“ಹುಬ್ಬಳ್ಳಿಯ ಎಂ.ಟಿ.ಎಸ್ ಕಾಲೊನಿಯಲ್ಲಿರುವ ರೈಲ್ವೆ ಇಲಾಖೆಯ ಜಾಗವನ್ನು ಹರಾಜು ಹಾಕುವುದರಲ್ಲಿ ನನ್ನ ಕೈವಾಡವಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದು, ಸಾಕ್ಷಿ ಒದಗಿಸದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವೆ” ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ರೈಲ್ವೆ ಇಲಾಖೆಯ ವಿರುದ್ಧ ಸುರ್ಜೇವಾಲಾ ಮಾಡುತ್ತಿರುವ ಆರೋಪ ಸುಳ್ಳು. ಸುರ್ಜೇವಾಲಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೂ ಹೇಳಿದ್ದೇನೆ” ಎಂದು ಮಾಹಿತಿ ನೀಡಿದರು.
“ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪ ಅಪ್ಪಟ ಬಾಲಿಶತನದಿಂದ ಕೂಡಿದೆ. ತಮ್ಮ ಹೇಳಿಕೆಗೆ ಸೂಕ್ತ ಪುರಾವೆ ನೀಡಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಸ್ಪೃಶ್ಯತೆ, ಮೌಢ್ಯ, ಜಾತೀಯತೆ ತೊಲಗಿಸಿ ಬಸವಣ್ಣನಿಗೆ ನಿಜ ಗೌರವ ಸಲ್ಲಿಸೋಣ
“ಕಾಂಗ್ರೆಸ್ನವರಿಗೆ ಈ ಜಾಗದ ಮೇಲೆ ಕಣ್ಣು ಬಿದ್ದಿರುವ ಸಂಶಯವಿದೆ. ಈ ಹರಾಜು ಪ್ರಕ್ರಿಯೆ ಆನ್ಲೈನ್ನಲ್ಲಿದ್ದು, ಯಾರು ಬೇಕಾದವರೂ ಪಾಲ್ಗೊಳ್ಳಬಹುದು. ಜಾಗಕ್ಕೆ ನಿಗದಿಪಡಿಸಿರುವ ದರ ₹83 ಕೋಟಿ. ಕಡಿಮೆ ಎಂದಾದರೆ ಕಾಂಗ್ರೆಸ್ನವರೇ ₹150 ಕೋಟಿ, ₹200 ಕೋಟಿ ನೀಡಿ ಜಾಗ ಪಡೆದುಕೊಳ್ಳಲಿ, ಬೇಡ ಎಂದವರಾರು” ಎಂದು ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.
“ರೈಲ್ವೆ ಇಲಾಖೆ ತಮ್ಮ ಬಳಿ ಇರುವ ಜಾಗ ಅನುಪಯುಕ್ತವಾಗಿದ್ದರೆ ಅದನ್ನು ಗುತ್ತಿಗೆ ಆಧಾರದ ಮೇಲೆ ನೀಡಲು ರೈಲ್ವೆ ನಿಯಮಾವಳಿಗಳಲ್ಲಿ ಅವಕಾಶವಿದೆ. 13 ಎಕರೆ ಇರುವ ಈ ಜಾಗವನ್ನು ವಾಣಿಜ್ಯ ಉದ್ದೇಶಕ್ಕಾಗಿ ಹಾಗೂ ವಸತಿ ಸೌಲಭ್ಯ ಕಲ್ಪಿಸುವುದಕ್ಕಾಗಿ ಬಳಸಲು ₹ 83 ಕೋಟಿ ಕನಿಷ್ಠ ದರ ನಿಗದಿ ಮಾಡಿ ಟೆಂಡರ್ ಕರೆಯಲಾಗಿದೆ. ಇದಕ್ಕೂ ಮುಂಚೆ 5 ಸಲ ಟೆಂಡರ್ ಕರೆದಾಗ ಯಾರೊಬ್ಬರೂ ಜಾಗ ಪಡೆಯಲು ಮುಂದೆ ಬಂದಿಲ್ಲ ಎಂದು ವಿವರಿಸಿದರು. ಈ ಜಾಗದಲ್ಲಿ ಇದ್ದ ಮನೆಗಳನ್ನು 6-7 ವರ್ಷಗಳ ಹಿಂದೆಯೇ ತೆರವುಗೊಳಿಸಲಾಗಿದೆ. ಇದನ್ನು ಹಾಗೆಯೇ ಬಿಟ್ಟರೆ ಯಾರಾದರೂ ಅತಿಕ್ರಮಣ ಮಾಡಿಕೊಳ್ಳುವ ಸಾಧ್ಯತೆ ಇದೆ. ಅದಕ್ಕಾಗಿ ಜಾಗವನ್ನು ಗುತ್ತಿಗೆಗೆ ನೀಡಲು ನಿರ್ಧರಿಸಲಾಗಿದೆ” ಎಂದು ವಿವರಿಸಿದರು.
ಸುರ್ಜೇವಾಲಾ ಆರೋಪ ಏನು?
ಹುಬ್ಬಳ್ಳಿಯ ಎಂಟಿಎಸ್ ನಗರದಲ್ಲಿರುವ ₹1,360 ಕೋಟಿ ಮೌಲ್ಯದ 13 ಎಕರೆ ರೈಲ್ವೆ ಜಮೀನನ್ನು ₹83 ಕೋಟಿಗೆ ಗುತ್ತಿಗೆಗೆ ಕೊಡಲು ಹೊರಟಿದ್ದಾರೆ. ಜಮೀನು ಗುತ್ತಿಗೆ ಪ್ರಕ್ರಿಯೆ ಸಂಶಯಾಸ್ಪದವಾಗಿದೆ. 30 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಗುತ್ತಿಗೆ ನೀಡಲು ಅವಕಾಶವಿಲ್ಲ. 99 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲು ಉದ್ದೇಶಿಸಲಾಗಿದೆ. ಇದರ ಹಿಂದಿನ ಉದ್ದೇಶವೇನು? ಇದೂ ಶೇಕಡ 40ರಷ್ಟು ಕಮಿಷನ್ ದಂಧೆಯ ಮುಂದುವರಿದ ಭಾಗವೆ? ಎಂದು ಕೇಳಿದ್ದರಲ್ಲದೇ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲಾದ ಜೋಶಿ ಕೈವಾಡವಿರುವ ಬಗ್ಗೆ ಅನುಮಾನವಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದರು.