ಲೋಕಸಭಾ ಚುನಾವಣೆಗಾಗಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಹಣಿಯಬೇಕೆಂಬ ಉದ್ದೇಶ ಹೊಂದಿರುವ ಎರಡೂ ಪಕ್ಷಗಳಿಗೆ, ಮೈತ್ರಿಯೇ ಕಗ್ಗಂಟಾಗಿ ಪರಿಣಮಿಸಿದೆ. ಹಳೇ ಮೈಸೂರು ಭಾಗದಲ್ಲಿ ಕ್ಷೇತ್ರ ಹಂಚಿಕೆಯ ಸವಾಲು ಎದುರಾಗಿದೆ. ಈ ನಡುವೆ, ಮೈತ್ರಿಯ ಕಾರಣಕ್ಕಾಗಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಟಿಕೆಟ್ ಕಳೆದುಕೊಳ್ಳುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.
ಹೆಚ್ಚಾಗಿ ಹಳೇ ಮೈಸೂರು ಭಾಗದಲ್ಲಿಯೇ ತನ್ನ ಪ್ರಾಬಲ್ಯ ಹೊಂದಿರುವ ಜೆಡಿಎಸ್ ಮಂಡ್ಯ ಮತ್ತು ಮೈಸೂರು ಲೋಕಸಭಾ ಕ್ಷೇತ್ರಗಳಿಗಾಗಿ ಪಟ್ಟು ಹಿಡಿದಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಈ ಭಾಗದ ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಕ್ಷೇತ್ರಗಳನ್ನು ತಮಗೆ ಬಿಟ್ಟುಕೊಡುವಂತೆ ಬಿಜೆಪಿ ಎದುರು ಪ್ರಸ್ತಾಪ ಇಡಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಇವುಗಳಲ್ಲಿ ಮಂಡ್ಯ ಮತ್ತು ಮೈಸೂರು ಕ್ಷೇತ್ರವನ್ನು ಬಿಟ್ಟುಕೊಡುವುದು ಬಿಜೆಪಿಗೆ ಸವಾಲಾಗಿದೆ. ಬಿಜೆಪಿಗೆ ಬೆಂಬಲ ಘೋಷಿಸಿರುವ ಸಂಸದೆ ಸುಮಲತಾ ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಮಂಡ್ಯದಲ್ಲಿ ಕಣಕ್ಕಿಳಿಯಲು ಮುಂದಾಗಿದ್ದಾರೆ. ಯಾವ ಕಾರಣಕ್ಕೂ ಮಂಡ್ಯ ಬಿಟ್ಟು ಹೋಗುವುದಿಲ್ಲ ಎಂದು ಅವರು ಘಂಟಾಘೋಷವಾಗಿ ಹೇಳಿದ್ದಾರೆ.
ಇನ್ನು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ 2014 ಮತ್ತು 2019ರಲ್ಲಿ ಬಿಜೆಪಿಯಿಂದ ಗೆದ್ದಿರುವ ಸಂಸದ ಪ್ರತಾಪ್ ಸಿಂಹ ಅವರಿಗೂ ಈಗ ಕ್ಷೇತ್ರ ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಮೈಸೂರು-ಕೊಡಗು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟರೆ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪುವುದು ಖಚಿತವಾಗುತ್ತದೆ.
ಒಕ್ಕಲಿಗರ ಪ್ರಾಬಲ್ಯ ಹೆಚ್ಚಿರುವ ಮೈಸೂರು ಲೋಕಸಭಾ ಕ್ಷೇತ್ರವನ್ನು ಕೇಳುತ್ತಿರುವ ಜೆಡಿಎಸ್, ಒಕ್ಕಲಿಗ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಕ್ಷೇತ್ರದಲ್ಲಿ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿದೆ. ಮಂಡ್ಯದಲ್ಲಿ ಕಳೆದ ಚುನಾವಣೆಯಲ್ಲಿ ಸುಮಲತಾ ವಿರುದ್ಧ ತಮ್ಮ ಮಗನನ್ನು ಕಣಕ್ಕಿಳಿಸಿ ಎಚ್.ಡಿ ಕುಮಾರಸ್ವಾಮಿ ನೇರ ಜಿದ್ದಾಜಿದ್ದಿ ನಡೆಸಿದ್ದರು. ಈಗ, ಸುಮಲತಾಗಾಗಿ ಮಂಡ್ಯವನ್ನು ಬಿಟ್ಟುಕೊಟ್ಟರೆ, ಮತ್ತೆ ಅವರ ಮುಂದೆ ಸೋತಂತಾಗುತ್ತದೆ ಎಂಬ ಹಟ ಕೂಡ ಎಚ್.ಡಿ ಕುಮಾರಸ್ವಾಮಿ ಅವರಲ್ಲಿದೆ ಎಂದು ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ?: ಈಗಲಾದರೂ ಚರ್ಚೆಗೆ ಬರುತ್ತದೆಯೇ ಪ್ರಾದೇಶಿಕ ಅಸಮಾನತೆ ಕೂಗು
ಮಂಡ್ಯವನ್ನು ಬಿಡುವುದೇ ಇಲ್ಲ ಎನ್ನುತ್ತಿರುವ ಸುಮಲತಾ ಅವರ ಕಾರಣಕ್ಕಾಗಿ ಬಿಜೆಪಿಗರು ಮನವೊಲಿಸಿ ಮಂಡ್ಯ ಕ್ಷೇತ್ರ ಪಡೆದುಕೊಂಡರೆ, ಮೈಸೂರು-ಕೊಡಗು ಕ್ಷೇತ್ರಕ್ಕಾಗಿ ಜೆಡಿಎಸ್ ಬೇಡಿಕೆ ಮತ್ತಷ್ಟು ಹೆಚ್ಚುತ್ತದೆ. ಆ ಕ್ಷೇತ್ರವನ್ನು ಬಿಟ್ಟುಕೊಡಲೇಬೇಕಾದ ಅನಿವಾರ್ಯತೆಯೂ ಉಂಟಾಗುತ್ತದೆ.
ಮೈಸೂರು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟರೆ ಪ್ರತಾಪ್ ಸಿಂಹ ಅವರು ನಿರುದ್ಯೋಗಿ ಆಗುವುದು ಖಚಿತ. ಆದರೂ, ಮೈಸೂರು ಕ್ಷೇತ್ರದಲ್ಲಿ ತಮಗೇ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸದಲ್ಲಿ ಪ್ರತಾಪ್ ಸಿಂಹ ಇದ್ದಾರೆ. ಈ ಬಾರಿಯೂ 2 ಲಕ್ಷ ಮತಗಳ ಅಂತರದಿಂದ ತಾವೇ ಗೆಲ್ಲುತ್ತೇವೆ ಎಂಬ ಉತ್ಸಾಹವೂ ಅವರಲ್ಲಿದೆ. ರಾಜಕೀಯ ಲೆಕ್ಕಾಚಾರದಲ್ಲಿ ಏನಾಗಬಹುದು ಎಂಬುದು ಶೀಘ್ರದಲ್ಲೇ ತಿಳಿಯಲಿದೆ.