- ಸುದ್ದಿಗೋಷ್ಠಿ ನಡೆಸಿ ಕಿಚ್ಚ ಸುದೀಪ್ ವಿರುದ್ಧ ಆರೋಪಿಸಿದ್ದ ನಿರ್ಮಾಪಕರು
- ಜೆಎಂಎಫ್ಸಿ ನ್ಯಾಯಾಲಯದಲ್ಲಿ ಮಾನನಷ್ಟ ಪ್ರಕರಣ ದಾಖಲಿಸಿದ ನಟ ಸುದೀಪ್
ನಟ ಕಿಚ್ಚ ಸುದೀಪ್ ಅವರು ತಮ್ಮ ವಿರುದ್ಧ ಆರೋಪ ಮಾಡಿದ ನಿರ್ಮಾಪಕರಾದ ಎನ್.ಎಂ ಕುಮಾರ್ ಮತ್ತು ಎಂ.ಎನ್ ಸುರೇಶ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಇಬ್ಬರೂ ನಿರ್ಮಾಪಕರು ಸುದೀಪ್ ಅವರು ಸಿನಿಮಾಕ್ಕಾಗಿ ಮುಂಗಡ ಹಣ ಪಡೆದು ವಂಚಿಸಿದ್ದಾರೆ ಎಂದು ದೂರಿದ್ದರು. ಅಲ್ಲದೆ ಇತ್ತೀಚೆಗೆ ‘ಹುಚ್ಚ‘ ಸಿನಿಮಾದ ನಿರ್ಮಾಪಕ ರೆಹಮಾನ್ ಸಹ ಸುದೀಪ್ ತಮಗೆ ₹35 ಲಕ್ಷ ಹಣ ನೀಡಬೇಕು ಎಂದು ಆರೋಪಿಸಿದ್ದರು.
ನಿರ್ಮಾಪಕರಾದ ಕುಮಾರ್ ಹಾಗೂ ಸುರೇಶ್ ಮಾಡಿರುವ ಆರೋಪಗಳ ಬೇಷರತ್ ಕ್ಷಮೆ ಕೋರುವಂತೆ ಕಿಚ್ಚ ಸುದೀಪ್ ಅವರು ವಕೀಲರ ಮೂಲಕ ಇಬ್ಬರಿಗೂ ನೋಟಿಸ್ ಕಳುಹಿಸಿದ್ದರು. ಅಲ್ಲದೆ ಕ್ಷಮೆ ಕೋರದಿದ್ದರೆ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದರು.
ಸುದೀಪ್ ಅವರು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಕುಮಾರ್, ಸುರೇಶ್ ಹಾಗೂ ರೆಹಮಾನ್ ವಿರುದ್ಧ ವಕೀಲ ಅಜಯ್ ಕಡಕೋಳ್ ಅವರ ಮೂಲಕ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಅಲ್ಲದೆ ನಿರ್ಮಾಪಕರ ಆರೋಪ ಸುಳ್ಳು ಎಂಬುದಕ್ಕೆ ಕೆಲವು ದಾಖಲೆಗಳನ್ನು ನೀಡಿದ್ದಾರೆ ಎಂದು ವರದಿಯಾಗಿದೆ.
ಕಿಚ್ಚ ಸುದೀಪ್ ಅವರ ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಲಯ ವಿಚಾರಣೆಯನ್ನು ಆಗಸ್ಟ್ 17ಕ್ಕೆ ಮುಂದೂಡಿದೆ. ನ್ಯಾಯಾಲಯದಿಂದ ಹೊರಬಂದ ನಂತರ ಸುದೀಪ್ ಸುದ್ದಿಗಾರರ ಜತೆ ಮಾತನಾಡಿದರು.
“ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಹಾಗೂ ಎಲ್ಲ ಸಂಘಗಳ ಮೇಲೆ ನನಗೆ ಗೌರವ ಇದೆ. ನನ್ನ ವೈಯಕ್ತಿಕ ಹಿತಾಸಕ್ತಿಗೆ ಅದನ್ನು ಬಳಸುವುದಿಲ್ಲ. ಆದ್ದರಿಂದ ನನ್ನ ವಿರುದ್ಧದ ಆರೋಪಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ್ದೇನೆ” ಎಂದು ಹೇಳಿದರು.
ಕಿಚ್ಚ ಸುದೀಪ್ ಪ್ರಶ್ನೆಯೊಂದಕ್ಕೆ ಉತ್ತರಿಸಿ, “ದೇವರು ಎಲ್ಲರಿಗೂ ಒಳಿತು ಮಾಡಲಿ. ಉತ್ತರ ನೀಡುವ ಸಮಯ ಬಂದಾಗ ಉತ್ತರಿಸುತ್ತೇನೆ” ಎಂದು ತಿಳಿಸಿದರು.
ನಿರ್ಮಾಪಕರ ನಷ್ಟದ ಕುರಿತ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸುದೀಪ್, “ನಾನು ಎಲ್ಲರಿಗೂ ಸಹಾಯ ಮಾಡುತ್ತೇನೆ ಎಂದು ಕಲಾವಿದನಾಗಿಲ್ಲ. ತೋಚಿದಂತೆ ಮಾತನಾಡಬಾರದು” ಎಂದು ನಿರ್ಮಾಪಕರ ಆರೋಪಗಳಿಗೆ ತಿರುಗೇಟು ನೀಡಿದರು.
“ಜಾಕ್ ಮಂಜು ಏನು ಉತ್ತರ ಕೊಡಬೇಕಿತ್ತು ಅದನ್ನು ಕೊಟ್ಟಿದ್ದಾರೆ. ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘಕ್ಕೆ ಒಂದು ಘನತೆ ಇದೆ, ನಾನೇ ಬಂದು ಪತ್ರಿಕಾಗೋಷ್ಠಿ ಮಾಡಿದರೆ ಅವರಿಗೂ ನನಗೂ ವ್ಯತ್ಯಾಸ ಇರುವುದಿಲ್ಲ. ನನ್ನ ನಡೆ ಮತ್ತೊಬ್ಬರಿಗೆ ಉದಾಹರಣೆಯಾಗಬೇಕು. ನನ್ನ ಮೇಲಿನ ಆರೋಪಗಳಿಗೆ ಉತ್ತರವಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದೇನೆ. ಇದರಿಂದ ನಾನು ಸಂಪಾದಿಸಿರುವ ಹೆಸರಿಗೆ ಧಕ್ಕೆ ಬರುವುದಿಲ್ಲ” ಎಂದು ಉತ್ತರಿಸಿದರು.
ಇತ್ತೀಚೆಗೆ ಸುದ್ದಿಗೋಷ್ಟಿ ನಡೆಸಿದ್ದ ನಿರ್ಮಾಪಕರಾದ ಎನ್ ಎಂ ಕುಮಾರ್, “ನಟ ಸುದೀಪ್ ಅವರು ಸಿನಿಮಾ ಮಾಡಿಕೊಡುವುದಾಗಿ ಮುಂಗಡ ಹಣ ಪಡೆದು ಹಲವು ವರ್ಷಗಳಾಗಿವೆ. ಈವರೆಗೆ ಸಿನಿಮಾ ಮಾಡಲು ದಿನಾಂಕ ನೀಡಿಲ್ಲ. ಅಲ್ಲದೆ ಕೊಟ್ಟಿರುವ ಹಣವನ್ನೂ ವಾಪಸ್ ಕೊಟ್ಟಿಲ್ಲ” ಎಂದು ಆರೋಪಿಸಿದ್ದರು.
ಈ ಸುದ್ದಿ ಓದಿದ್ದೀರಾ? ಹುಟ್ಟುಹಬ್ಬಕ್ಕೆ ʼಸಂಜು ವೆಡ್ಸ್ ಗೀತಾ-2ʼ ಸಿನಿಮಾ ಘೋಷಿಸಿದ ಶ್ರೀನಗರ ಕಿಟ್ಟಿ
“ನಾನು ಕೊಟ್ಟಿರುವ ಹಣದಿಂದಲೇ ಸುದೀಪ್ ಆರ್ ಆರ್ ನಗರದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ವಿಕ್ರಾಂತ್ ರೋಣ ಸಿನಿಮಾವನ್ನು ನಾನೇ ನಿರ್ಮಾಣ ಮಾಡಬೇಕಿತ್ತು, ಆದರೆ ಅದನ್ನೂ ತಡೆದರು” ಎಂದು ದೂರಿದ್ದರು.
ಕಿಚ್ಚ ಸುದೀಪ್ ಅವರು ನಿರ್ಮಾಪಕರ ಆರೋಪಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿ, “ನನ್ನ ತಾಳ್ಮೆಯನ್ನು, ಒಳ್ಳೆಯತನವನ್ನು ದುರುಪಯೋಗ ಮಾಡಿಕೊಳ್ಳಬೇಡಿ” ಎಂದು ಎಚ್ಚರಿಕೆ ನೀಡಿದ್ದರು.