ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದಿಂದ ಕರ್ನಾಟಕ ರಾಷ್ಟಸಮಿತಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಪಕ್ಷದ ಕಾರ್ಯಕರ್ತರು, ಮುಖಂಡರು ಗೆಲುವಿಗೆ ಶ್ರಮಿಸಿ ದೇಶದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಅಭ್ಯರ್ಥಿ ಗಣಪತಿ ರಾಠೋಡ ಮನವಿ ಮಾಡಿದರು.
ವಿಜಯಪುರ ಪಕ್ಷದ ಕಚೇರಿಯಲ್ಲಿ ಕೆಆರ್ಎಸ್ ಪಕ್ಷದ ಬಿ ಫಾರ್ಮ್ ಪಡೆದ ನಂತರ ಮಾತನಾಡಿದ ಅವರು, “ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ಜನತೆ ರೋಸಿಹೋಗಿದ್ದು, ಹಣ ಸಂಪಾದನೆ ಮಾಡುವುದನ್ನೇ ರಾಜಕೀಯವನ್ನಾಗಿ ಮಾಡಿಕೊಂಡಿರುವುದರಿಂದ ಜನರ ಕಷ್ಟಗಳು ರಾಜಕಾರಣಿಗಳಿಗೆ ತಿಳಿಯುತ್ತಿಲ್ಲ. ಈ ಪಕ್ಷಗಳದ್ದು ಕೇವಲ ಇನ್ವೆಸ್ಟ್ಮೆಂಟ್ ರಾಜಕೀಯವಾಗಿದ್ದು, ಪಾರದರ್ಶಕ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ. ಜನರಿಗೆ ಪಾರದರ್ಶಕ ಆಡಳಿತದ ಅವಶ್ಯಕತೆ ಇದ್ದು, ನಮ್ಮ ಪಕ್ಷದ ತತ್ವ ಸಿದ್ಧಾಂತವೂ ಇದೇ ಆಗಿದೆ” ಎಂದು ಹೇಳಿದರು.
“ಚುನಾವಣೆಗಳಲ್ಲಿ ಹಣ, ಹೆಂಡದ ಆಸೆ ಆಮಿಷವೊಡ್ಡದೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ನಮ್ಮ ಪಕ್ಷ ಮಾಡಲಿದೆ. ಜನರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಈಡೇರಿಸಲು ನಮ್ಮ ಪಕ್ಷವು ಪಣ ತೊಟ್ಟಿದ್ದು, ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷವು ಸ್ಪರ್ಧೆ ನಡೆಸುತ್ತಿದ್ದು, ವಿಜಯಪುರ ಜಿಲ್ಲೆ ಲೋಕಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತಿದ್ದೇನೆ. ಪಕ್ಷದ ಕಾರ್ಯಕರ್ತರು ಮುಖಂಡರು ಹೆಚ್ಚು ಶ್ರಮವಹಿಸುವ ಮೂಲಕ ನನ್ನ ಗೆಲುವಿಗೆ ಸಹಕರಿಸಬೇಕು” ಎಂದು ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ನೀತಿ ಸಂಹಿತೆ ಉಲ್ಲಂಘನೆ ಆರೋಪ; ಜಯಪ್ರಕಾಶ್ ಹೆಗ್ಡೆ ವಿರುದ್ಧ ಪ್ರಕರಣ ದಾಖಲು
ಇದೇ ಸಂದರ್ಭದಲ್ಲಿ ಕೆಆರ್ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿರುವ ಶಿವಾನಂದ ಯಡಹಳ್ಳಿ ಅವರು ಮಾತನಾಡಿದರು. ಅವರ ಜೊತೆಯಲ್ಲಿ ಜಿಲ್ಲಾಧ್ಯಕ್ಷರಾದ ಅಶೋಕ ಜಾಧವ, ರಾಕೇಶ ಇಂಗಳಗಿ, ವಿಕ್ರಮ ವಾಗಮೋರೆ, ಹಮೀದ್ ಇನಾಮದಾರ, ಪ್ರವೀಣ ಕನಸೆ, ಕಾಂತುಗೌಡ ಬೆಂಡವಾಡ, ನಬಿರಸುಲ ಜಮಾದಾರ, ಸುರೇಶ ನಿಂಬೋಣಿ, ದೀಪ ಮರನೂರ, ರಾವುತಪ್ಪ ಮದಬಾವಿ, ದುರ್ಗಪ್ಪ ಬೂದಿಹಾಳ, ಶ್ರೀಶೈಲ ಮಠ, ಲಕ್ಷಣ್ ಚಡಚಣ ಗೋರಕನಾಥ ಚೌವಾಣ ಮತ್ತಿತರರು ಇದ್ದರು.