ನಮ್ ಜನ | ದುಡಿದರೂ ದಣಿದರೂ ನಿಸೂರಾಗದ ನಿರ್ಮಲಮ್ಮನ ಬದುಕು

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)

ಅಂದೊಂದಿನ ಸಾವಿತ್ರಮ್ಮನವರ ಮನೆಗೆ ನಿಗದಿಯಾದ ಸಮಯಕ್ಕೆ ಸರಿಯಾಗಿ ನಿರ್ಮಲಮ್ಮ ಹೋದರು. ಆದರೆ, ನಿರ್ಮಲಮ್ಮ ಕೆಲಸಕ್ಕೆ ಹೋದ ಸಮಯಕ್ಕೂ, ಸಾವಿತ್ರಮ್ಮನವರ ಪತಿರಾಯ ಮನೆಗೆ ತಿರುಗಿ ಬರುವುದಕ್ಕೂ ಒಂದೇ ಆಯಿತು. ಇಬ್ಬರೂ ಒಂದೇ ಸಮಯಕ್ಕೆ ಮನೆಯೊಳಕ್ಕೆ ಬಂದದ್ದನ್ನು ಗಮನಿಸಿದ ಮನೆಯೊಡತಿಯ ಅನುಮಾನದ ರೋಗಕ್ಕೆ ರೆಕ್ಕೆ-ಪುಕ್ಕ ಮೂಡಿತು. ನಂತರದ ಘಟನೆಯಿಂದ ನಿರ್ಮಲಮ್ಮನ ಬದುಕಿನ ದಿಕ್ಕೇ ಬದಲಾಯಿತು…

ಹೊತ್ತು ಮೂಡುವ ಮುಂಚೆಯೇ ಎದ್ದು ಗಂಡನ ತಿಂಡಿಗೆ, ಮಧ್ಯಾಹ್ನದ ಊಟಕ್ಕೆ ಮಾಡಿಟ್ಟು, ಬುತ್ತಿ ಕಟ್ಟಿಟ್ಟು, ಆರು ಗಂಟೆಗೆಲ್ಲ ಮನೆಗೆಲಸಕ್ಕೆ ಹಾಜರಾಗುವ ನಿರ್ಮಲಮ್ಮನ ಸಮಯಪಾಲನೆಗೆ ಸೂರ್ಯನೇ ನಾಚಬೇಕು. ಆರು ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ, ಸಂಜೆ ನಾಲ್ಕರಿಂದ ಏಳರವರೆಗೆ – ದಿನದಲ್ಲಿ ಸುಮಾರು ಎಂಟು ಮನೆಯ ಕೆಲಸ ಮಾಡುವ ನಿರ್ಮಲಮ್ಮನಿಗೆ, ಒಂದೊಂದು ಮನೆಯಲ್ಲಿ ಒಂದೊಂದು ರೀತಿಯ ಕೆಲಸ ಮತ್ತು ಆ ಕೆಲಸಕ್ಕೆ ತಕ್ಕ ಸಂಬಳ.

ಅಂಥದ್ದೇ ಒಂದು ಮನೆಗೆಲಸ – ಪಾತ್ರೆ ತೊಳೆದು, ಕಸ ಗುಡಿಸಿ, ಮನೆ ಒರೆಸಿ, ಬಟ್ಟೆ ಒಗೆಯುವುದು. ಮನೆಯೊಡತಿ ಸಾವಿತ್ರಮ್ಮ ಸ್ಥಿತಿವಂತರು, ಕೆಲಸದವರನ್ನೂ ಭಾವುಣಿಕೆಯಿಂದ ಕಾಣುವವರು. ಉಳಿದ ಊಟ-ತಿಂಡಿ ಕೊಟ್ಟು, ಕಷ್ಟ-ಸುಖ ಕೇಳಿ ಕಕ್ಕುಲತೆ ತೋರುತ್ತಿದ್ದರು. ನಿರ್ಮಲಮ್ಮ ಕೂಡ ಅವರ ಕಾಳಜಿ, ಕನಿಕರಕ್ಕೆ ಕರಗಿ, ನಂಬಿಕಸ್ಥ ಕೆಲಸಗಾರ್ತಿ ಎಂದು ಹೆಸರು ಗಳಿಸಿದ್ದರು. ಬೇರೆ ಮನೆಯ ಕೆಲಸಗಳು ಏರುಪೇರಾದರೂ, ಕಳೆದ ಐದು ವರ್ಷಗಳಿಂದ ಸಾವಿತ್ರಮ್ಮನವರ ಮನೆ ಕೆಲಸ ಕೈತಪ್ಪಿರಲಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅಂದು ಎಂದಿನಂತೆ, ಸಾವಿತ್ರಮ್ಮನವರ ಮನೆಗೆ ನಿಗದಿಯಾದ ಸಮಯಕ್ಕೆ ಸರಿಯಾಗಿ – ಹನ್ನೊಂದೂವರೆಗೆ ಹೋದರು. ನಿರ್ಮಲಮ್ಮ ಕೆಲಸಕ್ಕೆ ಹೋದ ಸಮಯಕ್ಕೂ, ಸಾವಿತ್ರಮ್ಮನವರ ಪತಿರಾಯ ಮನೆಗೆ ತಿರುಗಿ ಬರುವುದಕ್ಕೂ ಒಂದೇ ಆಯಿತು. ಕೆಲಸದಾಕೆ ಮತ್ತು ಗಂಡ ಇಬ್ಬರೂ ಒಂದೇ ಸಮಯಕ್ಕೆ ಮನೆಯೊಳಕ್ಕೆ ಬಂದದ್ದನ್ನು ಗಮನಿಸಿದ ಮನೆಯೊಡತಿಯ ಅನುಮಾನದ ರೋಗಕ್ಕೆ ರೆಕ್ಕೆ-ಪುಕ್ಕ ಮೂಡಿತು. ಬೇಡದ್ದೆಲ್ಲ ಬಂದು ತಲೆ ಕೆಟ್ಟಿತು.

ಪರಿಣಾಮವಾಗಿ, ಗಂಡನನ್ನು ಮತ್ತು ಮನೆಗೆಲಸದ ನಿರ್ಮಲಮ್ಮನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಹುಮ್ಮಸ್ಸಿನಲ್ಲಿ ಸಾವಿತ್ರಮ್ಮನವರು, ಸುತ್ತಲ ನಾಲ್ಕಾರು ಮನೆಗಳಿಗೆ ಕೇಳುವಂತೆ ಕೂಗಾಡತೊಡಗಿದರು. “ಇಬ್ಬರ ನಡುವೆ ಎಷ್ಟು ದಿನದಿಂದ ನಡೆಯುತ್ತಿದೆ ಈ ಆಟ?” ಎಂದು ಅರಚಾಡಿ ಭೂಮಿ-ಆಕಾಶವನ್ನು ಒಂದುಮಾಡಿಬಿಟ್ಟರು. ಕೊಳಕು ಮಾತಿನಲ್ಲಿಯೇ ನಿರ್ಮಲಮ್ಮನ ಬಟ್ಟೆ ಬಿಚ್ಚಿ ಬೀದಿಯಲ್ಲಿ ಬೆತ್ತಲೆಗೊಳಿಸಿದರು. ತಾನು ನಂಬಿದ ಸಾವಿತ್ರಮ್ಮನವರಿಂದ ಇಂತಹ ಮಾತು ಮತ್ತು ವರ್ತನೆ ಕಂಡು ಕಂಗಾಲಾದ ನಿರ್ಮಲಮ್ಮ, ಮಾತು ಕಳೆದುಕೊಂಡು ಕಲ್ಲಾಗಿ ನಿಂತುಬಿಟ್ಟರು. ಸಾವಿತ್ರಮ್ಮನ ಪತಿಯೂ ಮಾತನಾಡದೆ ಕತ್ತು ಬಗ್ಗಿಸಿದವನು ಮೇಲೆತ್ತಲಿಲ್ಲ. ನೋಡುತ್ತಿದ್ದ ಬೀದಿಯ ಜನಕ್ಕೆ ಅವರಿಬ್ಬರ ಮೌನ, ಸಾವಿತ್ರಮ್ಮನ ಕೂಗಾಟ – ಘಟನೆಗೆ ಸಾಕ್ಷಿ ಒದಗಿಸಿತ್ತು. ನೆರೆದ ಜನಕ್ಕೆ ಜಗಿಯಲು ರಸಗವಳ ಸಿಕ್ಕು, ತಲೆಗೊಂದು ಮಾತನಾಡಿದರು.

ನಿರ್ಮಲಮ್ಮನ ದುರದೃಷ್ಟಕ್ಕೆ ಸಾವಿತ್ರಮ್ಮನ ಪತಿ ಚಪಲ ಚನ್ನಿಗರಾಯನಾಗಿದ್ದ. ಆತನ ಬಗ್ಗೆ ಪತ್ನಿಗೆ ಅನುಮಾನವಿತ್ತು. ಅದೇ ವಿಷಯಕ್ಕೆ ಮನೆಯಲ್ಲಿ ಆಗಾಗ ಜಗಳ ಜರುಗಿ ಅತಿರೇಕಕ್ಕೆ ಹೋಗುತ್ತಿತ್ತು. ಅದೇ ಮೂಡ್‌ನಲ್ಲಿದ್ದ ಮನೆಯೊಡತಿಗೆ, ಗಂಡ ಅವೇಳೆಯಲ್ಲಿ ಮನೆಗೆ ಬಂದದ್ದು, ನಿರ್ಮಲಮ್ಮ ಅದೇ ಸಮಯಕ್ಕೆ ಮನೆಗೆ ಕೆಲಸಕ್ಕೆ ಬಂದದ್ದು ಅನುಮಾನವನ್ನು ಗಟ್ಟಿಗೊಳಿಸಿತ್ತು. ಆದರೆ, ನಿರ್ಮಲಮ್ಮ ಐದು ವರ್ಷದಿಂದಲೂ ಅದೇ ಸಮಯಕ್ಕೆ ಬರುತ್ತಿದ್ದರೂ, ಮನೆಯೊಡತಿಗೆ ಅದು ಗೊತ್ತಿದ್ದರೂ, ಗಂಡನ ಮೇಲಿನ ಸಿಟ್ಟು ಎಲ್ಲವನ್ನೂ ಮರೆಸಿತ್ತು; ಕೆಲಸದಾಕೆಯೊಂದಿಗೆ ಸಂಬಂಧ ಬೆರೆಸಿ ಮಾತನಾಡುವಂತೆ, ರಂಪ-ರಾದ್ಧಾಂತವೆಬ್ಬಿಸುವಂತೆ ಪ್ರೇರೇಪಿಸಿತ್ತು.

ಕೊನೆಗೆ ತನ್ನ ತಪ್ಪಿಲ್ಲದಿದ್ದರೂ, ಏನೂ ನಡೆಯದಿದ್ದರೂ, ಏನನ್ನೂ ಹೇಳಲಾಗದ ನಿರ್ಮಲಮ್ಮ ಮೌನವಾಗಿ ಆ ಮನೆಯಿಂದ ನಿರ್ಗಮಿಸಿದರು. ಗಂಡ-ಹೆಂಡತಿ ಸ್ವಲ್ಪ ಹೊತ್ತು ಮುನಿಸಿಕೊಂಡು ಮತ್ತೆ ಒಂದಾದರು. ಆದರೆ, ಮನೆಗೆಲಸದ ನಿರ್ಮಲಮ್ಮ ಅನೈತಿಕ ಸಂಬಂಧದ ಹಣೆಪಟ್ಟಿ ಹೊತ್ತುಕೊಳ್ಳಬೇಕಾಯಿತು. ಕೆಲಸ ಕಳೆದುಕೊಂಡು, ಅಲ್ಲಿಯವರೆಗೆ ದುಡಿದ ದುಡ್ಡನ್ನೂ ಕೇಳದಂತಾಯಿತು.

ನಿರ್ಮಲಮ್ಮ ಬಡವಿ, ಅನಕ್ಷರಸ್ಥೆ, ಬೆಂಬಲಕ್ಕೆ ಜಾತಿ ಇಲ್ಲ, ಜನರೂ ಇಲ್ಲ. ಅನಗತ್ಯವಾಗಿ ಅಂಟಿಕೊಂಡ ಹಣೆಪಟ್ಟಿಯಿಂದ ಆ ಬೀದಿಯ ಬೇರೆ ಮನೆಗಳ ಕೆಲಸಕ್ಕೆ ಕಾಲಿಡುವಂತೆಯೂ ಇಲ್ಲ…

* * *

“ಚಪ್ಲೀನ ಕಾಲ್ನಲ್ಲಿ ಮೆಟ್ಕಂಡ್ ಬತ್ತಿಯಾ! ಕೈಯಲ್ಲಿ ತಂದುಕೊಟ್ಟಿದ್ರೆ ನಿನ್ನ ಕೈಯೇನು ಸೇದ್‌ಹೋಗ್ತಿತ್ತಾ? ಆಗಲ್ಲ ಅಂದ್ರೆ ಹೇಳಬೇಕಿತ್ತು…”

– ಪೆಡಿಕ್ಯೂರ್ (ಬಿರಿದ ಕಾಲಿನ ಹಿಮ್ಮಡಿ ಉಜ್ಜಿ ಸರಿಮಾಡುವುದು) ಮಾಡಿಸಿಕೊಳ್ಳುತ್ತಿದ್ದ ಮಹಿಳೆ, ‘ಅರ್ಬನ್ ಕಂಪನಿ’ಯಿಂದ ನಿಯೋಜಿತಗೊಂಡಿದ್ದ ಬ್ಯೂಟಿಷಿಯನ್ ನಿರ್ಮಲಮ್ಮಗೆ, ಕೂತ ಜಾಗಕ್ಕೆ ಚಪ್ಪಲಿ ತರಲು ಹೇಳಿ, ಅವರು ಚಪ್ಪಲಿಯನ್ನು ಕಾಲಿನಲ್ಲಿ ಮೆಟ್ಟಿಕೊಂಡು ತಂದುಕೊಟ್ಟಿದ್ದಕ್ಕೆ ಕೋಪಗೊಂಡು ಬಯ್ದಿದ್ದರು, ಕೊಸರಿಕೊಂಡು ಕೂತಿದ್ದರು.

ನಿರ್ಮಲಮ್ಮ ನಮ್ ಜನ ಬಸವರಾಜು ಮೇಗಲಕೇರಿ

ಬ್ಯೂಟಿಷಿಯನ್ ನಿರ್ಮಲಮ್ಮ, ಅವರಿಗೆ ಸರಿ-ತಪ್ಪುಗಳ ಮನವರಿಕೆ ಮಾಡಿಕೊಡುವುದಕ್ಕಿಂತ ಹೆಚ್ಚಾಗಿ ತನಗೆ ಬರಬೇಕಾದ ಸಂಭಾವನೆ, ಕಂಪನಿಯ ಪಾಯಿಂಟ್ಸ್, ಅಭಿಪ್ರಾಯಗಳ ಲೆಕ್ಕಾಚಾರದಲ್ಲಿ ಮುಳುಗಿ, ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಳು.

ಆದರೂ ಸಾವರಿಸಿಕೊಂಡು, “ಕೊರೋನ ಟೈಮಲ್ಲವೇ ಮೇಡಂ… ಕೈಗೆ ಗ್ಲೌಸ್ ಹಾಕಿದ್ದೆ, ಬಿಚ್ಚಿಟ್ಟು ತಂದುಕೊಡುವಷ್ಟು ಟೈಮ್ ಇರಲಿಲ್ಲ,” ಎಂದು ಸಮಜಾಯಿಷಿ ಕೊಟ್ಟಳು. ಆದರೂ ಆಕೆಯ ಕೋಪ ಶಮನಗೊಳ್ಳಲಿಲ್ಲ. ಆ ಬಿಗು ವಾತಾವರಣದಲ್ಲಿಯೇ ಕೆಲಸ ಮುಗಿಸಿ ಹೊರಬರಬೇಕಾಯಿತು.

ಪೆಡಿಕ್ಯೂರ್ ಮಾಡಿಸಿಕೊಂಡ ಮಹಿಳೆ ‘ಅರ್ಬನ್ ಕ್ಲಾಪ್ ಸರ್ವಿಸ್ ಸೆಂಟರ್‌’ಗೆ, “ಆ್ಯಟಿಟ್ಯೂಡ್ ಜಾಸ್ತಿ, ಕಸ್ಟಮರ್ ಜೊತೆ ಹೇಗೆ ಬಿಹೇವ್ ಮಾಡಬೇಕೆಂದು ಗೊತ್ತಿಲ್ಲ, ಕೆಲಸ ತೃಪ್ತಿಕರವಾಗಿಲ್ಲ, ಹಣ ಕೊಡುವುದಿಲ್ಲ,” ಎಂದು ತಮ್ಮ ಅಭಿಪ್ರಾಯವನ್ನು ಮೆಸೇಜ್ ಮಾಡಿದ್ದರು.

ಕೋವಿಡ್ ಲಾಕ್‌ಡೌನ್ ಕಾಲದಲ್ಲಿ ಬ್ಯೂಟಿ ಪಾರ್ಲರ್ ಕೆಲಸ ಸ್ಥಗಿತವಾಗಿದ್ದಾಗ, ‘ಅರ್ಬನ್ ಕಂಪನಿ’ ಗಿರಾಕಿಗಳ ಕರೆಯ ಮೇರೆಗೆ ಬ್ಯೂಟಿಷಿಯನ್‌ಗಳನ್ನು ಮನೆಗೇ ಕಳಿಸಿ ಸೇವೆ ಒದಗಿಸುವ ಕೆಲಸ ಮಾಡುತ್ತಿತ್ತು. ಇದು ನೀವಿದ್ದಲ್ಲಿಗೆ ಬರುವ ಓಲಾ, ಉಬರ್, ಸ್ವಿಗ್ಗಿ, ಡನ್‌ಝೋ ಸೇವೆಗಳ ರೀತಿ. ನಿರ್ಮಲಮ್ಮನಿಗೆ ಮನೆಗೆಲಸ ಕಡಿಮೆಯಾದಾಗ, ಅವರಿವರನ್ನು ಕಾಡಿಬೇಡಿ ಬ್ಯೂಟಿಷಿಯನ್ ಕೆಲಸ ಕಲಿತು, ಸಾಲ ಮಾಡಿ ಸೆಕೆಂಡ್ ಹ್ಯಾಂಡ್ ಸ್ಕೂಟಿ ಖರೀದಿಸಿದಳು. ‘ಅರ್ಬನ್ ಕಂಪನಿ’ಗೆ ಹೆಸರು ನೋಂದಾಯಿಸಿದಳು. ಕರೆ ಬಂತು, ಹೋದಳು. ಸುಮಾರು 12 ಕಿಲೋಮೀಟರ್ ಪ್ರಯಾಣ ಮಾಡಿ, 2 ಗಂಟೆ ಸಮಯ ಮತ್ತು ಶ್ರಮ ವ್ಯಯಿಸಿ, ಬರುವ 250 ರೂಪಾಯಿಗಾಗಿ ಎದುರು ನೋಡುತ್ತಿದ್ದಳು.

ಆದರೆ, ಸೇವೆ ಮಾಡಿಸಿಕೊಂಡ ಮಹಿಳೆಯಿಂದ ಮತ್ತು ಕೆಲಸಕ್ಕೆ ಅವಕಾಶ ಮಾಡಿಕೊಟ್ಟ ಕಂಪನಿಯಿಂದ ನಕಾರಾತ್ಮಕ ಉತ್ತರ ಸಿದ್ಧವಿತ್ತು. ಬ್ಯೂಟಿಷಿಯನ್ ನಿರ್ಮಲಮ್ಮ ಹೇಳಿಕೇಳಿ ಬಡವಿ, ಹೆಚ್ಚಿಗೆ ಓದಿಲ್ಲ, ಕನ್ನಡ ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲ, ಸಂಘಟನೆಯ ಬೆಂಬಲವೂ ಇಲ್ಲ. ಆಕೆಗಾದ ಅನ್ಯಾಯವನ್ನು ಕೇಳುವವರೂ ಇಲ್ಲ.

* * *

ನಿರ್ಮಲಳಿಗೆ 10 ವರ್ಷವಿದ್ದಾಗ, 4ನೇ ಕ್ಲಾಸ್‌ನಲ್ಲಿ ಓದುತ್ತಿದ್ದಾಗ, ಆಕೆಯ ಪೋಷಕರು ದೂರದ ಮಂಡ್ಯದ ಹಳ್ಳಿಯಿಂದ ಬೆಂಗಳೂರಿಗೆ ಬಂದರು. ಆಕೆಯ ಪೋಷಕರಿಗೆ ಓದು-ಬರಹ ಗೊತ್ತಿಲ್ಲ, ಸ್ಥಿತಿವಂತರೂ ಅಲ್ಲ. ಹಾಗಾಗಿ ಅವರಿಗೆ ಗೊತ್ತಿದ್ದು, ಸುಲಭವಾಗಿ ಸಿಕ್ಕಿದ್ದು ಮನೆಗೆಲಸ. ಮನೆ ತುಂಬಾ ಹಸಿದ ಹೊಟ್ಟೆಗಳು. ಜೊತೆಗೆ ಬಾಡಿಗೆ ಮನೆ. ಹೇಗೋ ಕಷ್ಟಪಟ್ಟು 10ನೇ ತರಗತಿವರೆಗೆ ಓದಿದ ನಿರ್ಮಲ, ಓದುತ್ತಲೇ ಮನೆಗೆಲಸ ಮಾಡಿ ಸಂಸಾರದ ನೊಗ ಹೊತ್ತಳು. ಎಸೆಸೆಲ್ಸಿ ನಂತರ ಓದು ಮುಂದುವರಿಸಲಾಗದೆ, ಹತ್ತಾರು ವರ್ಷಗಳ ಕಾಲ ಮನೆಗೆಲಸ ಮಾಡಿ ಸುಸ್ತಾದ, ವಯಸ್ಸಾದ ಪೋಷಕರನ್ನು ಮನೆಯಲ್ಲಿ ಕೂರಿಸಿ, ತಾನು ದುಡಿಯಲು ನಿಂತಳು.

ವಯಸ್ಸಿಗೆ ಬಂದಾಗ, ಸುಂದರಿಯಂತೆ ಕಂಡಾಗ ಊರಿನ ಕಡೆಯ ಸಂಬಂಧಿಗಳೇ ಬಂದರು, ಮದುವೆ ಮಾಡಿಕೊಂಡರು. ಬಂದ ಗಂಡ ನಿರ್ಮಲಳನ್ನು ರಮಿಸುವ, ರಕ್ಷಣೆ ಒದಗಿಸುವ ಬದಲಿಗೆ ಸುಲಿಯುವ ಸುಲಿಗೆಕೋರನಾದ. ಕೆಲಸಕ್ಕೆ ಹೋಗದೆ, ಹೋದರೆ ಕಾಸು ಕೊಡದೆ ಕುಡಿದು ತೂರಾಡತೊಡಗಿದ. ಅಷ್ಟಾದರೂ ಗಂಡ, ಮನೆಯ ಮಾನ ಕಳೆಯಬಾರದು ಎಂದು ನೋವನ್ನು ನುಂಗಿಕೊಂಡು, ಸಮಸ್ಯೆಗಳನ್ನು ಸಂಭಾಳಿಸಿಕೊಂಡು ಒಂದಷ್ಟು ವರ್ಷ ನೂಕಿದಳು. ಈ ನಡುವೆ ಗಂಡು ಮಗು ಹುಟ್ಟಿತು. ಅದು ತನ್ನಂತಾಗಬಾರದು ಎಂದು ಬಾಲ್ಯದಿಂದಲೇ ಇಂಗ್ಲಿಷ್ ಕಲಿಯಲಿ ಎಂದು ಕಾನ್ವೆಂಟಿಗೆ ಹಾಕಿದಳು. ಬೇರೆ ಊರಿನ ಹಾಸ್ಟೆಲಿನಲ್ಲಿಟ್ಟು ಓದಿಸತೊಡಗಿದಳು. ಮನೆ ಬಾಡಿಗೆ, ಮಗುವಿನ ಸ್ಕೂಲು-ಟ್ಯೂಷನ್ ಫೀಸು, ಹಾಸ್ಟೆಲ್ ಖರ್ಚು… ಜೊತೆಗೆ ಗಂಡನ ಕುಡಿತಕ್ಕೆ ಹಣ ಒದಗಿಸಲು ಗಾಣದ ಎತ್ತಿನಂತೆ ದುಡಿಯತೊಡಗಿದಳು.

ಕೊರೋನ ಕಾಲದಲ್ಲಿ ಮನೆಗೆಲಸಕ್ಕೆ ಕರೆಯದೆ ಹೋದಾಗ, ಹೊಸ ದುಡಿಮೆಯ ಮಾರ್ಗ ಕಂಡುಕೊಂಡು ಬ್ಯೂಟಿಷಿಯನ್ ಕೆಲಸ ಕಲಿತಳು. ಸ್ಮಾರ್ಟ್ ಫೋನ್ ಖರೀದಿಸಿ, ನೆಟ್ ಪ್ಯಾಕ್ ಹಾಕಿಸಿ ಆನ್‌ಲೈನ್ ಮೂಲಕ ‘ಅರ್ಬನ್ ಕ್ಲಾಪ್‌’ನೊಂದಿಗೆ ಸಂಪರ್ಕ ಕಲ್ಪಿಸಿಕೊಂಡಳು. ಆ ಮೂಲಕ ಮನೆಮನೆಗೆ ಹೋಗಿ ಬ್ಯೂಟಿಷಿಯನ್ ಕೆಲಸ ಮಾಡಿ ಬದುಕಿಗಾಗಿ ಭಿನ್ನ ಮಾರ್ಗ ಹುಡುಕಿಕೊಂಡಳು.

ನಿರ್ಮಲಮ್ಮನ ವಯಸ್ಸು ಈಗ 40ರ ಆಸುಪಾಸು. ಸ್ಕೂಟಿ ಖರೀದಿಸಿ, ಕೆಲಸಗಳಿಗೆ ಸಮಯ ಹೊಂದಿಸಿಕೊಂಡು, ಬಿಡುವಿಲ್ಲದ ಕೆಲಸಗಳಲ್ಲಿ ಮುಳುಗಿಹೋದಳು. ಅತ್ತ ದೂರದ ಊರಿನಲ್ಲಿ ಮಗ – ಅಮ್ಮನ ದುಡಿಮೆಯ ಬಗ್ಗೆ ಕಿಂಚಿತ್ತೂ ಬೆಲೆ ಇಲ್ಲದೆ, ಹಣ ಪೋಲು ಮಾಡುತ್ತ, ವಿದ್ಯಾಭ್ಯಾಸದ ಬಗ್ಗೆ ಆಸಕ್ತಿ ಕಳೆದುಕೊಂಡು ಅಡ್ಡ ಹಾದಿ ಹಿಡಿಯತೊಡಗಿದ. ಇತ್ತ ಕೆಲಸ ಮಾಡುವ ಯಂತ್ರದಂತಾದ ನಿರ್ಮಲಮ್ಮನ ದೇಹ ರಸ ಹಿಂಡಿದ ಕಬ್ಬಿನ ಸಿಪ್ಪೆಯಂತಾಯಿತು. ಅಂತಹ ದೇಹ ಕೂಡ ಸೋಮಾರಿ ಗಂಡನಲ್ಲಿ ಅನುಮಾನ ಹುಟ್ಟಿಸಿತು. ಅದಕ್ಕೆ ಸಾವಿತ್ರಮ್ಮನ ಮನೆಯ ಪ್ರಕರಣ ಪುಷ್ಟಿ ನೀಡಿತು. ಗಾಡಿ-ಫೋನ್ ಖರೀದಿ ಅನುಮಾನ ಬಿತ್ತಿ ಅಸೂಯೆ ಕೆರಳಿಸಿತು. ಕುಡಿದು ಬಂದ ಗಂಡ ಪ್ರತಿದಿನ ತನ್ನ ಜೊತೆ ಮಲಗಲು ಒತ್ತಾಯಿಸತೊಡಗಿದ. ಒಪ್ಪದಿದ್ದಾಗ, “ಯಾರೊಂದಿಗೋ ಸಂಬಂಧ ಇಟ್ಕಂಡಿದಿಯ, ಹಂಗಾಗಿ ನನ್ನ ಜೊತೆ ಮಲಗ್ತಾಯಿಲ್ಲ,” ಎಂದು ತಗಾದೆ ತೆಗೆದು ಹಿಡಿದು ಬಡಿಯತೊಡಗಿದ. ಸಂಸಾರ ಸಂಭಾಳಿಸಲಾಗದ ತನ್ನ ಸೋಲನ್ನು ಮರೆಮಾಚಲು, ಸಮಸ್ಯೆಗಳಿಂದ ಪಲಾಯನ ಮಾಡಲು ಹಲವು ಮಾರ್ಗಗಳನ್ನು ಹುಡುಕಿಕೊಳ್ಳತೊಡಗಿದ.

ಈತನ್ಮಧ್ಯೆ, ದೂರದ ಊರಲ್ಲಿ ಓದುತ್ತಿದ್ದ ಬೆಳೆದ ಮಗ ಅಪರೂಪಕ್ಕೆ ಮನೆಗೆ ಬಂದ. ತನಗಿಂತ ಎತ್ತರಕ್ಕೆ ಬೆಳೆದು ನಿಂತ ಮಗನ ಕಂಡ ಖುಷಿಯಲ್ಲಿ ನಿರ್ಮಲಮ್ಮ ಚಿಕನ್ ತಂದು ಅಡುಗೆ ಮಾಡಿ, ಇಬ್ಬರೂ ಕೂತು ಊಟ ಮಾಡಿ ಒಟ್ಟಿಗೆ ಮಲಗಿದರು. ಯಥಾಪ್ರಕಾರ ಕುಡಿದು ಬಂದ ಗಂಡ, “ಬಾ…” ಎಂದ, ಬರದಿದ್ದಾಗ ಒಟ್ಟಿಗೆ ಮಲಗಿದ್ದ ಅಮ್ಮ-ಮಗನಿಗೂ ಸಂಬಂಧ ಕಲ್ಪಿಸಿ, ಬೀದಿಯಲ್ಲಿ ನಿಂತು ಕೆಟ್ಟದಾಗಿ ಬಯ್ದು ರಂಪ ಮಾಡಿದ. ಕೊನೆಗೆ, ಬೀದಿಯ ಜನರೇ ಕುಡುಕ ಗಂಡನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಪೊಲೀಸರ ಮುಂದೆ, ಮಗನೇ ಅಪ್ಪನ ಕುಡಿತ, ಸೋಮಾರಿತನ, ಅಸೂಯೆ, ಅನುಮಾನವನ್ನೆಲ್ಲ ವಿವರವಾಗಿ ವರದಿ ಮಾಡಿದ. ಆಗಲೂ ನಿರ್ಮಲಮ್ಮ ಮಾತನಾಡಲಿಲ್ಲ, ನಿರ್ಲಿಪ್ತವಾಗಿ ನೋಡುತ್ತಿದ್ದಳು.

ಕೊನೆಗೆ ಪೊಲೀಸರೇ, “ಅಮ್ಮ-ಮಗನ ಬಗ್ಗೆ ಅನುಮಾನಪಡೋ ಪ್ರಾಣಿ ನೀನೊಬ್ಬನೇ ಕಣೋ. ಆಕೆ ಏನೋ ಕಷ್ಟಬಿದ್ದು ಮಗನನ್ನು ಮನೆಯನ್ನು ನೋಡಿಕೊಳ್ತಿದ್ದಾಳೆ. ನಿಂದು ಅತಿಯಾಯ್ತು, ನೀನು ಜಾಗ ಖಾಲಿ ಮಾಡು. ಮನೆ ಕಡೆ ಕಾಲಿಟ್ಟರೆ ಒದ್ದು ಒಳಕ್ಕಾಗ್ತಿನಿ,” ಎಂದು ಬೆದರಿಸಿ ಗಂಡನಿಂದ ಮುಕ್ತಿ ಕೊಡಿಸಿದರು.

ಮಗನೂ ಓದಲಿಕ್ಕೆ ಹಾಸ್ಟೆಲ್ ಪಾಲಾದ, ಗಂಡನೂ ಮನೆ ಬಿಟ್ಟು ಹೋದ. ಈಗ ನಿರ್ಮಲಮ್ಮ ಸರ್ವ ಸ್ವತಂತ್ರ ಮಹಿಳೆ. ಆದರೆ, ಆ ಸ್ವತಂತ್ರ ಆಕೆಗೆ ಬೇಕಾಗಿಲ್ಲ. ಗಂಡ ಎಂಬ ಕುಡುಕನಿಂದ ಸಿಕ್ಕ ಬಿಡುಗಡೆ, ಆಕೆ ಬಯಸಿದ್ದಲ್ಲ. ದಿನವಿಡೀ ದುಡಿದರೂ, ದಣಿದರೂ ನಿದ್ರೆ ಹತ್ತುತ್ತಿಲ್ಲ. ರಾತ್ರಿ ಮಲಗುವಾಗ ಗಂಡನಿಗಾಗಿ ಊಟ ಎತ್ತಿಡುವ ಅಭ್ಯಾಸ ಇವತ್ತಿಗೂ ಹೋಗಿಲ್ಲ.

ಸುಮಾರು 30 ವರ್ಷಗಳ ಕಾಲ ನಿರಂತರವಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು, ಚಕ್ರವೇ ನಾಚುವಂತೆ, ಕಾಲವೇ ಕಂಗಾಲಾಗುವಂತೆ ದುಡಿದರೂ ಬದುಕಿನಲ್ಲಿ ಸಣ್ಣ ನೆಮ್ಮದಿಯೂ ಸಿಗಲಿಲ್ಲ; ಅದು ಸಿಗಲಿ ಎಂದು ಆಕೆ ಕೂಡ ದೇವರನ್ನು ಬೇಡಿಕೊಳ್ಳಲಿಲ್ಲ. ಎಲ್ಲದಕ್ಕೂ ನಕ್ಕು, “ಕಷ್ಟ ಮನ್ಸಂಗ್ ಬರ್ದೆ ಮರಕ್ ಬತ್ತದಾ, ಬುಡಿ… ಉರಿಯೋ ಸೂರ್ಯನಂಗೆ, ಹರಿಯೋ ನೀರನಂಗೆ, ಬೀಸೋ ಗಾಳಿಯಂಗೆ ಇರ್ಬೇಕು, ಹೋಗ್ಬೇಕು,” ಎಂದು ಹಗುರಾಗುವುದನ್ನು ಆಕೆ, ಬದುಕಿನ ಬಹುದೊಡ್ಡ ಫಿಲಾಸಫಿ ಎಂದುಕೊಂಡಿಲ್ಲ. ಅದನ್ನೇ ಸುತ್ತಲ ಸಮಾಜ ಅಳವಡಿಸಿಕೊಳ್ಳಬೇಕೆಂಬ ಹಂಬಲವೂ ಆಕೆಗಿಲ್ಲ. ಈ ಸ್ಥಿತಪ್ರಜ್ಞೆ ನಿರ್ಮಲಮ್ಮನದೊಂದೇ ಅಲ್ಲ, ಅಸಹಾಯಕ ಮಹಿಳೆಯರ ದಿನನಿತ್ಯದ ಬದುಕೇ ಆಗಿದೆ. ಬದಲಿಸಲಾಗದೆ ಬಸವಳಿದು ನೊಂದು ನಲುಗುವುದೇ ಬದುಕಾಗಿದೆ. ಇಂತಹ ಅಸಂಘಟಿತ ವಲಯದ ಕಾರ್ಮಿಕರಾದ ಮನೆಗೆಲಸದ ಮಹಿಳೆಯರಿಗೆ ಅಂತಾರಾಷ್ಟ್ರೀಯ ಅಮ್ಮನ ದಿನ, ಮಹಿಳಾ ದಿನ, ಸಮಾನತೆ, ವಿಮೋಚನೆ, ಕಲ್ಯಾಣ, ಸಬಲೀಕರಣ ಎಂಬ ವಿಶೇಷಣ ಬಳಸಿ ಗೌರವಿಸುವುದಕ್ಕಿಂತ ವ್ಯಂಗ್ಯ, ಅಣಕ ಇನ್ನೊಂದಿಲ್ಲ; ಅಲ್ಲವೇ?

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮನಸ್ಸಿನ ಕತೆಗಳು – 20 | ಡಿವೋರ್ಸ್‌ವರೆಗೂ ಮುಂದುವರಿದಿದ್ದ ಗರ್ಭಿಣಿ ಹರಿಣಿಯ ಕತೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮನಸ್ಸಿನ ಕತೆಗಳು – 19 | ತನ್ನ ಸೀರೆಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದ ಲತಾಳ ಕತೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ಹೆಣ್ಣುಮಕ್ಕಳ ವೈಯಕ್ತಿಕ ವಿಷಯಗಳು ಮತ್ತು ಊರ ಪಂಚಾಯ್ತಿ ವಿಷಯಗಳು

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...