ಡಿ.29ರಂದು ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾದ ಸದ್ದು ಜೋರಾಗಿದೆ. ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ಪದಾರ್ಪಣೆ ಮಾಡಿರುವ ಈ ಸಿನಿಮಾ ಮೊದಲ ದಿನವೇ 19 ಕೋಟಿ 79 ಲಕ್ಷ ಗಳಿಕೆ ಮಾಡುವ ಮೂಲಕ ಹೊಸ ದಾಖಲೆ ಮಾಡಿದೆ. ಆ ಮೂಲಕ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಸಿನಿ ಪ್ರಿಯರ ನಿರೀಕ್ಷೆಗೆ ತಕ್ಕಂತೆ ನಿರ್ದೇಶಕ ತರುಣ್ ಸುಧೀರ್ ಸಿನಿಮಾ ಮಾಡಿದ್ದಾರೆ ಎಂಬ ಅಭಿಪ್ರಾಯ, ವಿಮರ್ಶೆಗಳು ವ್ಯಕ್ತವಾಗುತ್ತಿದೆ.
ಈ ವರ್ಷಾಂತ್ಯಕ್ಕೆ ನಿಮ್ಮ ಮನದಂಗಳವನ್ನು ತುಂಬಲು ನಿಮ್ಮ ‘ಕಾಟೇರ’ ಚಿತ್ರ ಆಗಮಿಸಲಿದೆ. ಸದಾ ಪ್ರೀತಿ-ಪ್ರೋತ್ಸಾಹದೊಂದಿಗೆ ಹರಸಿ ಬೆಳೆಸುತ್ತಿರುವ ಕನ್ನಡ ಕಲಾಭಿಮಾನಿಗಳು ಹಾಗೂ ನಲ್ಮೆಯ ಸೆಲೆಬ್ರಿಟಿಗಳಿಗೆ ಶರಣು ಶರಣಾರ್ಥಿ#KaateraStormFromDec29
@TharunSudhir @RocklineEnt @Aradhanaa_r @harimonium @aanandaaudio pic.twitter.com/9MIzItKMmA
— Darshan Thoogudeepa (@dasadarshan) December 7, 2023
‘ಕಾಟೇರ’ ಸಿನಿಮಾ ಬಿಡುಗಡೆಗೂ ಮುನ್ನ ದರ್ಶನ್ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ
Thoogudeepa Dynasty ಎಂಬ ಯೂಟ್ಯೂಬ್ ಚಾನೆಲ್ಗೆ ನೀಡಿದ್ದ ಸಂದರ್ಶನದ ವೇಳೆ, ಬೆಂಗಳೂರಿನಲ್ಲಿ ಚಾಟ್ಸ್ ಅಂಗಡಿ ನಡೆಸುತ್ತಿರುವ ವಿಶೇಷ ಚೇತನ ಯುವಕನನ್ನು ನೆನಪಿಸಿಕೊಂಡು ಸಪೋರ್ಟ್ ಮಾಡಬೇಕು ಎಂದಿದ್ದರು. ಅವರ ಈ ಹೇಳಿಕೆಯು ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ. ವೈರಲಾಗುತ್ತಿದ್ದಂತೆಯೇ ಯುವಕನ ಅಂಗಡಿಯನ್ನು ಹುಡುಕಿಕೊಂಡು ದರ್ಶನ್ ಅಭಿಮಾನಿಗಳ ಸಹಿತ ಸಾರ್ವಜನಿಕರು ಆಗಮಿಸುತ್ತಿದ್ದಾರೆ.
ಸಂದರ್ಶನದ ವೇಳೆ ಸಂದರ್ಶಕಿ, “ನಿಮ್ಮ ಜೀವನದಲ್ಲಿ ಸ್ಫೂರ್ತಿಯ ವ್ಯಕ್ತಿ ಯಾರು?” ಎಂದು ಪ್ರಶ್ನಿಸಿದ್ದರು.
ಇದಕ್ಕೆ ಉತ್ತರಿಸಿದ್ದ ನಟ ದರ್ಶನ್, “ಕೆಲಸದ ವಿಚಾರದಲ್ಲಿ ನನಗೆ ಅನೇಕರು ಸ್ಪೂರ್ತಿಯಾಗುತ್ತಾರೆ. ಕೈ ಇಲ್ಲದ ವ್ಯಕ್ತಿನೂ ದುಡಿಯುತ್ತಿರುತ್ತಾರೆ. ಅವರು ಕೂಡ ನನಗೆ ಸ್ಪೂರ್ತಿಯಾಗುತ್ತಾರೆ. ಭಿಕ್ಷೆ ಬೇಡುವ ಬದಲು ಕಷ್ಟ ಪಟ್ಟು ಕೆಲಸ ಮಾಡುತ್ತಾರೆ. ಮೊನ್ನೆ ಯಾವುದೋ ಒಂದು ವಿಡಿಯೋ ನೋಡಿದೆ. ನಾಗರಬಾವಿಯಲ್ಲಿ ಒಬ್ಬ ವಿಶೇಷಚೇತನ ವ್ಯಕ್ತಿ ಪಾನಿ ಪೂರಿ ಅಂಗಡಿ ಹಾಕಿಕೊಂಡಿದ್ದಾರೆ. ನನ್ನ ಸ್ನೇಹಿತರಿಗೆ ಹೇಳಿದೆ. ನಾವೂ ಕೂಡ ಅಲ್ಲಿ ಹೋಗಿ ತಿನ್ನಬೇಕು ಎಂದು. ಏಕೆಂದರೆ ಆ ವ್ಯಕ್ತಿ ಭಿಕ್ಷೆ ಬೇಡದೆ ಪಾನಿಪೂರಿ ಅಂಗಡಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ನಾಲ್ಕು ಜನರಿಗೆ ಕೆಲಸ ಕೊಟ್ಟಿದ್ದಾರೆ. ಯೂಟ್ಯೂಬ್ನಲ್ಲಿ ಆ ಅಂಗಡಿ ನೋಡಿದೆ. ಈಗ ನಾವು ಅ ಅಂಗಡಿಯನ್ನು ಹುಡುಕಿಕೊಂಡು ಹೋದರೆ ಇನ್ನು ನಾಲ್ಕು ಜನರಿಗೆ ಅವರು ಸ್ಪೂರ್ತಿಯಾಗುತ್ತಾರೆ. ಅಂಗಡಿ ಹೆಸರು ‘ಹೊಟ್ಟೆಪಾಡು ಚಾಟ್ಸ್’ ಅಂತ ಇದೆ. ಯಾರಿಂದಲೋ ಸ್ಪೂರ್ತಿ ಪಡೆಯುವ ಬದಲು ನಮ್ಮ ಸುತ್ತ ನೋಡಿದರೆ ಈ ರೀತಿ ಅನೇಕರು ಸಿಗುತ್ತಾರೆ. ಕಷ್ಟಪಟ್ಟು ದುಡಿಯಲು ಇವರೇ ನಮಗೆ ಸ್ಪೂರ್ತಿಯಾಗುತ್ತಾರೆ” ಎಂದು ಹೇಳಿದ್ದರು.
ಅಷ್ಟಕ್ಕೂ ಈ ಯುವಕ ಯಾರು?
ನಾಗರಬಾವಿಯಲ್ಲಿ ‘ಹೊಟ್ಟೆಪಾಡು ಚಾಟ್ಸ್’ ಎಂಬ ಚಾಟ್ಸ್ ಸೆಂಟರ್ ಇದೆ. ಹುಬ್ಬಳ್ಳಿ ಮೂಲದ ವಿಶೇಷ ಚೇತನ ಯುವಕ ವೀರೇಶ್ ಅದರ ಮಾಲೀಕರು. ಅವರಿಗೆ ಒಂದು ಕಾಲು ಊನವಿದೆ. ಹಾಗಂತ ಅವರು ಸುಮ್ಮನೇ ಕುಳಿತಿಲ್ಲ. ಚಿಕ್ಕದಾಗಿ ಟ್ರಕ್ ಒಂದರಲ್ಲಿ ಶುರು ಮಾಡಿದ್ದ ಚಾಟ್ಸ್ ಸೆಂಟರ್ ಈಗ ನಾಲ್ಕು ಜನಕ್ಕೆ ಕೆಲಸ ಕೊಡುವ ಮಟ್ಟಿಗೆ ಬೆಳೆದು ನಿಂತಿದೆ. ಒಂದು ವರ್ಷದ ಹಿಂದೆಯೇ ಯೂಟ್ಯೂಬ್ನಲ್ಲಿ ಈ ‘ಹೊಟ್ಟೆಪಾಡು ಚಾಟ್ಸ್’ ಬಗ್ಗೆ ಪ್ರಸಾರವಾಗಿತ್ತು. ಆದರೆ ದರ್ಶನ್ ಸಂದರ್ಶನದಲ್ಲಿ ಆ ಅಂಗಡಿ ಬಗ್ಗೆ ಹೇಳಿದ ಮೇಲೆ ಇದು ಇನ್ನಷ್ಟು ಫೇಮಸ್ ಆಗಿದೆ.
ಆ ಬಳಿಕ ಅವರನ್ನು ಹುಡುಕಿಕೊಂಡು ಹಲವು ಮಂದಿ ಯೂಟ್ಯೂಬರ್ಗಳು ಹೋಗಿದ್ದು, ಸರತಿ ಮೇಲೆ ಸಂದರ್ಶನ ಮಾಡುತ್ತಿದ್ದಾರೆ.
ಈ ವೇಳೆ ಪ್ರತಿಕ್ರಿಯಿಸಿರುವ ವೀರೇಶ್, “ದರ್ಶನ್ ಅವರ ಸಂದರ್ಶನ ನೋಡಿದೆ. ನನ್ನಂತ ವಿಶೇಷ ಚೇತನ ವ್ಯಕ್ತಿಯನ್ನು ಡಿ ಬಾಸ್ ಗುರುತಿಸಿದ್ದು ನನ್ನ ಪುಣ್ಯ. ನಮ್ಮಂಥವರನ್ನು ಗುರುತಿಸುವವರು ಕಡಿಮೆ. ಇದು ನನ್ನಂಥ ಹಲವರಿಗೆ ಸ್ಫೂರ್ತಿಯಾಗಲಿದೆ. ದರ್ಶನ್ ಕೊಟ್ಟ ಆ ಒಂದು ಹೇಳಿಕೆ ನನ್ನ ಜೀವನ ಬದಲಾಯಿಸಿದೆ. ಬೀದಿಯಲ್ಲಿ ದುಡಿಯುವ ನಮ್ಮಂಥವರಿಗೆ ಇದು ದೊಡ್ಡ ಹೆಮ್ಮೆ. ಅವರ ಹೇಳಿಕೆಯ ನಂತರ ಗ್ರಾಹಕರ ಸಂಖ್ಯೆಯೂ ಹೆಚ್ಚಳವಾಗಿದೆ. 100ರಿಂದ 150 ಕರೆಗಳು ಬರ್ತಾ ಇದೆ. ಗೂಗಲ್ ಮ್ಯಾಪ್ ಅಲ್ಲೂ ನಮ್ಮ ಲೊಕೇಶನ್ ಇರುವುದರಿಂದ ಜನರು ಹುಡುಕಿಕೊಂಡು ಬರುತ್ತಿದ್ದಾರೆ. ದರ್ಶನ್ ನಮ್ಮ ಅಂಗಡಿಗೆ ಒಂದು ದಿನ ಬರ್ತಿನಿ ಅಂತ ಹೇಳಿದ್ದಾರೆ. ನಿರೀಕ್ಷೆ ಇದೆ. ಬಂದಲ್ಲಿ ನಮ್ಮ ಅಂಗಡಿಯ ಫೇವರಿಟ್ ತಿಂಡಿಯಾಗಿರುವ ಬುಟ್ಟಿ ಚಾಟ್ಸ್ ಅನ್ನು ನೀಡುತ್ತೇನೆ” ಎಂದು ಖುಷಿ ಹಂಚಿಕೊಂಡಿದ್ದಾರೆ.