ಜನರ ಜ್ವಲಂತ ಸಮಸ್ಯೆಗಳಾದ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ಶಿಕ್ಷಣದ ಖಾಸಗೀಕರಣ ಹಾಗೂ ರೈತ ಕಾರ್ಮಿಕರ ಸಮಸ್ಯೆಗಳ ವಿರುದ್ಧ ಎಸ್.ಯು.ಸಿ.ಐ(ಸಿ) ವತಿಯಿಂದ ಕರೆ ನೀಡಿರುವ ದೇಶವ್ಯಾಪಿ ಸಹಿ ಸಂಗ್ರಹ ಆಂದೋಲನಕ್ಕೆ ಇಂದು ಯಾದಗಿರಿ ತಾಲೂಕಿನ ಹೆಡಗಿಮದ್ರಾ ಗ್ರಾಮದಲ್ಲಿ ಚಾಲನೆ ನೀಡಿದರು.
“ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ದಶಕವೇ ಆಗುತ್ತಿದೆ. ಆದರೆ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ ಸೇರಿದಂತೆ ಅನೇಕ ಸಮಸ್ಯೆಗಳು ಬಿಟ್ಟು ಕೇಂದ್ರ ಸರ್ಕಾರ ಇದೀಗ ವಿಕಸಿತ ಭಾರತದ ಬಗ್ಗೆ ಪ್ರಚಾರ ಮಾಡುತ್ತಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರಗಳು ಖಾಸಗೀಕರಣಗೊಂಡು ಜನರ ಕೈಗೆ ಎಟುಕದಂತಾಗಿದೆ. ವಿದ್ಯಾವಂತರಿಗೂ ಉದ್ಯೋಗಗಳು ದೊರಕುತ್ತಿಲ್ಲ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಕೂಲಿ ಕಾರ್ಮಿಕರು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುವುದು ಸಾಮಾನ್ಯ ಎಂಬಂತಾಗಿದೆ” ಎಂದು ಎಸ್.ಯು.ಸಿ.ಐ(ಸಿ) ಸಂಘಟನೆಯ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
“ರಾಜ್ಯದ ಕಾಂಗ್ರೆಸ್ ಸರ್ಕಾರ ಕೂಡ ಜನರ ನಿರೀಕ್ಷೆಯಂತೆ ಆಡಳಿತ ನಡೆಸುತ್ತಿಲ್ಲ. ಹಿಂದಿನ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತದ ಲಾಭ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಕೇವಲ ಗ್ಯಾರಂಟಿ ಯೋಜನೆಗಳೇ ಜನರ ಸಮಸ್ಯೆಗಳಿಗೆ ಪರಿಹಾರ ಎಂದು ಮೂಗಿಗೆ ತುಪ್ಪ ಸವರುತ್ತಿದೆ. ಖಾಲಿ ಹುದ್ದೆಗಳ ಭರ್ತಿ, ಶಿಕ್ಷಣದ ಅನುದಾನ ಹೆಚ್ಚಿಸಿ ಸರ್ಕಾರಿ ಶಾಲೆಗಳ ಮುಚ್ಚಲು ಕೈಬಿಡಬೇಕು. ರೈತರ ಜಮೀನುಗಳಿಗೆ ಸಕಾಲಕ್ಕೆ ಕಾಲುವೆಗೆ ನೀರು ಹರಿಸಬೇಕು, ವಿದ್ಯುತ್ ಖಾಸಗೀಕರಣ ಕೈಬಿಡಬೇಕು. ಉದ್ಯೋಗ ಖಾತ್ರಿ ಪರಿಣಾಮಕಾರಿ ಜಾರಿಗೊಳಿಸಿ ಕಾರ್ಮಿಕರು ಗುಳೆ ಹೋಗುವುದು ತಪ್ಪಿಸಬೇಕು. ಹೆಚ್ಚು ಪ್ಯಾಸೆಂಜರ್ ರೈಲುಗಳನ್ನು ಓಡಿಸಿ ಬಡವರ ಓಡಾಟಕ್ಕೆ ಅನುಕೂಲ ಮಾಡಬೇಕು, ಸರ್ಕಾರಿ ಆಸ್ಪತ್ರೆಗಳು ಹೆಚ್ಚಿಸಿ ಗುಣಮಟ್ಟದ ಚಿಕಿತ್ಸೆ ಸಿಗುವಂತಾಗಬೇಕು ಮತ್ತು ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷತೆ ಒದಗಿಸಬೇಕು” ಎಂದು ಒತ್ತಾಯಿಸಿದರು.
ಬೆಲೆ ಏರಿಕೆಯನ್ನು ತಡೆಗಟ್ಟಬೇಕು, ಜನವಿರೋಧಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ತಕ್ಷಣವೇ ಹಿಂಪಡೆಯಬೇಕು. ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ ಮತ್ತು ಕೇಸರಿಕರಣವನ್ನು ನಿಲ್ಲಿಸಬೇಕು. ಎಲ್ಲರಿಗೂ ಖಾಯಂ ಉದ್ಯೋಗಗಳನ್ನು ಒದಗಿಸಬೇಕು. ಉದ್ಯೋಗ ನೀಡುವ ತನಕ ನಿರುದ್ಯೋಗ ಭತ್ಯೆ ನೀಡಬೇಕು. ಆರೋಗ್ಯ ವಲಯದ ಖಾಸಗೀಕರಣವನ್ನು ನಿಲ್ಲಿಸಬೇಕು. ಏಕಸ್ವಾಮ್ಯ ಬಂಡವಾಳಶಾಹಿ ಪರವಾದ, ಜನವಿರೋಧಿ ವಿದ್ಯುತ್ ಕಾಯ್ದೆ-2022 ರದ್ದುಗೊಳಿಸಬೇಕು. ಅರಣ್ಯ ಸಂರಕ್ಷಣಾ ಕಾಯಿದೆ-2022 ರದ್ದು ಮಾಡುವುದು ಸೇರಿದಂತೆ ಒಟ್ಟು 11 ಬೇಡಿಕೆಗಳು ಈಡೇರಿಸಬೇಕೆಂದು ಆಗ್ರಹಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಜಿಲ್ಲೆಯಲ್ಲಿ ಎಫ್ ಎಂ. ಕೇಂದ್ರ ಆರಂಭಕ್ಕೆ ಮಂಜೂರಾತಿ : ಸಚಿವ ಭಗವಂತ ಖೂಬಾ
ಈ ಸಂದರ್ಭದಲ್ಲಿ ಎಸ್.ಯು.ಸಿ.ಐ(ಸಿ) ಯಾದಗಿರಿ ಜಿಲ್ಲಾ ಕಾರ್ಯದರ್ಶಿ ಶರಣಗೌಡ ಗೂಗಲ್, ಜಿಲ್ಲಾ ಸಮಿತಿ ಸದಸ್ಯರಾದ ಜಮಾಲ್ಸಾಬ್, ರಾಮಲಿಂಗಪ್ಪ ಬಿ.ಎನ್, ಶಿಲ್ಪಾ ಬಿ.ಕೆ ಸೇರಿದಂತೆ ಪ್ರಮುಖರಾದ ಆಂಜನೇಯ, ಅಂಬ್ರೇಶ ದಣಿ, ರಾಮರೆಡ್ಡಿ, ಸಾಬಣ್ಣ, ಚಂದಪ್ಪ, ಶಿವಪ್ಪ, ವಿಶ್ವರಾದ್ಯ, ಅಲಿಸಾಬ್, ಮೈಬೂಬಿ, ಮಲ್ಲಮ್ಮ, ದ್ಯಾವಮ್ಮ, ಶಿವುಲೀಲಾ ಸೇರಿದಂತೆ ಇತರಿದ್ದರು.