ಶಾಸಕ ಕೆ ಗೋಪಾಲಯ್ಯ ಅವರಿಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರ್ಪೊರೇಟರ್ ಪದ್ಮರಾಜ್ ಅವರನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ, ‘₹15 ಲಕ್ಷ ವಾಪಾಸ್ ಕೇಳಲು ಕರೆ ಮಾಡಿದ್ದೆ’ ಎಂದು ಪದ್ಮರಾಜ್ ಪೊಲೀಸರಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಮಾಜಿ ಸಚಿವ, ಬಿಜೆಪಿ ಶಾಸಕ ಕೆ.ಗೋಪಾಲಯ್ಯಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಮಾಜಿ ಕಾರ್ಪೊರೇಟರ್ ಪದ್ಮರಾಜು ವಿರುದ್ಧ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ವಿಚಾರಣೆ ವೇಳೆ ಪದ್ಮರಾಜು ಅವರು, “ಶಾಸಕ ಗೋಪಾಲಯ್ಯ ಅವರಿಗೆ ₹15 ಲಕ್ಷ ಹಣ ನೀಡಿದ್ದೇನೆ. ಅವರು ನನಗೆ ಹಣ ಇನ್ನು ನೀಡಿಲ್ಲ. ಒಂದು ಟ್ರಸ್ಟ್ಗೆ ₹5 ಲಕ್ಷ ಹಣ ಹಾಕಲು ಹೇಳಿದರು. ಹೀಗಾಗಿ, ಟ್ರಸ್ಟ್ ಖಾತೆಗೆ ಅಕೌಂಟ್ ಮೂಲಕ ₹5 ಲಕ್ಷ ವರ್ಗಾವಣೆ ಮಾಡಿದ್ದೇನೆ. ಗೋಪಾಲಯ್ಯ ಅವರು ಸಚಿವರಾಗಿದ್ದಾಗ ಕಾಮಗಾರಿ ಟೆಂಡರ್ ವಿಚಾರವಾಗಿ ನಗದು ರೂಪದಲ್ಲಿ ₹10 ಲಕ್ಷ ಹಣ ನೀಡಿದ್ದೇನೆ” ಎಂದು ಹೇಳಿದ್ದಾರೆ.
“ಈ ಹಿಂದೆ ಹಣ ವಾಪಾಸ್ ನೀಡಿ ಎಂದು ಕೇಳೋದಕ್ಕೆ ಗೋಪಾಲಯ್ಯ ಅವರ ಮನೆ ಬಳಿ ತೆರಳಿದ್ದೇನು. ಆದರೆ, ಅವರು ಇರಲಿಲ್ಲ. ಹಾಗಾಗಿ, ಕರೆ ಮಾಡಿದೆ. ಮೊದಲಿಗೆ ಗೋಪಾಲಯ್ಯ ಅವರು ಅವಾಚ್ಯ ಶಬ್ದಗಳಿಂದ ಬೈದಿದ್ದರು. ಬಳಿಕ ನಾನು ಬೈದಿದ್ದೇನೆ” ಎಂದು ತಿಳಿಸಿದ್ದಾರೆ. ಸದ್ಯ ಕಾಮಾಕ್ಷಿಪಾಳ್ಯ ಪೊಲೀಸರು ಬ್ಯಾಂಕ್ ಖಾತೆ ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪದ್ಮರಾಜು ಬಳಿಯಿದ್ದ ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಂಗಳವಾರ ರಾತ್ರಿ 11 ಗಂಟೆಗೆ ಗೋಪಾಲಯ್ಯಗೆ ಕರೆ ಮಾಡಿ ಪದ್ಮರಾಜು, ಕೊಲೆ ಬೆದರಿಕೆ ಹಾಕಿದ್ದಾಗಿ ಪೊಲೀಸ್ ಠಾಣೆಗೆ ಕೆ.ಗೋಪಾಲಯ್ಯ ದೂರು ನೀಡಿದ್ದರು.
ಈ ಸಂಬಂಧ ಶಾಸಕ ಕೆ.ಗೋಪಾಲಯ್ಯ ಅವರು, ವಿಧಾನಸಭೆ ಸ್ಪೀಕರ್ಗೆ ಹಾಗೂ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ಅವರಿಗೂ ದೂರು ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸ್ಯಾಂಕಿ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
ಪದ್ಮರಾಜು ಬೆದರಿಕೆ ಹಾಕಿದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ, ಗೃಹಸಚಿವ ಪರಮೇಶ್ವರ ಅವರಿಗೂ ದೂರು ನೀಡುತ್ತೇನೆ. ಪದ್ಮರಾಜು ಅವರನ್ನು ಗಡಿಪಾರು ಮಾಡುವಂತೆ ಆಗ್ರಹಿಸುತ್ತೇನೆ ಎಂದು ಗೋಪಾಲಯ್ಯ ಹೇಳಿದ್ದಾರೆ.
ವಿಧಾನಸಭೆ ಶೂನ್ಯವೇಳೆಯಲ್ಲಿ ಶಾಸಕ ಗೋಪಾಲಯ್ಯ ಅವರು ಮಾಜಿ ಕಾರ್ಪೊರೇಟರ್ ಪದ್ಮರಾಜ್ ಕೊಲೆ ಬೆದರಿಕೆ ವಿಚಾರವನ್ನು ಪ್ರಸ್ತಾಪಿಸಿದರು.