2 ಸಾವಿರ ಮುಖಬೆಲೆಯ ನೋಟಿನಲ್ಲಿ ಚಿಪ್ ಇದೆ ಎಂದಿದ್ದ ಶ್ವೇತಾ ಸಿಂಗ್
ಪ್ರಶ್ನೆ ಕೇಳಿದ್ದಕ್ಕೆ ಕೇಸು ಹಾಕ್ತೀನಿ ಎಂದ ʼಆಜ್ ತಕ್ʼ ವಾಹಿನಿ ನಿರೂಪಕಿ
ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿತ್ತು. ರಿಸರ್ವ್ ಬ್ಯಾಂಕ್ನ ಈ ನಡೆಗೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹಿಂಪಡೆಯುವುದೇ ಆಗಿದ್ದರೆ, ಈ ನೋಟುಗಳನ್ನು ಕೇಂದ್ರ ಸರ್ಕಾರ ಚಲಾವಣೆಗೆ ತಂದಿದ್ದಾದರೂ ಯಾಕೆ ಎಂಬ ಚರ್ಚೆ ಶುರುವಾಗಿತ್ತು. ಜೊತೆಗೆ ಈ ಗುಲಾಬಿ ನೋಟುಗಳಲ್ಲಿ ʼನ್ಯಾನೋ ಚಿಪ್ʼ ಇದೆ ಎಂದು ಆರಂಭದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದ ಕೆಲ ಪತ್ರಕರ್ತರನ್ನು ಕೂಡ ಟ್ರೋಲ್ ಮಾಡಲಾಗಿತ್ತು. ಹೀಗೆ ವದಂತಿ ಹಬ್ಬಿಸಿದ್ದ ಪತ್ರಕರ್ತರ ಪೈಕಿ ʼಆಜ್ ತಾಕ್ʼ ಸುದ್ದಿ ವಾಹಿನಿಯ ನಿರೂಪಕಿ ಶ್ವೇತಾ ಸಿಂಗ್ ಕೂಡ ಒಬ್ಬರು. ಈಗ ಪತ್ರಿಕೋದ್ಯಮದ ವಿದ್ಯಾರ್ಥಿಗಳೇ ಸುದ್ದಿಯ ಹೆಸರಲ್ಲಿ ಸುಳ್ಳು ಹರಡಿದ ನಿರೂಪಕಿಯನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪತ್ರಿಕೋದ್ಯಮದ ವಿದ್ಯಾರ್ಥಿಗಳು ಶ್ವೇತಾ ಸಿಂಗ್ ಅವರನ್ನು ಪ್ರಶ್ನಿಸಿರುವ ವಿಡಿಯೋವನ್ನು ʼಆಲ್ಟ್ ನ್ಯೂಸ್ʼ ಸಂಸ್ಥಾಪಕ ಮೊಹಮ್ಮದ್ ಜುಬೇರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಎರಡು ನಿಮಿಷಗಳ ವಿಡಿಯೋದಲ್ಲಿ ಯುವಕನೊಬ್ಬ “2 ಸಾವಿರದ ನೋಟಿನಲ್ಲಿ ಚಿಪ್ ಇದೆ ಎಂದು ಹೇಳಿದ್ದು ನೀವೇ ಅಲ್ಲವೇ” ಎಂದು ಪ್ರಶ್ನಿಸಿದ್ದಾನೆ. ಆತನ ಪ್ರಶ್ನೆಗೆ ಉತ್ತರಿಸಿರುವ ಶ್ವೇತಾ ಸಿಂಗ್, “ನಾನು ಹಾಗೆ ಹೇಳಿಯೇ ಇಲ್ಲ. ಮನಸ್ಸು ಮಾಡಿದರೆ ನಿಮ್ಮ ಮೇಲೆ ಕೇಸು ಹಾಕಬಲ್ಲೆ. ನೀವು 45 ಸೆಕಂಡ್ಗಳ ತಿರುಚಿದ ವಿಡಿಯೋವನ್ನು ನೋಡಿದ್ದೀರಿ. ಆದರೆ, ನಾನು 45 ನಿಮಿಷಗಳ ವಿಡಿಯೋದಲ್ಲಿ ವಿವರವಾಗಿ ಮಾತನಾಡಿದ್ದೀನಿ. ಇದು ವಾಟ್ಸಪ್ನಲ್ಲಿ ಹರಿದಾಡುತ್ತಿರುವ ಸುದ್ದಿ ಎಂದು ಉಲ್ಲೇಖಿಸಿದ್ದೀನಿ” ಎಂದಿದ್ದಾರೆ.
ಕೇಸು ದಾಖಲಿಸುತ್ತೇನೆ ಎಂದು ಶ್ವೇತಾ ಸಿಂಗ್ ಧಮ್ಕಿ ಹಾಕಿದರೂ ಯುವಕ ಹಿಂಜರಿದಿಲ್ಲ. “140 ಕೋಟಿ ಜನತೆಯ ಭವಿಷ್ಯಕ್ಕೆ ಸಂಬಂಧಿಸಿದ ವಿಚಾರದ ಬಗ್ಗೆ ನಿಮಗೆ ಸುಳ್ಳು ಹೇಳಲು ಮನಸ್ಸಾದರೂ ಹೇಗೆ ಬಂತು? ನೋಟಿನಲ್ಲಿ ಚಿಪ್ ಇದೆ. ನೋಟಿನ ಕಂತೆ ಭೂಮಿಯ ಕೇಳಗಿದ್ದರೂ ಗೊತ್ತಾಗುತ್ತೆ ಎಂದವರು ನೀವೇ. ನಮ್ಮಂಥ ಯುವಜನತೆ ನಿಮ್ಮನ್ನು ಮಾದರಿ ವ್ಯಕ್ತಿಗಳನ್ನಾಗಿ ಕಾಣಲು ಹೇಗೆ ಸಾಧ್ಯ?” ಎಂದು ತರಾಟೆಗೆ ತೆಗೆದುಕೊಂಡಿದ್ದಾನೆ.
ಶ್ವೇತಾ ಸಿಂಗ್, ನಾನು ನೋಟಿನಲ್ಲಿ ಚಿಪ್ ಇದೆ ಎಂದು ಹೇಳಿಯೇ ಇಲ್ಲ ಎಂದ ವಿಡಿಯೋ ವೈರಲ್ ಆಗುತ್ತಲೇ, ಆಕೆ 2 ಸಾವಿರ ಮುಖಬೆಲೆ ನೋಟಿನ ವಿಶೇಷತೆಯ ಬಗ್ಗೆ ಫುಂಕಾನು ಫುಂಕವಾಗಿ ಮಾತನಾಡಿದ ಹಳೆಯ ವಿಡಿಯೋವನ್ನು ಕೆದಕಿ, ನೆಟ್ಟಿಗರು ಸಾಕ್ಷಿ ಸಮೇತ ಪ್ರಶ್ನೆ ಮಾಡುತ್ತಿದ್ದಾರೆ.
ಗುಲಾಬಿ ನೋಟಿನ ವೈಶಿಷ್ಟ್ಯಗಳ ಬಗ್ಗೆ ವದಂತಿ ಹಬ್ಬಿಸಿದ್ದು ಶ್ವೇತಾ ಸಿಂಗ್ ಮಾತ್ರವಲ್ಲ, ʼಝೀ ನ್ಯೂಸ್ʼನ ಸುಧೀರ್ ಚೌಧರಿ, ಕನ್ನಡದ ಪಬ್ಲಿಕ್ ಟಿ.ವಿ ಮುಖ್ಯಸ್ಥ ಹೆಚ್. ಆರ್ ರಂಗನಾಥ್ ಮುಂತಾದವರು ನೋಟಿನಲ್ಲಿ ʼನ್ಯಾನೋ ಚಿಪ್ʼ ಇದೆ ಎಂದು ವದಂತಿ ಹಬ್ಬಿಸಿ ಕೊನೆಯಲ್ಲಿ ಟ್ರೋಲ್ ಪಡೆಗೆ ಆಹಾರವಾಗಿದ್ದರು.
ರಂಗಣ್ಣನಿಗೂ ಸ್ವಲ್ಪ ಹೇಳಿಕೊಡಬೇಕಿತ್ತು