ಅಸ್ಪೃಶ್ಯತೆ ನಿರ್ಮೂಲನೆಗೆ ಕಾನೂನುಗಳಿದ್ದರೂ, ಹಳ್ಳಿಗಳಲ್ಲಿ ಅಸ್ಪೃಶ್ಯತೆ ಮುಂದುವರಿದಿದೆ. ಇತ್ತೀಚೆಗೆ, ಅಸ್ಪೃಶ್ಯತೆ ಆಚರಣೆಯ ಕ್ರೌರ್ಯಗಳು ವರದಿಯಾಗಿ, ಬೆಳಕಿಗೆ ಬರುತ್ತಿವೆ. ಅದೇ ರೀತಿ, ಬಳ್ಳಾರಿ ಜಿಲ್ಲೆಯಲ್ಲಿ ಹೋಟೆಲ್ ಮಾಲೀಕರೊಬ್ಬರು ಅಸ್ಪೃಶ್ಯತೆಯ ಕ್ರೌರ್ಯ ಮೆರೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಜಿಲ್ಲೆಯ ಕುರುಗೋಡು ತಾಲೂಕಿನ ಗುತ್ತಿಗನೂರು ಗ್ರಾಮದ ಹೋಟೆಲ್ನಲ್ಲಿ ದಲಿತರಿಗೆ ಊಟ ನೀಡಲು ನಿರಾಕರಿಸಿದ್ದಾರೆ. ‘ಹೋಟೆಲ್ ಮುಚ್ಚುತ್ತೇನೆ. ಆದರೆ, ನಿಮಗೆ ಊಟ ಕೊಡುವುದಿಲ್ಲ’ ಎಂದು ಹೋಟೆಲ್ನ ನಡೆಸುವ ಮಹಿಳೆ ದಲಿತ ಯುವಕರಿಗೆ ಹೇಳಿದ್ದಾರೆ ಎಂದು ವರದಿಯಾಗಿದೆ.
ಆಕೆಯ ನಡೆಯನ್ನು ಖಂಡಿಸಿರುವ ಯುವಕರು ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಕರಣದ ಮಾಹಿತಿ ಪಡೆದ ಕುರುಗೋಡು ತಹಶೀಲ್ದಾರ್ ರಾಘವೇಂದ್ರ ಹಾಗೂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ, ಹೆಚ್ಚಿನ ಮಾಹಿತಿಗಾಗಿ ಕುರುಗೋಡು ತಹಶೀಲ್ದಾರ್ ರಾಘವೇಂದ್ರ ಅವರನ್ನು ಈದಿನ.ಕಾಮ್ ಸಂಪರ್ಕಿಸಿದ್ದು, ಅವರು ನಮ್ಮ ಕರೆಗೆ ಉತ್ತರಿಸಿಲ್ಲ.
ಈ ಹಿಂದೆ, ಧಾರವಾಡದಲ್ಲಿ ದಲಿತರಿಗೆ ಹೋಟೆಲ್, ಸಲೂನ್ಗಳಲ್ಲಿ ಪ್ರವೇಶವಿಲ್ಲ ಎಂಬ ಸುದ್ದಿ ಬೆಳಕಿಗೆ ಬಂದಿತ್ತು. ಇತ್ತೀಚೆಗೆ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲುಕಿನ ಗೇರಮರಡಿ ಗ್ರಾಮದಲ್ಲಿ ದಲಿತ ಯುವಕನ ಮೇಲೆ ಗೊಲ್ಲ ಸಮುದಾಯದ ಗುಂಪು ಹಲ್ಲೆ ನಡೆಸಿತ್ತು. ಇದೀಗ, ಬಳ್ಳಾರಿಯಲ್ಲಿ ಅಸ್ಪೃಶ್ಯತೆ ಆಚರಣೆ ಪ್ರಕರಣ ಬೆಳಕಿಗೆ ಬಂದಿದೆ.