ನಿರಂತರವಾಗಿ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುತ್ತಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಈಗ ‘ಮಹಿಳಾ ಕೋಟಾ ಮಸೂದೆ’ಯಿಂದ ಬಿಜೆಪಿ ಟಿಕೆಟ್ ಸಿಕ್ಕಿದೆ ಎಂದು ಹೇಳಿ ಪೇಚಿಗೆ ಸಿಲುಕಿದ್ದಾರೆ. ಮಹಿಳಾ ಕೋಟಾ ಮಸೂದೆ ಇನ್ನೂ ಕೂಡಾ ಜಾರಿಗೆ ಬಂದಿಲ್ಲ. ಆದರೆ ತನಗೆ ಅದರಿಂದಾಗಿ ಬಿಜೆಪಿ ಟಿಕೆಟ್ ಸಿಕ್ಕಿದೆ ಎಂದು ಕಂಗನಾ ಹೇಳಿಕೊಂಡಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆಯಿಂದಾಗಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಪಡೆದಿದ್ದೇನೆ ಎಂದು ಇತ್ತೀಚೆಗೆ ಸಾರ್ವಜನಿಕ ಭಾಷಣದಲ್ಲಿ ನಟಿ ಕಂಗನಾ ರಣಾವತ್ ಹೇಳಿಕೊಂಡಿದ್ದಾರೆ. ಆದರೆ ಈ ಮಸೂದೆಯನ್ನು ಇನ್ನೂ ಜಾರಿ ಮಾಡಲಾಗಿಲ್ಲ. ಆದ್ದರಿಂದ ಈ ಹೇಳಿಕೆ ಸುಳ್ಳು ಎಂದು ಬೂಮ್ ವರದಿ ಮಾಡಿದೆ.
View this post on Instagram
ಮಂಡಿಯ ಬಾಲ್ಹ್ ಗ್ರಾಮದಲ್ಲಿ ಇತ್ತೀಚೆಗೆ ಸಾರ್ವಜನಿಕ ಭಾಷಣದಲ್ಲಿ ಮಹಿಳಾ ಮೀಸಲಾತಿ ಮಸೂದೆಯಿಂದಾಗಿ ತನಗೆ ಹೇಗೆ ಬಿಜೆಪಿ ಟಿಕೆಟ್ ನೀಡಲಾಯಿತು ಎಂದು ಹೇಳಿಕೊಂಡಿದ್ದಾರೆ. “ಮಹಿಳೆಯರಿಗೆ (ಲೋಕಸಭೆಯಲ್ಲಿ) 30% ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ಮಸೂದೆಯೇ ಇಂದು ನಾನು ಈ ಹಂತವನ್ನು ತಲುಪಲು ಕಾರಣವಾಗಿದೆ. ಇದರಿಂದಾಗಿ, ನಿಮ್ಮ ಮಂಡಿಯ ಮಗಳು ಈ ಹಂತಕ್ಕೆ ಬಂದಿದ್ದಾಳೆ” ಎಂದು ಕಂಗನಾ ಹೇಳಿಕೊಂಡಿದ್ದರು.
ಆದರೆ ನಿಜ ಏನು?
ಆದರೆ ‘ಮಹಿಳಾ ಕೋಟಾ ಮಸೂದೆ’ಯಿಂದ ಬಿಜೆಪಿ ಟಿಕೆಟ್ ಸಿಕ್ಕಿದೆ ಎಂಬ ಕಂಗನಾ ರಣಾವತ್ ಕೇಳಿಕೆ ಸುಳ್ಳು ಎಂದು ಬೂಮ್ ವರದಿ ಮಾಡಿದೆ. ಮಹಿಳಾ ಮೀಸಲಾತಿ ಮಸೂದೆಯನ್ನು ಇನ್ನೂ ಜಾರಿ ಮಾಡಲಾಗಿಲ್ಲ. ಕನಿಷ್ಠ 2029 ರವರೆಗೆ ಇದನ್ನು ಜಾರಿ ಮಾಡಲಾಗುವುದಿಲ್ಲ.
ಇದನ್ನು ಓದಿದ್ದೀರಾ? ‘ಸ್ವತಂತ್ರ ಭಾರತದ ಮೊದಲ ಪ್ರಧಾನಿ ಸುಭಾಶ್ಚಂದ್ರ ಬೋಸ್’ ಎಂದ ನಟಿ, ಬಿಜೆಪಿ ಅಭ್ಯರ್ಥಿ ಕಂಗನಾ: ವ್ಯಾಪಕ ಟ್ರೋಲ್
ನಾರಿ ಶಕ್ತಿ ವಂದನ ಅಧಿನಿಯಮ ಎಂದೂ ಕರೆಯಲ್ಪಡುವ ಮಹಿಳಾ ಮೀಸಲಾತಿ ಮಸೂದೆಯು ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಕಾಯ್ದಿರಿಸುವ ಮಸೂದೆಯಾಗಿದೆ.
27 ವರ್ಷಗಳ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಆದರೆ ಮೊದಲ ಬಾರಿಗೆ ಸೆಪ್ಟೆಂಬರ್ 20, 2023 ರಂದು ಲೋಕಸಭೆಯಲ್ಲಿ ಮಸೂದೆಯನ್ನು ಅಂಗೀಕರಿಸಲಾಯಿತು. ಸೆಪ್ಟೆಂಬರ್ 22 ರಂದು, ರಾಜ್ಯಸಭೆಯು ಸಹ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿತು. ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡ ನಂತರ, ರಾಷ್ಟ್ರಪತಿಗಳು ಸೆಪ್ಟೆಂಬರ್ 28 ರಂದು ಮಸೂದೆಗೆ ಸಹಿ ಹಾಕುವ ಮೂಲಕ ಒಪ್ಪಿಗೆ ಸೂಚಿಸಿದ್ದಾರೆ.
ಇದರರ್ಥ ಮಸೂದೆಯು ಕಾನೂನಾಗಲು ಬೇಕಾದ ಎಲ್ಲ ಹಂತಗಳನ್ನು ದಾಟಿದೆ. ಆದರೆ ಇನ್ನೂ ಕೂಡಾ ಜನಗಣತಿ ಸೇರಿದಂತೆ ಇತರೆ ಪ್ರಕ್ರಿಯೆಗಳು ಪೂರ್ಣವಾಗಲು ಬಾಕಿ ಉಳಿದಿದೆ. ಅವೆಲ್ಲವೂ ಕೂಡಾ ಪೂರ್ಣವಾದ ಬಳಿಕವೇ ಮಸೂದೆಯನ್ನು ಜಾರಿಗೆ ತರಲಾಗುವುದು. 2026 ರ ನಂತರ ಬಿಡುಗಡೆಯಾದ ಜನಗಣತಿಯ ಆಧಾರದ ಮೇಲೆ ಈ ಉಳಿದ ಪ್ರಕ್ರಿಯೆ ನಡೆಯಲಿದೆ. ಕೊರೋನ ಕಾರಣದಿಂದಾಗಿ ಕೇಂದ್ರವು 2021 ರ ಜನಗಣತಿಯನ್ನು ಇನ್ನೂ ಕೊನೆ ಮಾಡಿಲ್ಲ.
ಇದನ್ನು ಓದಿದ್ದೀರಾ? ಲೋಕಸಭಾ ಚುನಾವಣೆ | ‘1947ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ. ಭಿಕ್ಷೆ’ ಎಂದಿದ್ದ ನಟಿ ಕಂಗನಾಗೆ ಬಿಜೆಪಿ ಟಿಕೆಟ್!
ಸೆಪ್ಟೆಂಬರ್ 20, 2023 ರಂದು ಲೋಕಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಅವರು, “2024 ರ ಸಾರ್ವತ್ರಿಕ ಚುನಾವಣೆಯ ನಂತರವೇ ಈ ಮಸೂದೆ ಜಾರಿ ಪ್ರಕ್ರಿಯೆ ಆರಂಭವಾಗಲಿದೆ. ಕನಿಷ್ಠ 2029 ರವರೆಗೆ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರಲಾಗುವುದು” ಎಂದು ಹೇಳಿದ್ದರು. ಆದರೆ ಡಿಲಿಮಿನೇಷನ್ ಮತ್ತು ಜನಗಣತಿ ಪ್ರಕ್ರಿಯೆ ಪೂರ್ಣವಾದ ಬಳಿಕವೇ ಈ ಮಸೂದೆ ಜಾರಿ ಮಾಡುವುದನ್ನು ವಿಪಕ್ಷಗಳು ಟೀಕಿಸಿದೆ. 2024ರಲ್ಲೇ ಯಾಕೆ ಜಾರಿಗೆ ತರುವುದಿಲ್ಲ ಎಂದು ಪ್ರಶ್ನಿಸಿದೆ.
“1947ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ. ಅದು ಭಿಕ್ಷೆ. ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ” ಎಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದ ಬಾಲಿವುಡ್ನ ನಟಿ ಕಂಗನಾ ರಣಾವತ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ “ಸುಭಾಷ್ ಚಂದ್ರ ಬೋಸ್ ಅವರು ಸ್ವತಂತ್ರ ಭಾರತದ ಮೊದಲ ಪ್ರಧಾನಿ” ಎಂದು ಹೇಳಿಕೆ ನೀಡಿ ಟ್ರೋಲ್ ಆಗಿದ್ದಾರೆ.