ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಜುಲೈ 18ರಂದು ನಡೆಯಲಿರುವ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್ಡಿಎ) ಸಭೆಗೆ ಬರಲು ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ ಆರ್) ಚಿರಾಗ್ ಪಾಸ್ವಾನ್ ಅವರಿಗೆ ಆಹ್ವಾನ ನೀಡಿದ್ದಾರೆ.
ಕೇಂದ್ರ ಸಚಿವ ನಿತ್ಯಾನಂದ್ ರಾಯ್ ಅವರು ಶುಕ್ರವಾರ ರಾತ್ರಿ ಪಾಸ್ವಾನ್ ಅವರನ್ನು ಎರಡನೇ ಬಾರಿಗೆ ಭೇಟಿಯಾಗಿ ಮಾತುಕತೆ ನಡೆಸಿದರು. ಇದರ ಬೆನ್ನಲ್ಲೇ ಎನ್ಡಿಎ ಸಭೆಯಲ್ಲಿ ಭಾಗವಹಿಸಲು ಆಹ್ವಾನಿಸಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಬರೆದ ಪತ್ರವನ್ನು ಎಲ್ಜೆಪಿ (ಆರ್) ಹಂಚಿಕೊಂಡಿದೆ.
ಈಗ ಕೇಂದ್ರ ಸಚಿವರಾಗಿರುವ ಚಿರಾಗ್ ಅವರ ಚಿಕ್ಕಪ್ಪ ಪಶುಪತಿ ಕುಮಾರ್ ಪರಾಗ್ ನೇತೃತ್ವದ ಎಲ್ಜೆಪಿಯಲ್ಲಿನ ವಿಭಜನೆಯು ಅವರಿಗೆ ಕೊಂಚ ಹಿನ್ನಡೆ ಉಂಟುಮಾಡಿತ್ತು. ಅದರ ನಡುವೆಯೂ ಚಿರಾಗ್ ಪಾಸ್ವಾನ್ ಪಕ್ಷದ ನಿಷ್ಠಾವಂತ ಮತ ಬ್ಯಾಂಕ್ ಅನ್ನು ತಮ್ಮೊಂದಿಗೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಕಾಂಗ್ರೆಸ್, ಎಡಪಕ್ಷಗಳು, ಆರ್ಜೆಡಿ, ಜೆಡಿಯು ಜೊತೆ ಹೋಗದಂತೆ ಅವರನ್ನು ತಡೆಯಲು ಬಿಜೆಪಿ ಮುಂದಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ, ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬಣ, ಬಿಹಾರ ಮತ್ತು ಉತ್ತರ ಪ್ರದೇಶದ ಹಲವಾರು ಸಣ್ಣ ಪಕ್ಷಗಳು ಮತ್ತು ಈಶಾನ್ಯ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಸೇರಿದಂತೆ ಹಲವಾರು ಬಿಜೆಪಿ ಹೊಸ ಮಿತ್ರಪಕ್ಷಗಳು ಸಭೆಯಲ್ಲಿ ಪಾಲ್ಗೊಳ್ಳಲಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
ಈ ಸುದ್ದಿ ಓದಿದ್ದೀರಾ: ರಾಜಕೀಯ ಭಿನ್ನಮತ ಮರೆತು ಮೋದಿಗೆ ಜೆಡಿಎಸ್ ಬೆಂಬಲಿಸಲಿದೆ: ಶೋಭ ಕರಂದ್ಲಾಜೆ
ಚಿರಾಗ್ ಪಾಸ್ವಾನ್ ದಲಿತ ನಾಯಕ ದಿವಂಗತ ರಾಮ್ವಿಲಾಸ್ ಪಾಸ್ವಾನ್ ಅವರ ಪುತ್ರ. 2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಪ್ರಚಾರ ಮಾಡಲು ಅವರು ಎನ್ಡಿಎ ಮೈತ್ರಿಯಿಂದ ಹೊರನಡೆದಿದ್ದರು. ಅವರನ್ನು ಮತ್ತೆ ಮೈತ್ರಿಕೂಟದೊಳಗೆ ತರಲು ಬಿಜೆಪಿ ಮುಂದಾಗಿದೆ.
ಬಿಜೆಪಿಗೆ ವಿರುದ್ಧವಾಗಿ ಪ್ರತಿಪಕ್ಷಗಳು ಒಂದಾಗಲು ಪ್ರಯತ್ನ ನಡೆಸುತ್ತಿರುವುದರ ನಡುವೆಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹೊಸ ತಂತ್ರಗಾರಿಕೆಗೆ ಮುಂದಾಗಿದ್ದಾರೆ. ನಡ್ಡಾ ಆಹ್ವಾನಕ್ಕೆ ಚಿರಾಗ್ ಪಾಸ್ವಾನ್ ಪೂರಕವಾಗಿ ಸ್ಪಂದಿಸಿದ್ದು, ಅವರು ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.