‘ಕಾಂತಾರ’ ಚಿತ್ರದ ಯಶಸ್ಸಿನ ಬೆನ್ನಲ್ಲೇ ನಿರ್ದೇಶಕ ರಿಷಬ್ ಶೆಟ್ಟಿಯಿಂದ ‘ಕಾಂತಾರ 2’ ಸಿನಿಮಾ ಬರಲಿದೆ ಎಂದು ಇಂದು ಅಧಿಕೃತವಾಗಿದೆ.
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ‘ಕಾಂತಾರ ಅಧ್ಯಾಯ-1’ರ ಫಸ್ಟ್ ಲುಕ್ ಅನ್ನು ಇಂದು ಯೂಟ್ಯೂಬ್ನಲ್ಲಿ ಬಿಡುಗಡೆಗೊಳಿಸಲಾಗಿದೆ. ಬಿಡುಗಡೆಯಾದ ಒಂದು ಗಂಟೆಯಲ್ಲೇ 1 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ.
ಕಾಂತಾರ ಚಿತ್ರದ ಮೊದಲ ಅಧ್ಯಾಯಕ್ಕೆ ಇಂದು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕುಂಭಾಸಿ ಶ್ರೀವಿನಾಯಕ ದೇವಸ್ಥಾನದಲ್ಲಿ ಚಿತ್ರತಂಡ ವಿಶೇಷ ಪೂಜೆಯನ್ನ ಸಲ್ಲಿಸಿ ಮುಹೂರ್ತ ನಡೆದ ಬೆನ್ನಲ್ಲೇ ಫಸ್ಟ್ ಲುಕ್ ಅನ್ನು ಯೂಟ್ಯೂಬ್ನಲ್ಲಿ ಬಿಡುಗಡೆಗೊಳಿಸಲಾಗಿದೆ. ‘ಇದು ಬರೀ ಬೆಳಕಲ್ಲ, ದರ್ಶನ’ ಎಂಬ ಟ್ಯಾಗ್ಲೈನ್ ಅನ್ನು ಕೂಡ ಬರೆಯಲಾಗಿದೆ.
ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ಮೂಡಿ ಬರಲಿರುವ ಚಿತ್ರದ ಫಸ್ಟ್ ಲುಕ್ ಅಘೋರಿ ಅವತಾರದಲ್ಲಿ ರಿಷಬ್ ಅಚ್ಚರಿ ಮೂಡಿಸುವಷ್ಟು ಕಂಡಿದ್ದಾರೆ. ಒಂದು ಕೈಯಲ್ಲಿ ತ್ರಿಶೂಲ ಮತ್ತೊಂದು ಕೈಯಲ್ಲಿ ಜಮದಗ್ನಿ ಕೊಡಲಿಯನ್ನು ಹಿಡಿದುಕೊಂಡಿರುವ ಪೋಸ್ಟರ್ ಅನ್ನು ಕೂಡ ಬಿಡುಗಡೆ ಮಾಡಲಾಗಿದೆ.
‘ಕಾಂತಾರ’ ಸಿನಿಮಾ ಮೊದಲು ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿತ್ತು. ಹಿಟ್ ಆದ ನಂತರ ಹಲವು ಭಾಷೆಗಳಲ್ಲಿ ಅದನ್ನು ಡಬ್ ಮಾಡಲಾಯಿತು. ಆದರೆ, ಕಾಂತಾರ 2 ಬರೋಬ್ಬರಿ ಏಳು ಭಾಷೆಗಳಲ್ಲಿ ನಿರ್ಮಾಣವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಜನವರಿಯಲ್ಲಿ ಚಿತ್ರಕ್ಕೆ ಶೂಟಿಂಗ್ ಆರಂಭ ಆಗಲಿದೆ ಎನ್ನಲಾಗುತ್ತಿದೆ.
‘ಕಾಂತಾರ’ ಚಿತ್ರ ಮೊದಲು ಕನ್ನಡದಲ್ಲಿ ಬಿಡುಗಡೆ ಆಗಿತ್ತು. ಆ ಬಳಿಕ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗೆ ಡಬ್ ಆಗಿ ಬಿಡುಗಡೆ ಕಂಡಿತು. ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆಲುವು ಕಂಡಿತು. ಈಗ ‘ಕಾಂತಾರ 2’ ಸಿನಿಮಾ ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಮೂಡಿಬರುತ್ತಿದೆ. ಕದಂಬರ ಕಾಲದಲ್ಲಿ ನಡೆಯುವ ಕಥೆಯನ್ನು ಸಿನಿಮಾ ಹೊಂದಿರಲಿದೆ ಎಂಬ ಮಾಹಿತಿಯನ್ನು ತಂಡ ಬಿಟ್ಟುಕೊಟ್ಟಿದೆ.
Step into the land of the divine 🔥
Presenting #KantaraChapter1 First Look & #Kantara1Teaser in 7 languages❤️🔥
▶️ https://t.co/GFZnkCg4BZ#Kantara1FirstLook #Kantara @shetty_rishab @VKiragandur @hombalefilms @HombaleGroup @AJANEESHB @Banglan16034849 @KantaraFilm pic.twitter.com/2GmVyrdLFK
— Hombale Films (@hombalefilms) November 27, 2023
‘ಕಾಂತಾರʼವನ್ನು ಕೇವಲ 16 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣ ಮಾಡಿ ವಿಶ್ವಾದ್ಯಂತ 400 ಕೋಟಿ ರೂ.ಗಳನ್ನು ಗಳಿಸಿತ್ತು. ಕಾಂತಾರ ಸಿನಿಮಾ ಸಾರ್ವಕಾಲಿಕವಾಗಿ ಕನ್ನಡದ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿತ್ತು.
ರಿಷಬ್ ಶೆಟ್ಟಿ ಹೇಳಿದ್ದೇನು?
ಕುಂದಾಪುರದಲ್ಲಿ ಮುಹೂರ್ತ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಿರ್ದೇಶಕ ರಿಷಬ್ ಶೆಟ್ಟಿ, “ಸದ್ಯ ಸಿನಿಮಾದ ಬಗ್ಗೆ ಏನೂ ಹೇಳುವುದಿಲ್ಲ. ಸದ್ಯಕ್ಕೆ ಫಸ್ಟ್ಲುಕ್ ಬಿಟ್ಟಿದ್ದೇವೆ.ಕಾಂತಾರ ಸಿನಿಮಾವನ್ನು ಕನ್ನಡದ ಜನ ದೊಡ್ಡಮಟ್ಟಿಗೆ ಕೊಂಡೊಯ್ದಿದ್ದರು. ಹಾಗಾಗಿ, ಕಾಂತಾರ ಅಧ್ಯಾಯ-1ರಲ್ಲೂ ಕೂಡ ಕನ್ನಡದ ಕಲಾವಿದರಿಗೆ ಮೊದಲ ಆದ್ಯತೆ ನೀಡಲಿದ್ದೇವೆ. ಕರಾವಳಿ ಭಾಗದಲ್ಲೇ ಹೆಚ್ಚಿನ ಶೂಟಿಂಗ್ ನಡೆಯಲಿದೆ. ಕಾಂತಾರದ ಚಿತ್ರ ತಂಡವೇ ಹೆಚ್ಚು ಅಧ್ಯಾಯ-1ರಲ್ಲೂ ಇರಲಿದೆ. ಕೆಲವೊಂದು ಬದಲಾವಣೆಗಳ ಸಹಿತ ಹೊಸಬರು ಕೂಡ ಸೇರಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಿದೆ. ಹೊಂಬಾಳೆ ಮತ್ತು ವಿಜಯ್ ಕಿರಗಂದೂರು ಅವರ ನಡುವೆ ನನಗೆ ದೊಡ್ಡ ಸಂಬಂಧ ಏರ್ಪಟ್ಟಿದೆ” ಎಂದು ತಿಳಿಸಿದ್ದಾರೆ.
ಮುಹೂರ್ತದ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ, ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.