40ನೇ ವಸಂತಕ್ಕೆ ಕಾಲಿಟ್ಟ ಜೂನಿಯರ್ ಎನ್ಟಿಆರ್
ನಿರೀಕ್ಷೆ ಹೆಚ್ಚಸಿದ ನೂತನ ಚಿತ್ರದ ವಿಶೇಷ ಪೋಸ್ಟರ್
ತೆಲುಗಿನ ಖ್ಯಾತ ನಟ ಜೂನಿಯರ್ ಎನ್ಟಿಆರ್ ಶನಿವಾರ 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟನಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಾಹಪೂರವೇ ಹರಿದು ಬರುತ್ತಿದೆ. ಈ ನಡುವೆ ಜೂನಿಯರ್ ಎನ್ಟಿಆರ್ ನಟನೆಯ 30ನೇ ಚಿತ್ರದ ಟೈಟಲ್ ಕೂಡ ಘೋಷಣೆಯಾಗಿದೆ.
ʼಆರ್ಆರ್ಆರ್ʼ ಚಿತ್ರದ ಯಶಸ್ಸಿನ ಬಳಿಕ ಜೂನಿಯರ್ ಎನ್ಟಿಆರ್, ತೆಲುಗಿನ ಖ್ಯಾತ ನಿರ್ದೇಶಕ ಕೊರಟಾಲ ಶಿವ ಜೊತೆ ಜೋಡಿಸಿದ್ದರು. ನಟನ ಹುಟ್ಟು ಹಬ್ಬದ ಪ್ರಯುಕ್ತ ಉಡುಗೊರೆಯ ರೂಪದಲ್ಲಿ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿ ಟೈಟಲ್ ಘೋಷಿಸಿರುವ ಚಿತ್ರತಂಡ, ಬಹುನಿರೀಕ್ಷಿತ ಚಿತ್ರಕ್ಕೆ ʼದೇವರʼ ಎಂದು ಹೆಸರಿಟ್ಟಿರುವುದಾಗಿ ತಿಳಿಸಿದೆ. ವಿಶೇಷ ಪೋಸ್ಟರ್ನಲ್ಲಿ ಚಿತ್ರದ ಟೈಟಲ್ ಜೊತೆಗೆ ಜೂನಿಯರ್ ಎನ್ಟಿಆರ್ ಅವರ ಹೊಸ ಲುಕ್ ಅನ್ನು ಪರಿಚಯಿಸಲಾಗಿದೆ.
ಕೊರಟಾಲ ಶಿವ ಮತ್ತು ಜೂನಿಯರ್ ಎನ್ಟಿಆರ್ ಕಾಂಬಿನೇಶನ್ ʼದೇವರʼ ಚಿತ್ರದ ಮುಹೂರ್ತ ಕಳೆದ ಮಾರ್ಚ್ 23ರಂದು ಹೈದರಾಬಾದ್ನಲ್ಲಿ ಅದ್ದೂರಿಯಾಗಿ ಜರುಗಿತ್ತು. ಸ್ಟಾರ್ ನಿರ್ದೇಶಕರಾದ ರಾಜಮೌಳಿ ಮತ್ತು ಪ್ರಶಾಂತ್ ನೀಲ್ ಚಿತ್ರೀಕರಣಕ್ಕೆ ಚಾಲನೆ ನೀಡುವ ಮೂಲಕ ತಂಡಕ್ಕೆ ಶುಭ ಹಾರೈಸಿದ್ದರು.
ನಿರ್ಲಕ್ಷ್ಯಕ್ಕೊಳಪಟ್ಟ ಭಾರತದ ಕರಾವಳಿ ತೀರದ ಜನರ ಬದುಕಿನ ಸುತ್ತ ಚಿತ್ರದ ಕಥೆಯನ್ನು ಹೆಣೆಯಲಾಗಿದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ. ಕೊರಟಾಲ ಶಿವ ಈ ಹಿಂದೆ ಜೂನಿಯರ್ ಎನ್ಟಿಆರ್ ನಟನೆಯ ʼಜನತಾ ಗ್ಯಾರೇಜ್ʼ ಚಿತ್ರವನ್ನು ನಿರ್ದೇಶಿಸಿದ್ದರು. ಕಡಲ ಕಥನದ ಮೂಲಕ ಈ ಹಿಟ್ ಜೋಡಿ ಮತ್ತೆ ಒಂದಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.
ಈ ಸುದ್ದಿ ಓದಿದ್ದೀರಾ? ಸಿದ್ದರಾಮಯ್ಯ ಪದಗ್ರಹಣ ಸಮಾರಂಭಕ್ಕೆ ಸಾಕ್ಷಿಯಾದ ಸಿನಿ ತಾರೆಯರು
ಪ್ಯಾನ್ ಇಂಡಿಯಾ ಮಾದರಿಯಲ್ಲಿ ಸಿದ್ಧಗೊಳ್ಳುತ್ತಿರುವ ಈ ಚಿತ್ರದಲ್ಲಿ ಬಾಲಿವುಡ್ನ ಖ್ಯಾತ ನಟಿ ಜಾಹ್ನವಿ ಕಪೂರ್, ಜೂನಿಯರ್ ಎನ್ಟಿಆರ್ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅವರು ದಕ್ಷಿಣ ಸಿನಿ ರಂಗ ಪ್ರವೇಶಿಸುತ್ತಿರುವುದು ವಿಶೇಷ. ಸೈಫ್ ಅಲಿಖಾನ್ ಮತ್ತು ಪ್ರಕಾಶ್ ರಾಜ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹರಿಕೃಷ್ಣ ಕೆ ಮತ್ತು ಸುಧಾಕರ್ ಮಿಕ್ಕಿಲಿನೇನಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.