ಭಾರತದ ಪ್ರಖ್ಯಾತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿರುವ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್ಯು) ವಿದ್ಯಾರ್ಥಿ ಘಟಕದ ಚುನಾವಣೆ ನಡೆದಿದ್ದು, ಮೂರು ದಶಕಗಳ ಬಳಿಕ ದಲಿತ ವಿದ್ಯಾರ್ಥಿಗೆ ಅಧ್ಯಕ್ಷಗಿರಿ ಲಭಿಸಿದೆ.
ಚುನಾವಣೆಯಲ್ಲಿ ಎಡ-ವಿದ್ಯಾರ್ಥಿ ಸಂಘಟನೆಗಳು ಜಯ ಗಳಿಸಿದ್ದು, ಆರ್ಎಸ್ಎಸ್ನ ವಿದ್ಯಾರ್ಥಿ ಘಟಕ ಎಬಿವಿಪಿಗೆ ಭಾರೀ ಮುಖಭಂಗವಾಗಿದೆ. ಸುಮಾರು 30 ವರ್ಷಗಳ ಬಳಿಕ ಜೆಎನ್ಯುನಲ್ಲಿ ದಲಿತ ವಿದ್ಯಾರ್ಥಿ ಅಧ್ಯಕ್ಷರಾಗಿದ್ದಾರೆ.
1996-97ರಲ್ಲಿ ದಲಿತ ಮುಖಂಡ ಬಟ್ಟಿ ಲಾಲ್ ಬೈರ್ವಾ ಜೆಎನ್ಯುನಲ್ಲಿ ಅಧ್ಯಕ್ಷರಾಗಿದ್ದು, ಅದಾದ ಬಳಿಕ ಈ ವರ್ಷದ (2024) ಚುನಾವಣೆಯಲ್ಲಿ ಧನಂಜಯ್ ಎಡ ವಿದ್ಯಾರ್ಥಿ ಸಂಘಟನೆಗಳನ್ನು ಪ್ರತಿನಿಧಿಸಿ ಚುನಾವಣೆ ಗೆದ್ದು ಅಧ್ಯಕ್ಷಗಿರಿಯನ್ನು ಪಡೆದುಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಜೆಎನ್ಯು ವಿವಿ ವಿದ್ಯಾರ್ಥಿ ಘಟಕದ ಚುನಾವಣೆ: ಎಡ ಸಂಘಟನೆಗಳ ಮೇಲುಗೈ; ಎಬಿವಿಪಿಗೆ ತೀವ್ರ ಮುಖಭಂಗ
ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ನಿಂದ (ಎಐಎಸ್ಎ) ಕಣಕ್ಕಿಳಿದ ಧನಂಜಯ್ 2,598 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ. ಇನ್ನು ಇದೇ ಸ್ಥಾನಕ್ಕೆ ಸ್ಪರ್ಧಿಸಿದ ಎಬಿವಿಪಿಯ ಉಮೇಶ್ ಸಿ ಅಜ್ಮೀರಾ 1,676 ಮತಗಳನ್ನು ಗಳಿಸಿ ಪರಾಭವಗೊಂಡಿದ್ದಾರೆ.
ಧನಂಜಯ್ ಬಿಹಾರದ ಗಯಾ ಮೂಲದವರಾಗಿದ್ದು, ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಆರ್ಟ್ಸ್ ಆಂಡ್ ಆಸ್ತೆಟಿಕಿಸ್ನಲ್ಲಿ ಪಿಎಚ್ಡಿ ವಿದ್ಯಾರ್ಥಿಯಾಗಿದ್ದಾರೆ. ಜೆಎನ್ಯು ಅಧ್ಯಕ್ಷೀಯ ಚರ್ಚೆಯಲ್ಲಿ ಉನ್ನತ ಶಿಕ್ಷಣ ನಿಧಿ ಸಂಸ್ಥೆ ಸಾಲದಿಂದಾಗಿ (ಎಚ್ಇಎಫ್ಎ) ಶುಲ್ಕ ಹೆಚ್ಚಳವಾಗುತ್ತಿರುವುದರ ಬಗ್ಗೆ ಧನಿ ಎತ್ತಿದ್ದರು. ಹಾಗೆಯೇ ಕ್ಯಾಂಪಸ್ನಲ್ಲಿರುವ ನೀರಿನ, ಆರೋಗ್ಯ ವ್ಯವಸ್ಥೆ, ಮೂಲಭೂತ ಸೌಕರ್ಯ ಸಮಸ್ಯೆಗಳನ್ನು ಮುಂದಿಟ್ಟು ಆಡಳಿತವನ್ನು ಪ್ರಶ್ನಿಸಿದ್ದರು.