ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳಲ್ಲಿ ಸ್ಪರ್ಧೆಮಾಡಲಿದ್ದು, ಆಸಕ್ತ ಚುನಾವಣಾ ಸ್ಪರ್ಧಾಕಾಂಕ್ಷಿಗಳು ಸಂದರ್ಶನಕ್ಕೆ ಹಾಜರಾಗಬೇಕೆಂದು ಬೀದರ್ ಜಿಲ್ಲಾ ಕೆಆರ್ಎಸ್ ಪಕ್ಷ ತಿಳಿಸಿದೆ.
ಬೀದರ್ ನಗರದ ಪಕ್ಷದ ಜಿಲ್ಲಾ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಜಿಲ್ಲಾಧ್ಯಕ್ಷ ಹಣಮಂತ ಮಟ್ಟೆ ಮಾತನಾಡಿ, “ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಉತ್ತಮ ಹಾಗೂ ಜನಪರ ಕಾಳಜಿ ಉಳ್ಳ ಪ್ರಾಮಾಣಿಕ ರಾಜಕಾರಣಕ್ಕೆ ರಾಜ್ಯದಲ್ಲಿರುವ ಏಕೈಕ ವೇದಿಕೆಯಾಗಿದೆ. ರಾಜಕೀಯ ಪಕ್ಷಗಳು ಕೇವಲ ಭ್ರಷ್ಟಾಚಾರ, ದುರಾಚಾರ ಹಾಗೂ ಸುಳ್ಳು ಭರವಸೆಗಳಿಂದ ಕೂಡಿರುವುದು ಎಂಬ ಬಲವಾದ ನಂಬಿಕೆ ಬೇರೂರಿರುವ ಕಾಲಘಟ್ಟದಲ್ಲಿ, ನಿರಂತರವಾಗಿ ತನ್ನ ಧ್ಯೇಯ ಮತ್ತು ಸಿದ್ದಾಂತಗಳಿಗೆ ಬದ್ದವಾಗಿ, ಅದರಂತೆ ನಡೆಯುತ್ತಿರುವ ಪಕ್ಷ ಕೇವಲ ಕೆ.ಆರ್.ಎಸ್. ಪಕ್ಷ ಮಾತ್ರ” ಎಂದು ಹೇಳಿದರು.
“ದೇಶದಲ್ಲಿ ಇಂದು ವಿಚಿತ್ರ ಹಾಗೂ ಸಂಧಿಗ್ಧ ಸಂದರ್ಭದಲ್ಲಿದ್ದು, ಪ್ರಾಮಾಣಿಕ ಹಾಗೂ ಜನಪರ ರಾಜಕಾರಣವು ಎಂದಿಗಿಂತ ತೀವ್ರವಾಗಿ ಅಗತ್ಯವಾಗಿದೆ. ಇಂತಹ ಸಂದರ್ಭದಲ್ಲಿ ಪ್ರಾಮಾಣಿಕರು, ಕನ್ನಡಪರ ಕಾಳಜಿ, ರಾಜ್ಯದ ಅಭಿವೃದ್ಧಿ ಬಗ್ಗೆ ಯೋಚಿಸುವ, ಅಕ್ರಮ ನಡೆಸದೆ ಚುನಾವಣೆ ಎದುರಿಸುವ, ದೇಣಿಗೆ ಮೂಲಕ ಚುನಾವಣಾ ಖರ್ಚು ವೆಚ್ವನ್ನು ಎದುರಿಸುವ ಮನಸ್ಥಿತಿ ಹೊಂದಿದವರು, ಜನಪರ ಕಾಳಜಿ ಉಳ್ಳವರು, ಪ್ರಾದೇಶಿಕತೆ, ಒಕ್ಕೂಟ ವ್ಯವಸ್ಥೆಯಲ್ಲಿ ಹಾಗೂ ಮುಖ್ಯವಾಗಿ ದೇಶದ ಸಂವಿಧಾನದಲ್ಲಿ ನಂಬಿಕೆ ಉಳ್ಳವರು ಕೆಆರ್ಎಸ್ ಪಕ್ಷ ಸೇರಿ, ರಾಜ್ಯದ ಅಭಿವೃದ್ಧಿಗೆ ಸಹಕರಿಸಬೇಕು” ಎಂದರು.
ಜ.6 ಮತ್ತು 7 ರಂದು ಬೆಂಗಳೂರಿನ ರಾಜಾಜಿ ನಗರದ ಪಕ್ಷದ ಕೇಂದ್ರ ಕಛೇರಿಯಲ್ಲಿ ಸಂದರ್ಶನ ನಡೆಯಲಿದೆ. ಸಂದರ್ಶನದ ನಂತರ ರಾಜ್ಯ ಸಮಿತಿಯು ಸಂಭಾವ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಸಂಭಾವ್ಯ ಅಭ್ಯರ್ಥಿಗಳು ಎಂದು ಘೋಷಿಸುತ್ತದೆ. ಆದ್ದರಿಂದ ಬೀದರ ಜಿಲ್ಲೆಯಿಂದ ಆಸಕ್ತಿ ಉಳ್ಳವರು ನಿಗದಿಪಡಿಸಿದ ದಿನಾಂಕದಂದು ಸದರಿ ಕಛೇರಿಗೆ ಹಾಜರಾಗುವಂತೆ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕೆಆರ್ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ತುಕಾರಾಮ ಗೌರೆ ಸೇರಿದಂತೆ ಇತರರು ಇದ್ದರು.