ಹಣ ಪಡೆದು ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಿದ ‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಈ ಪ್ರಕರಣದಲ್ಲಿ ತನಿಖೆಯನ್ನು ನಡೆಸಿ ಆರು ತಿಂಗಳ ಒಳಗಾಗಿ ವರದಿಯನ್ನು ನೀಡುವಂತೆ ಲೋಕಪಾಲ್ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಸೂಚಿಸಿದೆ.
ಪ್ರಶ್ನೆಗಾಗಿ ಕಾಸು ಕೇಳಿದ ಪ್ರಕರಣದಲ್ಲಿ ಮಹುವಾ ಮೊಯಿತ್ರಾ ಅವರನ್ನು ಕಳೆದ ವರ್ಷ ಡಿಸೆಂಬರ್ನಲ್ಲಿ ಲೋಕಸಭೆಯಿಂದ ಉಚ್ಛಾಟನೆ ಮಾಡಲಾಗಿದೆ. ಅದಾದ ಬಳಿಕ ತಮ್ಮ ಉಚ್ಛಾಟನೆಯನ್ನು ಪ್ರಶ್ನಿಸಿ ಮೊಯಿತ್ರಾ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾರೆ. ಈ ನಡುವೆ ಈಗ ಲೋಕಸಭೆ ಚುನಾವಣೆಯಲ್ಲಿ ಟಿಎಂಸಿ ಮತ್ತೆ ಪಶ್ಚಿಮ ಬಂಗಾಳದ ಕೃಷ್ಣನಗರ ಲೋಕಸಭಾ ಕ್ಷೇತ್ರದಿಂದ ಮೊಯಿತ್ರಾಗೆ ಟಿಕೆಟ್ ನೀಡಿದೆ.
ಇದನ್ನು ಓದಿದ್ದೀರಾ? ಲೋಕಸಭೆಯಿಂದ ಉಚ್ಚಾಟನೆ | ಸುಪ್ರೀಂ ಕೋರ್ಟ್ ಕದ ತಟ್ಟಿದ ಮಹುವಾ ಮೊಯಿತ್ರಾ
ಏನಿದು ‘ಪ್ರಶ್ನೆಗಾಗಿ ಕಾಸು’ ಪ್ರಕರಣ?
ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಲು ದುಬೈ ಮೂಲದ ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಹಣವನ್ನು ಪಡೆದ ಆರೋಪವನ್ನು ಮೊಯಿತ್ರಾ ಹೊಂದಿದ್ದಾರೆ. ಹಿರಾನಂದಾನಿ ಅವರಿಂದ ಹಣ ಪಡೆದು ಕೈಗಾರಿಕೋದ್ಯಮಿ ಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮೊಯಿತ್ರಾ ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಬಿಜೆಪಿ ಲೋಕಸಭಾ ಸದಸ್ಯ ನಿಶಿಕಾಂತ್ ದುಬೆ ದೂರು ನೀಡಿದ್ದಾರೆ. ಈ ಆರೋಪದ ಬಗ್ಗೆ ನ್ಯಾಯಮೂರ್ತಿ ಅಭಿಲಾಷಾ ಕುಮಾರಿ ಮತ್ತು ಸದಸ್ಯರಾದ ಅರ್ಚನಾ ರಾಮಸುಂದರಂ ಮತ್ತು ಮಹೇಂದ್ರ ಸಿಂಗ್ ಅವರನ್ನು ಒಳಗೊಂಡ ಲೋಕಪಾಲ್ ಪೀಠವು ತನಿಖೆಗೆ ಆದೇಶಿಸಿದೆ.
“ದಾಖಲೆಯಲ್ಲಿರುವ ಎಲ್ಲಾ ಮಾಹಿತಿಯನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿದ ಬಳಿಕ ನಿಶಿಕಾಂತ್ ದುಬೆ ಅವರ ಆರೋಪಗಳು ಅತ್ಯಂತ ಗಂಭೀರ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿದುಬಂದಿದೆ. ಆರೋಪಗಳು ದೃಢವಾದ ಪುರಾವೆಗಳನ್ನು ಆಧರಿಸಿ ಮಾಡಲಾಗಿದೆ. ಆದ್ದರಿಂದ ತನಿಖೆಗೆ ಆದೇಶಿಸಲಾಗುತ್ತಿದೆ” ಎಂದು ಲೋಕಪಾಲ್ ತನ್ನ ಆದೇಶದಲ್ಲಿ ತಿಳಿಸಿದೆ.
ಇನ್ನು “ಎಲ್ಲಾ ಆಯಾಮಗಳಲ್ಲಿಯೂ ತನಿಖೆಯನ್ನು ನಡೆಸುವಂತೆ ಲೋಕಪಾಲ್ ಸಿಬಿಐಗೆ ತಿಳಿಸಿದೆ. ದೂರಿನಲ್ಲಿ ಮಾಡಿರುವ ಎಲ್ಲಾ ಆರೋಪಗಳ ತನಿಖೆ ಮಾಡಲು ಮತ್ತು ಈ ಆದೇಶದ ಆರು ತಿಂಗಳ ಒಳಗಾಗಿ ವರದಿ ಸಲ್ಲಿಸಲು ನಾವು ಆದೇಶಿಸುತ್ತೇವೆ” ಎಂದು ಲೋಕಪಾಲ್ ನಿರ್ದೇಶಿಸಿದೆ.