ಹಿಂದೆಂದೂ ಕಂಡು, ಕೇಳರಿಯದಂತಹ ಆರ್ಥಿಕ ಸಂಕಷ್ಟಕ್ಕೆ ಕಾಂಗ್ರೆಸ್ ನಮ್ಮ ರಾಜ್ಯವನ್ನು ಸಿಲುಕಿಸಲಿದೆ ಎಂದು ಬಿಜೆಪಿ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, “ಈ ಹಿಂದಿನ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಕೋವಿಡ್ನಂತಹ ಆರ್ಥಿಕ ಬಿಕ್ಕಟ್ಟಿನ ಸಂಕಷ್ಟದ ನಡುವೆಯೂ, ಸಂಪನ್ಮೂಲವನ್ನು ಕ್ರೋಡೀಕರಿಸಿ, ಬಜೆಟ್ ಗಾತ್ರವನ್ನು ಹೆಚ್ಚಿಸಿ, ಉಳಿತಾಯ ಬಜೆಟ್ ಅನ್ನು ಮಂಡಿಸಿತ್ತು” ಎಂದು ಹೇಳಿದೆ.
“ಬಿಜೆಪಿಯ ಉಳಿತಾಯ ಬಜೆಟ್ ರಾಜ್ಯದ ಆರ್ಥಿಕ ಸ್ಥಿತಿಯನ್ನು ಪುನಶ್ಚೇತನಗೊಳಿಸಿ, ನಾವೀನ್ಯತೆಯ ಸೂಚ್ಯಂಕದಲ್ಲಿ ರಾಜ್ಯ ನಂಬರ್ 1 ಸ್ಥಾನ ಪಡೆದಿತ್ತು. ಆದರೆ, ಕುರ್ಚಿ ಹಿಡಿಯಬೇಕು ಎಂಬ ಏಕೈಕ ಕಾರಣಕ್ಕೆ, ಅವಾಸ್ತವಿಕ ಗ್ಯಾರಂಟಿಗಳನ್ನು ಘೋಷಿಸಿ, ಅವುಗಳನ್ನು ಈಡೇರಿಸಲು ಕರ್ನಾಟಕದ ಆರ್ಥಿಕತೆಯನ್ನು ವಿನಾಶಗೊಳಿಸುತ್ತಿದೆ” ಎಂದು ಕಿಡಿಕಾರಿದೆ.
“ಸಿದ್ದರಾಮಯ್ಯ ಅವರ ಅವಧಿಯಲ್ಲಿ, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಅನುದಾನಕ್ಕೂ ಸಹ ಕಡಿತ ಬೀಳಲಿದ್ದು, ರಾಜ್ಯದ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಲಿದೆ. ಹಿಂದೆಂದೂ ಕಂಡು, ಕೇಳರಿಯದಂತಹ ಆರ್ಥಿಕ ಸಂಕಷ್ಟಕ್ಕೆ ಕಾಂಗ್ರೆಸ್ ನಮ್ಮ ರಾಜ್ಯವನ್ನು ಸಿಲುಕಿಸಲಿದೆ” ಎಂದು ಆರೋಪಿಸಿದೆ.
ಈ ಸುದ್ದಿ ಓದಿದ್ದೀರಾ? ಗೃಹಲಕ್ಷ್ಮಿ ಅರ್ಜಿಗೆ ಯಾರೂ ಹಣ ಕೊಡಬೇಡಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್