ಸೋಮಣ್ಣ ಪರ ಚಾಮರಾಜನಗರದಲ್ಲಿ ಕಿಚ್ಚ ಸುದೀಪ್ ಪ್ರಚಾರ
ತಮಗಾಗಿ ಲಾಠಿ ಏಟು ತಿಂದ ಅಭಿಮಾನಿಗಳ ಬಗ್ಗೆ ಸೊಲ್ಲೆತ್ತದ ನಟ
ಸ್ಯಾಂಡಲ್ವುಡ್ನ ಖ್ಯಾತ ನಟ ಕಿಚ್ಚ ಸುದೀಪ್ ಶುಕ್ರವಾರ ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಾಲಿ ಸಚಿವ, ವಿ. ಸೋಮಣ್ಣ ಇಬ್ಬರೂ ಎದುರಾಳಿಗಳಾಗಿ ಸ್ಪರ್ಧಿಸಿರುವ ವರುಣಾ ಕ್ಷೇತ್ರದಿಂದ ಮಾತ್ರ ಸುದೀಪ್ ಅಂತರ ಕಾಯ್ದುಕೊಂಡಿದ್ದಾರೆ.
ತಾವು ಮೈಸೂರು ಭಾಗದಲ್ಲಿ ಪ್ರಚಾರ ನಡೆಸುತ್ತಿರುವ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಸುದೀಪ್, “ಇಂದು ಮೈಸೂರು ಸುತ್ತಲಿನ ಗುಂಡ್ಲುಪೇಟೆ, ಚಾಮರಾಜನಗರ, ಕೊಳ್ಳೇಗಾಲ, ಹನೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದೇನೆ” ಎಂದು ತಿಳಿಸಿದ್ದಾರೆ.
ಮೈಸೂರು ಸುತ್ತಲಿನ ಪ್ರದೇಶಗಳಲ್ಲಿ ಬಿಜೆಪಿ ಪರ ಪ್ರಚಾರ ನಡೆಸುವುದಾಗಿ ಹೇಳಿಕೊಂಡಿರುವ ಸುದೀಪ್ ಎಲ್ಲಿಯೂ ವರುಣಾ ಕ್ಷೇತ್ರದ ಬಗ್ಗೆ ಮಾತನಾಡಿಲ್ಲ. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರ ಪ್ರತಿಸ್ಪರ್ಧಿಯಾಗಿರುವ ಸೋಮಣ್ಣ ಚಾಮರಾಜನಗರ ಕ್ಷೇತ್ರದಿಂದಲೂ ಕಣಕ್ಕಿಳಿದಿದ್ದಾರೆ. ಚಾಮರಾಜನಗರದಲ್ಲಿ ಸೋಮಣ್ಣ ಪರ ಪ್ರಚಾರ ಮಾಡಲು ಸಜ್ಜಾಗಿರುವ ಸುದೀಪ್ ಜಾಣ್ಮೆಯಿಂದಲೇ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರ ವಿರುದ್ಧ ಪ್ರಚಾರ ಮಾಡದಿರಲು ನಿರ್ಧರಿಸಿದಂತಿದೆ. ಅದೇ ಕಾರಣಕ್ಕೆ ಮೈಸೂರು ಹೊರತುಪಡಿಸಿ ಸುತ್ತಮುತ್ತಲಿನ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲು ಒಪ್ಪಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರೊಂದಿಗಿನ ಉತ್ತಮ ಬಾಂಧವ್ಯ ಕೂಡ ಸುದೀಪ್ ಅವರ ಈ ನಡೆಗೆ ಕಾರಣ ಎನ್ನಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಚುನಾವಣಾ ಪ್ರಚಾರ | ಸುದೀಪ್ ನೋಡಲು ಮುಗಿಬಿದ್ದ ಅಭಿಮಾನಿಗಳಿಗೆ ಲಾಠಿ ಏಟು
ಕಳೆದ ಒಂದು ವಾರದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಸುದೀಪ್ ಗುರುವಾರ ರಾಯಚೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ರೋಡ್ ಶೋ ನಡೆಸಿದ್ದಾರೆ. ಸುದೀಪ್ ರಾಯಚೂರಿಗೆ ಹೆಲಿಕಾಪ್ಟರ್ನಲ್ಲಿ ಬಂದಿಳಿದಾಗ ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದ ಅಭಿಮಾನಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಈ ಹಿಂದೆ ಕೂಡ್ಲಿಗಿಯಲ್ಲೂ ಸುದೀಪ್ ಅಭಿಮಾನಿಗಳ ಮೇಲೆ ಇದೇ ರೀತಿ ಲಾಠಿ ಪ್ರಹಾರ ನಡೆಸಲಾಗಿತ್ತು. ಆದರೆ, ಅಭಿಮಾನಿಗಳನ್ನು ನೋಡಿ ಖುಷಿಯಾಯಿತು. ತಾವು ಬೆಂಬಲಿಸಿರುವ ಅಭ್ಯರ್ಥಿಗಳು ಗೆಲುವು ಸಾಧಿಸಲಿ ಎಂದೆಲ್ಲಾ ಟ್ವೀಟ್ ಮಾಡಿರುವ ಸುದೀಪ್, ತಮ್ಮ ಕಣ್ಣೆದುರೇ ತಮಗಾಗಿ ಲಾಠಿ ಏಟು ತಿಂದ ಜನರ ಬಗ್ಗೆ ಪ್ರತಿಕ್ರಿಯಿಸುವ ಪ್ರಯತ್ನವನ್ನೇ ಮಾಡಿಲ್ಲ.