- ಈಗ ಬಿಜೆಪಿಗೆ, ರಾಜ್ಯಕ್ಕೆ ಅನಂತಕುಮಾರ ಅಗತ್ಯ ಬಹಳವಿತ್ತು: ಬೊಮ್ಮಾಯಿ
- ಕೇಂದ್ರದ ಯಾವುದೇ ವಿಚಾರ ಬಂದಾಗ ಅನಂತಕುಮಾರ್ ಮೇಲೆ ಹಾಕುತ್ತಿದ್ದೆವು.
ಕೇಂದ್ರ ಸರ್ಕಾರದ ಮಟ್ಟದಲ್ಲಿ ಕರ್ನಾಟಕದ ವಿಚಾರ ಬಂದಾಗ ಅನಂತಕುಮಾರ್ ಅವರು ಆಪದ್ಬಾಂಧವರಾಗಿದ್ದರು. ಈಗ ರಾಜ್ಯಕ್ಕೆ ಮತ್ತು ಬಿಜೆಪಿಗೆ ಅವರ ಅಗತ್ಯವಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.
ಕೇಂದ್ರದ ಮಾಜಿ ಸಚಿವ ದಿ. ಅನಂತಕುಮಾರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಅನಂತ ನಮನ 64 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಅನಂತಕುಮಾರ್ ಅವರು ಅನಂತವಾದ ಬದುಕನ್ನು ಅಲ್ಪ ಸಮಯದಲ್ಲಿ ಇದ್ದು ಯಶಸ್ಸು ಸಾಧನೆಗಳನ್ನು ಮಾಡಿ ಅತಿ ಚಿಕ್ಕ ವಯಸಿನಲ್ಲಿ ಬಿಟ್ಟು ಹೋಗಿದ್ದಾರೆ. ಅನಂತಕುಮಾರ್ ನಾನು ಕ್ಲಾಸ್ ಮೇಟ್. ನಾನು ಏನಾದರು ತಪ್ಪು ಮಾಡಿದ್ದರೆ ಅವರು ಕರೆಕ್ಷನ್ ಮಾಡುತ್ತಿದ್ದರು. ಅವರು ನಮ್ಮ ಬೆಂಚ್ ಮೆಟ್ ಆಗಿದ್ದರು” ಎಂದರು.
“ಕೃಷ್ಣಾ ನದಿ ವಿಚಾರದಲ್ಲಿ ರಾಜ್ಯಕ್ಕೆ ಒಂದು ಆತಂಕ ಎದುರಾಗಿತ್ತು. ಆಂಧ್ರ ತೆಲಂಗಾಣಕ್ಕೆ ಪ್ರತ್ಯೇಕವಾಗಿ ನೀರು ಹಂಚಿಕೆಗೆ ಮಾಡುವಂತೆ ಆಗ್ರಹಿಸಿದ್ದರು. ಆಗ ನಾನು ಅನಂತಕುಮಾರ್ ಅವರಿಗೆ ಇದರ ಬಗ್ಗೆ ಹೇಳಿದೆ. ಅವರು ತಕ್ಷಣ ಲಾ ಸೆಕ್ರೆಟರಿಗೆ ಕರೆದು ರಾಜ್ಯ ಸರ್ಕಾರದ ಪರ ಬರೆಯುವಂತೆ ಹೇಳಿದರು. ಅವರು ನಿರಾಕರಿಸಿದರು, ಆದರೆ, ಅನಂತಕುಮಾರ್ ಅವರು ಲಾ ಸೆಕ್ರೆಟರಿಯನ್ನೇ ಬದಲಾಯಿಸುವುದಾಗಿ ಹೇಳಿದರು. ಆಗ ಆತ ಸಹಿ ಮಾಡಿದ. ಇದು ಅತ್ಯಂತ ದೊಡ್ಡ ಕೆಲಸ” ಎಂದು ನೆನಪಿಸಿಕೊಂಡರು.
ಈ ಸುದ್ದಿ ಓದಿದ್ದೀರಾ? ಕಾವೇರಿ ಪ್ರತಿಭಟನೆ | ಅಹಿತಕರ ಘಟನೆ ನಡೆದರೆ ಕಾನೂನು ಕ್ರಮ: ಸಚಿವ ಪರಮೇಶ್ವರ್ ಎಚ್ಚರಿಕೆ
“ಇಡೀ ರಾಜ್ಯಕ್ಕೆ ಅನಂತಕುಮಾರ್ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅವರು ನಾನು ಬೇರೆ ಬೇರೆ ಪಕ್ಷದಲ್ಲಿ ಇದ್ದೆವು, ನನಗೆ ಯಾವಾಗಲೂ ದೋಸ್ತ ಅಂತ ಕರೆಯುತ್ತಿದ್ದರು. ಅವರು ಬಿಜೆಪಿಗೆ ಬರುವಂತೆ ಒತ್ತಾಯ ಮಾಡಿದರು. ರಾಜನಾಥ ಸಿಂಗ್ ಅವರು ನೀವೇಕೆ ಬಿಜೆಪಿ ಬರುತ್ತಿಲ್ಲ ಎಂದರು. ನೀನು ಬಂದರೆ ನಮಗೂ ಅನುಕೂಲ ನಿನಗೂ ಗೌರವ ಸಿಗುತ್ತದೆ ಅಂತ ಅನಂತಕುಮಾರ್ ಹೇಳಿದರು. ಅನಂತಕುಮಾರ್ ಒತ್ತಾಯಕ್ಕೆ ಬಿಜೆಪಿ ಬಂದೆ. ನನ್ನನ್ನು ಗೌರವದಿಂದ ನೋಡಿಕೊಂಡರು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
“ಅನಂತಕುಮಾರ್ ಅವರಲ್ಲಿ ದೂರದೃಷ್ಟಿಯುಳ್ಳ ನಾಯಕತ್ವದ ಗುಣ ಇತ್ತು. ನಾವು ಕಾಲೇಜಿನಲ್ಲಿ ಕ್ಯಾಂಟೀನ್ ನಲ್ಲಿ ಟಿ ಕುಡಿಯುವಾಗ ಎಮರ್ಜೆನ್ಸಿ ವಿರುದ್ದ ಪ್ರತಿಭಟನೆ ಮಾಡೋಣ ಅಂತ ಹೇಳಿದರು. ಅವರನ್ನು ವಿದ್ಯಾರ್ಥಿ ಸಂಘಟನೆಯ ಜನರಲ್ ಸೆಕ್ರೆಟರಿ ಮಾಡಿದ್ದೆವು. ಅವರು ಪ್ರತಿಭಟನೆಯಲ್ಲಿ ಆರೆಸ್ಟ್ ಆಗಿ ನಾಲ್ಕು ತಿಂಗಳು ಜೈಲಿಗೆ ಹೋಗಿದ್ದರು. ಆದರೆ, ಸದಾ ಕಾಲ ಉತ್ಸಾಹ ಕಡಿಮೆಯಾಗಲಿಲ್ಲ” ಎಂದರು
“ಅನಂತಕುಮಾರ್ ಅವರು ಆಪದ್ಬಾಂಧವರು, ಕೇಂದ್ರದ ಯಾವುದೇ ವಿಚಾರ ಬಂದಾಗ ನಾವು ಅನಂತ ಕುಮಾರ್ ಮೇಲೆ ಹಾಕುತ್ತಿದ್ದೆವು. ಮೊನ್ನೆಯ ಕಾವೇರಿ ವಿಚಾರವಾಗಿ ನಡೆದ ಸರ್ವ ಪಕ್ಷದ ಸಭೆಯಲ್ಲಿ ಅವರನ್ನು ಎಲ್ಲರೂ ನೆನೆಸಿಕೊಂಡರು ಎಂದು ಹೇಳಿದರು.
ಮಾಜಿ ಸಚಿವ ಸಿ.ಟಿ.ರವಿ, ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಪಿ.ವಿ.ಕೃಷ್ಣಭಟ್ ಹಾಜರಿದ್ದರು.