- ‘ಮುಸ್ಲಿಮ್’ ಎಂದು ಭಾವಿಸಿ ವರದಿಗಾರನ ಮೇಲೆ ಇಬ್ಬರಿಂದ ಅವಾಚ್ಯ ನಿಂದನೆ
- ಕಾವೂರು ಠಾಣಾ ವ್ಯಾಪ್ತಿಯಲ್ಲಿ ಕಳೆದ ಜು.26ರಂದು ಮಧ್ಯಾಹ್ನ ನಡೆದಿದ್ದ ಘಟನೆ
ಕರಾವಳಿ ನಗರ ಮಂಗಳೂರಿನಲ್ಲಿ ಅನೈತಿಕ ಪೊಲೀಸ್ಗಿರಿಗೆ ಕಡಿವಾಣ ಹಾಕಲು ‘ಆ್ಯಂಟಿ ಕಮ್ಯೂನಲ್ ವಿಂಗ್’ ಸಹಿತ ಎಷ್ಟೇ ಪ್ರಯತ್ನ ಮಾಡಿದರೂ ನಿಲ್ಲುವ ಲಕ್ಷಣವೇ ಕಾಣುತ್ತಿಲ್ಲ.
ಇತ್ತೀಚೆಗಷ್ಟೇ ಬಂಟ್ವಾಳ ತಾಲೂಕಿನ ತುಂಬೆ ಸಮೀಪ ಪೊಲೀಸ್ ಕುಟುಂಬದ ಮೇಲೆ ಅನೈತಿಕ ಪೊಲೀಸ್ಗಿರಿ ನಡೆಸಿದ ಘಟನೆ ಮಾಸುವ ಮುನ್ನವೇ, ಮಂಗಳೂರಿನಲ್ಲಿ ಯುವ ಪತ್ರಕರ್ತನ ಧರ್ಮವನ್ನು ಪ್ರಶ್ನಿಸಿ, ಅವಾಚ್ಯವಾಗಿ ನಿಂದಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕಾವೂರು ಠಾಣಾ ವ್ಯಾಪ್ತಿಯಲ್ಲಿ ಕಳೆದ ಜು.26ರಂದು ಮಧ್ಯಾಹ್ನ ಈ ಘಟನೆ ನಡೆದಿದ್ದು, ಈ ಸಂಬಂಧ ಪತ್ರಕರ್ತ ಅಭಿಜಿತ್ ಎಂಬುವರು ನೀಡಿದ ದೂರಿನ ಮೇರೆಗೆ ಇಬ್ಬರನ್ನು ಬಂಧಿಸಿರುವುದಾಗಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದ್ದಾರೆ.
ಅಭಿಜಿತ್ ಖಾಸಗಿ ಸುದ್ದಿ ಸಂಸ್ಥೆಯೊಂದರಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕಾಲೇಜಿನ ಪರಿಚಯಸ್ಥ ಸ್ನೇಹಿತೆಯ ಜೊತೆಗೆ ಮಧ್ಯಾಹ್ನ ಊಟಕ್ಕೆ ತೆರಳಿದ್ದ ವೇಳೆ, ಈ ಘಟನೆ ನಡೆದಿದೆ.
ಬಂಧಿತರನ್ನು ಕೋಟೆಕಾರ್ ನಿವಾಸಿ ಚೇತನ್ ಕುಮಾರ್ (38), ಯೆಯ್ಯಾಡಿ ನಿವಾಸಿ ನವೀನ್(39) ಎನ್ನಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಘಟನೆ ಏನು?
ಘಟನೆಯ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಪತ್ರಕರ್ತ ಅಭಿಜಿತ್, ‘ಜು.26ರಂದು ಕಾವೂರಿನಲ್ಲಿರುವ ಹೋಟೆಲೊಂದಕ್ಕೆ ಕಾಲೇಜಿನ ಪರಿಚಯಸ್ಥ ಸ್ನೇಹಿತೆಯ ಜೊತೆಗೆ ಮಧ್ಯಾಹ್ನ ಊಟಕ್ಕೆ ತೆರಳಿದ್ದೆ. ಊಟ ಮುಗಿಸಿ ಕಾರಿನತ್ತ ಬರುವಾಗ, ಅಪರಿಚಿತರಿಬ್ಬರು ಬಂದು ‘ನೀನು ಬ್ಯಾರಿ(ಮುಸ್ಲಿಂ)ಯೊಂದಿಗೆ ಏನು ಮಾತನಾಡುತ್ತಿಯಾ?’ ಎಂದು ಸ್ನೇಹಿತೆಯ ಬಳಿ ಪ್ರಶ್ನಿಸಿದ್ದಾನೆ. ‘ನೀನು ಬ್ಯಾರಿಯ ಇಲ್ಲಿಂದ ಹೊರಡು’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಸಂದರ್ಭ ನಾನು ‘ಪತ್ರಕರ್ತ’ ಎಂದು ತನ್ನ ಬಳಿ ಇದ್ದ ಐಡಿ ಕಾರ್ಡ್ ತೋರಿಸಿದರೂ ಮತ್ತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಬಗ್ಗೆ ಅದೇ ದಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ. ಪೊಲೀಸ್ ಆಯುಕ್ತ ಕುಲದೀಪ್ ಅವರ ಸೂಚನೆಯ ಮೇರೆಗೆ ಇಬ್ಬರನ್ನು ಬಂಧಿಸಿದ್ದಾರೆ. ಜು. 28ರಂದು ಎಫ್ಐಆರ್ ದಾಖಲಾಗಿತ್ತು” ಎಂದು ಮಾಹಿತಿ ನೀಡಿದ್ದಾರೆ.
ಕರಾವಳಿ ಭಾಗದಲ್ಲಿ ಅನ್ಯಧರ್ಮೀಯ ಸ್ನೇಹಿತರು ಒಟ್ಟೊಟ್ಟಿಗೆ ಹೋಗುವುದನ್ನು ಸಹಿಸದೆ, ಅನೈತಿಕ ಪೊಲೀಸ್ಗಿರಿ ನಡೆಯುತ್ತಿರುವ ಘಟನೆ ನಿರಂತರವಾಗಿ ವರದಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗೃಹ ಇಲಾಖೆಯು ‘ಆ್ಯಂಟಿ ಕಮ್ಯೂನಲ್ ವಿಂಗ್’ ಸ್ಥಾಪಿಸಿತ್ತು. ಆದರೂ ಅನೈತಿಕ ಪೊಲೀಸ್ಗಿರಿಗೆ ಇನ್ನೂ ಬ್ರೇಕ್ ಬಿದ್ದಿಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ.