- ಪಕ್ಷದಲ್ಲಿ ಬದಲಾವಣೆ ಬಯಸುವ ಮೋದಿ ತಾವೂ ಅದಕ್ಕೆ ಒಳಪಡುತ್ತಾರಾ?
- ಜನಮನ್ನಣೆ ಇರುವವರೆಗೂ ರಾಜಕೀಯದಲ್ಲಿರಬೇಕು ಎಂದ ಜಗದೀಶ್ ಶೆಟ್ಟರ್
ಇನ್ನೊಬ್ಬರನ್ನು ಅಧಿಕಾರದ ಆಸೆಯಿಂದ ಬೇರೆ ಕಡೆ ಹೋದರು ಎನ್ನುವ ನರೇಂದ್ರ ಮೋದಿ ಅವರು, ತಾವೂ ಅಧಿಕಾರದಿಂದ ದೂರ ಸರಿಯುತ್ತಾರಾ? ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರಶ್ನಿಸಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ನರೇಂದ್ರ ಮೋದಿ ಅವರು ನಾಲ್ಕು ಬಾರಿ ಸಿಎಂ ಎರಡು ಬಾರಿ ಪ್ರಧಾನಿಯಾಗಿದ್ದಾರೆ. ಅವರು ಈಗ ರಾಜಕೀಯ ಬಿಡ್ತಾರಾ..? ಅದು ಸಾಧ್ಯವಿಲ್ಲ ಇನ್ನೊಮ್ಮೆ ಪ್ರಧಾನಿಯಾಗಲು ಪ್ರಯತ್ನ ಮಾಡುತ್ತಾರೆ. ಆದರೆ ಬೇರೆಯವರು ಅಧಿಕಾರಕ್ಕಾಗಿ ಅನ್ಯ ಪಕ್ಷಕ್ಕೆ ಹೋಗುತ್ತಾರೆಂದು ಪಕ್ಷ ಬಿಟ್ಟವರ ಬಗ್ಗೆ ಮೋದಿ ಹೇಳುತ್ತಾರೆ ಎಂದು ಶೆಟ್ಟರ್ ಪ್ರಧಾನಿಗಳನ್ನು ಕುಟುಕಿದರು.
ನಾನು ಏನೋ ಆಗಬೇಕೆಂಬ ಆಸೆಯಿಂದ ಕಾಂಗ್ರೆಸ್ ಸೇರಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಬಿಜೆಪಿಯವರು ಮಾಡಿದ ಮೋಸದಿಂದ ಕಾಂಗ್ರೆಸ್ ಸೇರಿದೆ. ಶಾಸಕನಾದರೆ ಮನಸ್ಸಿಗೆ ಸಮಾಧಾನ ಆಗುತ್ತದೆ ಎಂದು ಪಕ್ಷ ಬದಲಾಯಿಸಿದೆ. ಇದೇ ವಿಚಾರವನ್ನು ಬಿಜೆಪಿಯವರಿಗೆ ಹೇಳಿದ್ದೆ. ಆದರೆ ಅವರಾರೂ ಇದಕ್ಕೆ ಗಮನ ಕೊಡದೆ ಅಪಮಾನಿಸಿದರು ಎಂದು ಶೆಟ್ಟರ್ ಹೇಳಿದರು.
ರಾಜಕೀಯ ಎನ್ನುವುದು ಜನರು ನೀಡುವ ಆಶೀರ್ವಾದ. ಹೀಗಾಗಿ ಜನಾಶೀರ್ವಾದ ಇರುವವರೆಗೂ ರಾಜಕೀಯದಲ್ಲಿ ಇರಬೇಕು ಎಂದು ಜಗದೀಶ್ ಶೆಟ್ಟರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?:ನಾವು ಸ್ಪಷ್ಟ ಬಹುಮತ ಪಡೆಯುತ್ತೇವೆ; ಈ ಮಾತಿಗೆ ನಾನು ಈಗಲೂ ಬದ್ಧ : ಸಿಎಂ ಬೊಮ್ಮಾಯಿ
ಬಿಜೆಪಿ ಹಾಗೂ ಸಿಎಂ ಬೊಮ್ಮಾಯಿ ವಿರುದ್ದ ವಾಗ್ದಾಳಿ ನಡೆಸಿದ ಶೆಟ್ಟರ್, ಉತ್ತರ ಕರ್ನಾಟಕದವರೇ ಸಿಎಂ ಆದರೂ ಅಭಿವೃದ್ಧಿ ಮಾಡಿಲ್ಲ. ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ ಜನರಿಗೆ ಬೇಸರ ಮೂಡಿಸಿದೆ. ಸರ್ಕಾರದ ಯೋಜನೆಗಳು ಜನರಿಗೆ ತಲುಪಲಿಲ್ಲ. ಮೀಸಲಾತಿಯನ್ನೂ ಸಮರ್ಪಕವಾಗಿ ಅನುಷ್ಠಾನ ಮಾಡಲಿಲ್ಲ, ಈ ಎಲ್ಲ ಕಾರಣಗಳಿಂದ ಜನ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು ಎಂದು ಶೆಟ್ಟರ್ ತಿಳಿಸಿದರು.