ಎಸ್ಬಿಐ ವಿಮಾ ಕಂಪನಿಯು ಗ್ರಾಹಕರಿಗೆ ಸೇವೆ ಒದಗಿಸುವಲ್ಲಿ ವಿಫಲವಾಗಿದ್ದು, ಸಂತ್ರಸ್ತ ಗ್ರಾಹಕರಿಗೆ 25,000 ರೂಪಾಯಿ ಪರಿಹಾರ ನೀಡುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಕುಂದುಕೊರತೆಗಳ ಪರಿಹಾರ ವೇದಿಕೆ ಆದೇಶಿಸಿದೆ.
ಹುಬ್ಬಳ್ಳಿಯ ನಿವಾಸಿ ರಾಜೇಂದ್ರ ಪತ್ತಾರ್ ಎಂಬುವರು ಎಸ್ಬಿಐ ಮೆಡಿಕ್ಲೈಮ್ ಹೆಲ್ತ್ ಪ್ಲಸ್ ವಿಮಾ ಪಾಲಿಸಿಯನ್ನು ಖರೀದಿಸಿದ್ದರು ಮತ್ತು ವಾರ್ಷಿಕ 10,502 ರೂ. ಪಾವತಿಸುತ್ತಿದ್ದರು. 2021ರಲ್ಲಿ ಮೂತ್ರನಾಳದ ಸಮಸ್ಯೆ ತುತ್ತಾಗಿದ್ದ ಅವರು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆ ಬಿಲ್ 51,350 ರೂ. ಪಾವತಿಸಲು ವಿಮೆ ಕ್ಲೇಮ್ಗೆ ಅರ್ಜಿ ಸಲ್ಲಿಸಿದ್ದರು.
ಪಾಲಿಸಿ ಮಾಡಿಸುವಾಗ ತಮ್ಮ ಅನಾರೋಗ್ಯದ ಬಗ್ಗೆ ರೇಜೇಂದ್ರ ಅವರು ಅರ್ಜಿಯಲ್ಲಿ ಉಲ್ಲೇಖಿಸಿಲ್ಲ ಎಂದು ಎಸ್ಬಿಐ ವಿಮಾ ಕಂಪನಿ ಹಣ ಮಂಜೂರು ಮಾಡಲು ನಿರಾಕರಿಸಿತ್ತು. ಬಳಿಕ, ರಾಜೇಂದ್ರ ಅವರು ಕಂಪನಿಯ ವಿರುದ್ಧ ಜಿಲ್ಲಾ ಗ್ರಾಹಕರ ಕುಂದುಕೊರತೆಗಳ ಪರಿಹಾರ ವೇದಿಕೆಗೆ ದೂರು ಸಲ್ಲಿಸಿದರು. ಪಾಲಿಸಿಯು ಸಕ್ರಿಯವಾಗಿದ್ದಾಗ ಸರಿಯಾದ ಕಾರಣವಿಲ್ಲದೆ ತಮ್ಮ ಹಕ್ಕನ್ನು ಕಂಪನಿ ತಿರಸ್ಕರಿಸಿದೆ ಎಂದು ದೂರಿದ್ದರು.
ಅರ್ಜಿದಾರರು ಮತ್ತು ಕಂಪನಿಯ ವಾದ-ಪ್ರತಿವಾದವನ್ನು ಆಲಿಸಿದ ವೇದಿಕೆಯ ಅಧ್ಯಕ್ಷ ಈಶಪ್ಪ ಭೂತೆ ಮತ್ತು ಸದಸ್ಯರಾದ ವಿಶಾಲಾಕ್ಷಿ ಬಿಳಿಶೆಟ್ಟಿ ಮತ್ತು ಪ್ರಭು ಹಿರೇಮಠ. “ರಾಜೇಂದ್ರ ಅವರ ವಿಮೆ ಕ್ಲೈಮ್ ಅರ್ಜಿಯನ್ನು ತಿರಸ್ಕರಿಸಲು ಕಂಪನಿಯು ನೀಡಿದ ಕಾರಣವನ್ನು ಸಮರ್ಥಿಸಲು ಎಸ್ಬಿಐ ವಿಮಾ ಕಂಪನಿ ವಿಫಲವಾಗಿದೆ. ಆಸ್ಪತ್ರೆಯ ಬಿಲ್ 51,350 ರೂ. ಜೊತೆಗೆ 25,000 ರೂ. ಪರಿಹಾರ ಮತ್ತು 10,000 ರೂ. ನ್ಯಾಯಾಲಯದ ವೆಚ್ಚವನ್ನು ದೂರುದಾರರಿಗೆ ಕಂಪನಿ ಪಾವತಿಸಬೇಕು” ಎಂದು ಆದೇಶಿದ್ದಾರೆ.