ಸೋಮವಾರ ಜೈಪುರದಿಂದ ಮುಂಬೈಗೆ ಹೋಗುವ ರೈಲಿನಲ್ಲಿ ರೈಲ್ವೆ ರಕ್ಷಣಾ ಪಡೆಯ (ಆರ್ಪಿಎಫ್) ನೌಕರನೊಬ್ಬ ನಾಲ್ವರು ಅಮಾಯಕರನ್ನು ಗುಂಡು ಹಾರಿಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಅತ್ಯಂತ ಖಂಡನಿಯ. ಇಂತಹ ಕೃತ್ಯಗಳಿಗೆ ದೇಶದಲ್ಲಿ ಹರಡುತ್ತಿರುವ ದ್ವೇಷ ರಾಜಕಾರಣವೇ ಕಾರಣ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ, ಅಡ್ವೋಕೇಟ್ ತಾಹೇರ್ ಹುಸೇನ್ ಆರೋಪಿಸಿದ್ದಾರೆ.
ಘಟನೆಯನ್ನು ಖಂಡಿಸಿ ಪತ್ರಿಕಾ ಹೇಳಿಕೆ ನೀಡಿರುವ ಅವರು, “ಅಧಿಕಾರದ ಅಸೆಗೆ ಜನರ ಮಧ್ಯ ದ್ವೇಷ ಹರಡುವ ಕೆಲಸ ಬಹಳ ವೇಗದಿಂದ ನಡೆಯುತ್ತಿವೆ. ರಾಜಕೀಯ ಪಕ್ಷಗಳು ಅದರಲ್ಲೂ ಬಿಜೆಪಿ ಸುಳ್ಳು ಸುದ್ದಿಗಳು ಮತ್ತು ಪರಸ್ಪರ ದ್ವೇಷ ಹುಟ್ಟಿಸುವ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳ ಮುಖಾಂತರ ವ್ಯಾಪಾಕವಾಗಿ ಹಬ್ಬಿಸುತ್ತಿದೆ. ಅದರಿಂದ ಪ್ರಚೋದಿತರಾದ ಕೆಲ ಗುಂಪುಗಳು ದ್ವೇಷದ ಅಮಲಿನಲ್ಲಿ ಅಮಾಯಕರನ್ನು ಹತ್ಯೆ ಮಾಡುವುದನ್ನು ರೂಢಿ ಮಾಡಿಕೊಂಡಿವೆ. ಮಣಿಪುರ, ಮಧ್ಯಪ್ರದೇಶ, ಹರಿಯಾಣ ರಾಜ್ಯಗಳಲ್ಲಿ ಇದೇ ದ್ವೇಷದ ಪರಿಣಾಮ ಗಲಭೆಗಳು ನಡೆಯುತ್ತಲೇ ಇವೆ. ಒಂದೇ ಕೋಮಿನ ಜನರನ್ನು ಗುರಿಯಾಗಿಸಲಾಗುತ್ತಿದೆ” ಎಂದು ಕಿಡಿಕಾರಿದ್ದಾರೆ.
“ದೇಶದಲ್ಲಿ ಇಷ್ಟೆಲ್ಲ ಅನಾಹುತಗಳು ನಡೆಯುತ್ತಿದ್ದರೂ, ಪ್ರಧಾನಿ ಮಾತ್ರ ತನ್ನ ಮೌನ ಮುರಿಯುತ್ತಿಲ್ಲ. ಇದರಿಂದ ದ್ವೇಷ ಹರಡಿಸುವವರಿಗೆ ಇನ್ನಷ್ಟು ಧೈರ್ಯ ಬಂದಹಾಗೆ ಕಾಣುತ್ತಿದೆ” ಎಂದು ಹೇಳುತ್ತಿದ್ದಾರೆ.
“ಸೋಮವಾರ ಜೈಪುರ-ಮುಂಬೈ ಎಕ್ಸ್ಪ್ರೆಸ್ನಲ್ಲಿ ನಡೆದ ಘಟನೆಯಲ್ಲಿ ಜನರ ಸುರಕ್ಷತೆಯ ಹೊಣೆಗಾರಿಕೆ ಹೊತ್ತಿರುವ ಒಬ್ಬ ಪೊಲೀಸ್ ಪೇದೆ, ಒಂದು ಸಮುದಾಯಕ್ಕೆ ಸೇರಿದವರನ್ನು ಹುಡುಕಿ ಕೊಂದಿರುವುದು ಅಪಾಯಕಾರಿ ಬೆಳವಣಿಗೆ. ‘ದೇಶದಲ್ಲಿ ಇರಬೇಕಾದರೆ ಮೋದಿ ಮತ್ತು ಯೋಗಿಗೆ ಮತ ಹಾಕಬೇಕು’ ಎಂದು ಆ ಪೇದೆ ಧಮ್ಕಿ ಹಾಕುತ್ತಾ, ಕೊಲೆ ಮಾಡಿದ್ದಾನೆ. ಇದು ದ್ವೇಷ ರಾಜಕಾರಣವನ್ನು ಸ್ಪಷ್ಟವಾಗಿ ತೋರಿಸುತ್ತದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.