- ಕಷ್ಟದ ಜೀವನ ನಮಗೆ ಶಿಸ್ತಿನ ಪಾಠ ಕಲಿಸುತ್ತದೆ
- ಬದುಕು ಎಂಬುದು ಸುಖ-ದುಃಖಗಳ ಸಮ್ಮಿಲನ
ಕನ್ನಡ ಸಾಹಿತ್ಯ ಪರಿಷತ್ತು ನಗರ ಪ್ರದೇಶಕ್ಕೆ ಸೀಮಿತವಾಗದೆ ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಭಾವಂತ ಸಾಹಿತಿ, ಕಲಾವಿದರನ್ನು ಗುರುತಿಸಿ ನಾಡಿನ ಜನರಿಗೆ ಪರಿಚಯಿಸುತ್ತಿರುವುದು ಅಭಿನಂದನಾರ್ಹ ಕಾರ್ಯ ಎಂದು ನಿವೃತ್ತ ಶಿಕ್ಷಕ ಬಸವಣಪ್ಪ ಐನೂಲೆ ಅಭಿಪ್ರಾಯಪಟ್ಟರು.
ಬೀದರ್ ತಾಲೂಕಿನ ಬಗದಲ್ ಗ್ರಾಮದ ಬಹುಮುಖ ಪ್ರತಿಭಾವಂತ ಕಲಾವಿದ ವೈಜಿನಾಥ ಸಜ್ಜನಶೆಟ್ಟಿ ಅವರ ಮನೆಯಲ್ಲಿ ಬೀದರ್ ಜಿಲ್ಲಾ ಮತ್ತು ತಾಲೂಕು ಕಸಾಪ ಆಯೋಜಿಸಿದ ’66ನೇಯ ಮನೆಯಂಗಳದಲ್ಲಿ ಮಾತು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಸಾಪ ನಡೆಸುತ್ತಿರುವ ‘ಮನೆಯಂಗಳದಲ್ಲಿ ಮಾತು’ ಕಾರ್ಯಕ್ರಮದ ಜೊತೆಗೆ ಗ್ರಾಮೀಣ ಭಾಗದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದರೆ ಕನ್ನಡ ಭಾಷೆ, ನಾಡು-ನುಡಿಗೆ ಹೆಚ್ಚಿನ ಗೌರವ ನೀಡಿದಂತಾಗುತ್ತದೆ. ಆ ನಿಟ್ಟಿನಲ್ಲಿ ಕಸಾಪ ಕೆಲಸ ಮಾಡಬೇಕು ಸಲಹೆ ನೀಡಿದರು.
ಕಷ್ಟದ ಜೀವನ ಶಿಸ್ತಿನ ಪಾಠ ಕಲಿಸುತ್ತದೆ. ಬದುಕು ನಾವು ಅಂದುಕೊಂಡಂತೆ ಇರದೇ ಸುಖ-ದುಃಖಗಳ ಸಮ್ಮಿಲನವಾಗಿದ್ದು, ಬಡತನ ಬದುಕಿನ ದೌರ್ಭಾಗ್ಯವಲ್ಲ, ಸಾಧನೆ ಮಾಡಲು ಅದೊಂದು ಸದಾವಕಾಶ. ಅವಕಾಶಗಳಿಲ್ಲವೆಂದು ಕೈಕಟ್ಟಿ ಕೂಡದೆ ನಾವೇ ಅವಕಾಶಗಳನ್ನು ಸೃಷ್ಟಿಸಿಕೊಂಡು ಮುಂದುವರೆಯಬೇಕು. ನವರಸ ಕಲಾಲೋಕದ ಅಧ್ಯಕ್ಷ ವೈಜಿನಾಥ ಸಜ್ಜನಶೆಟ್ಟಿ ತಮ್ಮ ಬದುಕಿನ ಸ್ವಾರಸ್ಯಕರ ಸಂಗತಿಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಈ ಸುದ್ದಿ ಓದಿದ್ದೀರಾ? ಬೀದರ್ | ‘ಇಂದಿರಾ ಕ್ಯಾಂಟೀನ್’ಗೆ ಬೇಕಿದೆ ಕಾಯಕಲ್ಪ
ಕಸಾಪ ಬೀದರ್ ತಾಲೂಕು ಅಧ್ಯಕ್ಷ ಎಂ ಎಸ್ ಮನೋಹರ ಅಧ್ಯಕ್ಷತೆ ವಹಿಸಿದರು. ಕಸಾಪ ಜಿಲ್ಲಾ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಆಶಯ ನುಡಿ ನುಡಿದರು. ಡಾ. ಸಂಗಪ್ಪ ತವಡಿ, ಬಸವರಾಜ ಹೂಗಾರ ಹಾಗೂ ಡಾ. ಬಸವರಾಜ ಬಲ್ಲೂರ ಅವರುಗಳು ಸಂವಾದ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಘಟಕದ ಉಪಾಧ್ಯಕ್ಷ ರಾಘವೇಂದ್ರ ಮುತ್ತಂಗಿ, ತಾಲೂಕು ಗೌರವ ಕಾರ್ಯದರ್ಶಿ ಜಗನ್ನಾಥ ಕಮಲಾಪೂರೆ, ಶ್ರೀ ರೇಣಸಿದ್ದೆಶ್ವರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಶಾಂತಕುಮಾರ ಸ್ವಾಮಿ, ಶಿವಸ್ವಾಮಿ, ಬಸವರಾಜ ಹಮ್ಮಾ, ವೀರಶೆಟ್ಟಿ ದೇಸಾಯಿ, ಪ್ರಭುರಾವ ಹಲಬುರ್ಗಿ, ಗುರುನಾಥ ರಾಜಗೀರಾ, ವೈಜಿನಾಥ ಬಂಪಳ್ಳಿ, ಕಲ್ಯಾಣರಾವ ನೇಳಗೆ, ಜಿಲ್ಲಾ ಕಸಾಪ ಕಾರ್ಯದರ್ಶಿ ಶಿವಕುಮಾರ ಕಟ್ಟೆ, ಟಿ ಎಂ ಮಚ್ಛೆ, ಬಸವರಾಜ, ಡಾ. ಮಲ್ಲಿಕಾರ್ಜುನ ನಿಂಗದಳ್ಳಿ ಹಾಗೂ ಇತರರು ಇದ್ದರು.