ಕನ್ನಡದಲ್ಲಿ ನಾಮಫಲಕ ಅಳವಡಿಸುವ ವಿಚಾರವಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಸಿದ್ದ ಪ್ರತಿಭಟನೆಯ ವೇಳೆ ದಾಂಧಲೆ ನಡೆಸಿದ ಆರೋಪದ ಮೇಲೆ ಬಂಧಿತರಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡಗೆ ನ್ಯಾಯಾಲಯವು ಇಂದು(ಜ.6) ಜಾಮೀನು ಮಂಜೂರು ಮಾಡಿದೆ.
ಜಾಮೀನು ಅರ್ಜಿಯನ್ನು ಇಂದು ವಿಚಾರಣೆಗೆ ಕೈಗೆತ್ತಿಕೊಂಡ ದೇವನಹಳ್ಳಿಯ 5ನೇ ಹೆಚ್ಚುವರಿ ನ್ಯಾಯಾಲಯವು ಇಂದು ಜಾಮೀನು ಮಂಜೂರು ಮಾಡಿದೆ. ನ್ಯಾಯಾಧೀಶ ಬಿರಾದಾರ್ ದೇವೇಂದ್ರಪ್ಪ ಅವರು ಜಾಮೀನು ಮಂಜೂರು ಮಾಡಿ, ಆದೇಶಿಸಿದ್ದಾರೆ.
ಎಲ್ಲ ಅಂಗಡಿಗಳಲ್ಲಿ ಕನ್ನಡ ನಾಮಫಲಕ ಅಳವಡಿಸುವಂತೆ ಇತ್ತೀಚೆಗೆ ಬೆಂಗಳೂರಿನಲ್ಲಿ ಕರ್ನಾಟಕ ವೇದಿಕೆ ಬೃಹತ್ ರ್ಯಾಲಿ ನಡೆಸಿದ್ದ ವೇಳೆ ಬೇರೆ ಬೇರೆ ಭಾಷೆಗಳಲ್ಲಿದ್ದ ಬೋರ್ಡ್ಗಳನ್ನು ಧ್ವಂಸ ಮಾಡಲಾದ ಘಟನೆಗೆ ಸಂಬಂಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡರನ್ನು ಡಿ.28ರಂದು ಬಂಧಿಸಲಾಗಿತ್ತು.
ನಾರಾಯಣಗೌಡ ಸೇರಿದಂತೆ ಕರವೇಯ ಒಟ್ಟು 29 ಜನ ಕಾರ್ಯಕರ್ತರನ್ನು ಬಂಧಿಸಿದ್ದ ಚಿಕ್ಕಜಾಲ ಪೊಲೀಸರು, ದೇವನಹಳ್ಳಿಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಜನವರಿ 10ರವರೆಗೆ ನ್ಯಾಯಾಂಗ ಬಂಧನ ವಿಧಿಸಿ, ಆದೇಶಿಸಿದ್ದರು. ಬಂಧಿತರನ್ನು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಇರಿಸಲಾಗಿತ್ತು.
ಈ ನಡುವೆ ಜ.2ರಂದು ನಾರಾಯಣಗೌಡರವರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅಂದು ವಿಚಾರಣೆ ನಡೆಸಿದ್ದ ನ್ಯಾಯಾಧೀಶರು, ಜಾಮೀನು ನೀಡಲು ನಿರಾಕರಿಸಿ, ವಿಚಾರಣೆಯನ್ನು ಜ.6ಕ್ಕೆ ಮುಂದೂಡಿದ್ದರು. ಬಂಧಿತರಾದ 11 ದಿನ ನಂತರ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ. ಎ. ನಾರಾಯಣಗೌಡರಿಗೆ ಜಾಮೀನು ಮಂಜೂರು ಆಗಿದೆ.