ಕನ್ನಡ ಸಾಹಿತ್ಯವು ವಿಶ್ವ ಸಾಹಿತ್ಯದಲ್ಲಿ ತನ್ನದೇ ಆದ ವಿಶಿಷ್ಟವಾದ ಸ್ಥಾನ ಪಡೆದಿದೆ. ಈ
ವಿಶೇಷವಾದ ಸ್ಥಾನ ಪಡೆಯಲು ಜಾನಪದ, ವಚನ ಮತ್ತು ದಾಸ ಸಾಹಿತ್ಯ ಪ್ರಮುಖವಾದ
ಪಾತ್ರವಹಿಸಿವೆ. ಇವುಗಳು ಕನ್ನಡ ವಾಙ್ಮಯ ರತ್ನತ್ರಯಗಳೆಂದು ಹೇಳಬಹುದು ಎಂದು
ನ್ಯಾಯವಾದಿ ವಿಜಯರೆಡ್ಡಿ ಹೇಳಿದರು.
ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತು ವತಿಯಿಂದ “ಕನ್ನಡ ಸಾಹಿತ್ಯಕ್ಕೆ ಹರಿದಾಸರ ಕೊಡುಗೆ” ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ಹರಿದಾಸರು ಮಾನವ ಬದುಕಿನಲ್ಲಿ ಆತ್ಮಬಲವನ್ನು ಹೆಚ್ಚಿಸಿ, ಸುಂದರ ಬದುಕು ಕಟ್ಟಿಕೊಳ್ಳಲು ಅರ್ಥಪೂರ್ಣವಾದ ಅಮೃತವಾಣಿಯನ್ನು ನೀಡಿ, ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ” ಎಂದರು.
ಉಪನ್ಯಾಸಕ ಬಸವರಾಜ ಬಿರಾದಾರ ʼಕನ್ನಡ ಸಾಹಿತ್ಯಕ್ಕೆ ಹರಿದಾಸರ ಕೊಡುಗೆʼ ಕುರಿತು ಉಪನ್ಯಾಸ ನೀಡಿ, ಹರಿದಾಸರು ಷಟ್ಪದಿ, ಸಾಂಗತ್ಯ ಮತ್ತು ತ್ರೀಪದಿ ಪ್ರಕಾರಗಳಲ್ಲಿ ಕೀರ್ತನೆಗಳು, ಉಗಾಬೋಗಗಳು, ಸುಳಾದಿಗಳು, ಮುಂಡಿಗೆಗಳು, ವೃತನಾಮಗಳು, ದಂಡಕಗಳು, ಕೋಲಾಟಗಳು, ಅಲ್ಲದೇ ರಾಮಧಾನ್ಯ ಚರಿತೆ, ಹರಿಭಕ್ತಿಸಾರ, ಮೋಹನತರಂಗಿಣಿ, ನಲಚರಿತ್ರೆ, ಹರಿ ಕಥಾಮೃತಸಾರ, ಶ್ರೀರಾಮ ಕಥಾಮೃತಸಾರಗಳಂತಹ ಗದ್ಯ ಹಾಗೂ ಪದ್ಯ ಸಾಹಿತ್ಯದ ಮೂಲಕ ಅಗಾಧವಾದ ಕೊಡುಗೆಗಳು ನೀಡಿದ್ದಾರೆ. ಇವುಗಳು ಮಾನವೀಯ ಮೌಲ್ಯಗಳು ಬಿತ್ತಿ, ವೈಚಾರಿಕೆ ತಳಹದಿಯಲ್ಲಿ ಸಮೃದ್ಧ ಮತ್ತು ಸಮಸಮಾಜದ ಸಂದೇಶಗಳ ಹೊತ್ತಿಗೆಗಳಾಗಿವೆ” ಎಂದು ನುಡಿದರು.
ಸರ್ವೋದಯ ಬಾಲಕಿಯರ ವಸತಿ ನಿಲಯ ಆಡಳಿತಾಧಿಕಾರಿ ಸಿದ್ದರಾಮಯ್ಯಾ ಸ್ವಾಮಿ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ” ಸ್ವತಃ ಜ್ಞಾನತೀರ್ಥದಲ್ಲಿ ಮಿಂದು ಮಡಿಯಾಗಿರುವ ಹರಿದಾಸರು ಸಮಾಜದಲ್ಲಿ ಅನುಭವಿಸಿದ ಸತ್ಯ-ಮಿಥ್ಯಗಳ ಬಗ್ಗೆ ಜನರನ್ನು ಜಾಗೃತಗೊಳಿಸಿ, ಬದುಕನ್ನು ಹಸನಾಗಿಕೊಂಡು ಉದ್ದಾರವಾಗಲು ಉಪದೇಶಗಳನ್ನು ನೀಡಿದ್ದಾರೆ” ಎಂದರು.
ಶಿಕ್ಷಕ, ಸಾಹಿತಿ ಡಾ. ಸಂಜೀವಕುಮಾರ ಅತಿವಾಳೆ, “ಜನರಿಗೆ ಉತ್ತಮ ಸಂಸ್ಕಾರ ನೀಡಿ, ಸುಸಂಸ್ಕೃತರಾಗಿ ಬಾಳುವಂತೆ ಮಾಡುವದೇ ಸಾಹಿತ್ಯದ ಉದ್ದೇಶ. ಇದರಲ್ಲಿ ದಾಸ ಸಾಹಿತ್ಯ ಮೇಲ್ಪಂಕ್ತಿಯಲ್ಲಿ ಕಾಣುತ್ತೇವೆ” ಎಂದರು.
ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ಅಧ್ಯಕ್ಷ ಡಾ. ರವೀಂದ್ರ ಲಂಜವಾಡಕರ ಪ್ರಾಸ್ತಾವಿಕವಾಗಿ ಮಾತನಾಡಿ, “ಧರ್ಮ, ನೀತಿ, ಸಂಸಾರ, ವೇದಾಂತ, ಅರ್ಥನೀತಿ, ಜೀವನ
ಮೌಲ್ಯಗಳು ಮುಂತಾದವುಗಳು ಹಾಸುಹೊಕ್ಕಿರುವ ಹರಿದಾಸ ಸಾಹಿತ್ಯವು ನಿರಂತರ ಪ್ರಚಾರ
ಮಾಡಲಾಗುವುದು” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅಪರಾಧ ತಡೆಗೆ ಕಾನೂನು ಅರಿವು ಅಗತ್ಯ : ಎಸ್ಪಿ ಚನ್ನಬಸವಣ್ಣ
ಕಾರ್ಯಕ್ರಮದಲ್ಲಿ ಮಹೇಶ ಮೈಲೂರಕರ್ ಹಾಗೂ ರೋಹಿದಾಸ ಕಾಂಬಳೆ ಕೀರ್ತನೆ ಗಾಯನ ಮಾಡಿದರು.
ರಾಮಶೇವಂದನಾರ್ಪಣೆಟ್ಟಿ ಐನೊಳಿ ನಿರೂಪಿಸಿದರು, ಮಹೇಶ ಮೈಲೂರಕರ್ ಸ್ವಾಗತಿಸಿದರು, ಮಹೇಬೂಬ್ ಉಸ್ತಾದ ವಂದಿಸಿದರು.