಯತ್ನಿಸುತ್ತಿದ್ದೇವೆ. ಈಗಾಗಲೇ ಛತ್ತಿಸ್ಗಢ ಮತ್ತು ಪಂಜಾಬ್ ಸರ್ಕಾರ ಅಕ್ಕಿ ಕೊಡಲು ಮುಂದೆ ಬಂದಿವೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ” ಎಂದು ಹೇಳಿದರು.
“ಅನ್ನ ಭಾಗ್ಯ ಯೋಜನೆ ಜಾರಿಯಲ್ಲಿ ಅನೇಕ ತೊಡಕುಗಳು ಉಂಟಾಗಿವೆ. ಅಕ್ಕಿ ಕೊಡುವುದಾಗಿ ಎಫ್ಸಿಐ ಹೇಳಿ ಈಗ ಹಿಂದೆ ಸರಿದಿದೆ. ಇದರಿಂದ ನಾವು ಬೇರೆ ರಾಜ್ಯಗಳತ್ತ ಮುಖ ಮಾಡಬೇಕಿದೆ. ಕೆಲವು ರಾಜ್ಯಗಳಲ್ಲಿ ಅಕ್ಕಿ ಸ್ಟಾಕ್ ಇಲ್ಲ. ಇನ್ನೂ ಕೆಲವು ರಾಜ್ಯಗಳಲ್ಲಿ ನಮ್ಮ ಅಗತ್ಯಕ್ಕೆ ತಕ್ಕಂತೆ ಅಕ್ಕಿ ಸಿಗುತ್ತಿಲ್ಲ” ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಹ್ಯಾಕ್ ವಿಚಾರ | ಕಾಂಗ್ರೆಸ್ನವರು ಹುಚ್ಚುಚ್ಚು ಹೇಳಿಕೆ ನೀಡುತ್ತಿದ್ದಾರೆ: ಸಿ.ಟಿ ರವಿ
ಛತ್ತೀಸ್ ಗಢ ಸರ್ಕಾರ ಕೇವಲ ಒಂದು ತಿಂಗಳಿಗೆ ಆಗುವಷ್ಟು ಅಕ್ಕಿ ಕೊಡಲು ಮುಂದೆ ಬಂದಿದೆ. ಅದು ಕೂಡ 1.4 ಮಟ್ರಿಕ್ ಟನ್ ಮಾತ್ರ. ಇದೂ ಕೂಡ ಸಾಲುವುದಿಲ್ಲ. ಬೇರೆ ಬೇರೆ ರಾಜ್ಯಗಳ ಆಹಾರ ಸಚಿವರ ಜೊತೆಗೆ ವಿವಿಧ ಮಟ್ಟದ ಸಭೆಗಳು ಜರುಗಿವೆ. ಈ ಸಭೆಗಳು ಫಲಪ್ರದವಾಗಿ, ನಮ್ಮಿಂದ ಅವರಿಗೆ ಹಣ ಸಂದಾಯವಾಗಿ, ಅಕ್ಕಿ ಬರಲು ವಿಳಂಬವಾಗಲಿದೆ. ಹೀಗಾಗಿ ನಾವು ಆಗಸ್ಟ್ 1ರಿಂದ ಅನ್ನ ಭಾಗ್ಯ ಜಾರಿ ಮಾಡುತ್ತೇವೆ” ಎಂದರು.