ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ನಡುವೆಯೂ ಸರ್ಕಾರಿ ಶಾಲೆಗಳಿಗೆ ಶಾಲಾ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್ ಮಧು ಬಂಗಾರಪ್ಪ ಅವರು ಭೇಟಿ ನೀಡಿ, ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು.
ಇಂದು ಬೆಳಗ್ಗೆ ಬೆಳಗಾವಿಯ ಖಂಜರಗಲ್ಲಿ, ವೀರಭದ್ರ ನಗರದ ಉರ್ದು ಶಾಲೆ, ಸರ್ದಾರ್ ಪ್ರೌಢಶಾಲೆ ಹಾಗೂ ಕಿತ್ತೂರು ತಾಲೂಕಿನ ಹುಲಿಕಟ್ಟಿ ಮತ್ತು ಕಾದರವಳ್ಳಿ ಶಾಲೆಗೆ ಭೇಟಿ ನೀಡಿದರು.
ಶತಮಾನ ಕಂಡಿರುವ ಖಂಜರಗಲ್ಲಿಯಲ್ಲಿರುವ ಉರ್ದು ಶಾಲೆಯಲ್ಲಿ ಮಕ್ಕಳೊಂದಿಗೆ ಪ್ರಾರ್ಥನೆಯಲ್ಲಿ ಪಾಲ್ಗೊಂಡು, ಸಂವಿಧಾನ ಪೀಠಿಕೆ ಓದುವಿಕೆಯನ್ನು ನೋಡಿ ಸಂತಸ ವ್ಯಕ್ತಪಡಿಸಿದರು. ನಿತ್ಯ ಶಾಲಾ ಮಕ್ಕಳಿಗೆ ವಿದ್ಯಾರ್ಥಿನಿಯರಿಗೆ ಕ್ಷೀರಭಾಗ್ಯ ಯೋಜನೆಯಡಿಯ ಬಿಸಿ ಹಾಲು ವಿತರಿಸಿ, ಸದೃಢವಾದ ಆರೋಗ್ಯದಿಂದರಲು ತಿಳಿಸಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ನಡುವೆಯೂ ಸರ್ಕಾರಿ ಶಾಲೆಗಳಿಗೆ ಶಿಕ್ಷಣ ಸಚಿವ @Madhu_Bangarapp ಅವರು ಭೇಟಿ ನೀಡಿ, ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು.
ಖಂಜರಗಲ್ಲಿ, ವೀರಭದ್ರ ನಗರದ ಉರ್ದು ಶಾಲೆ, ಸರ್ದಾರ್ ಪ್ರೌಢಶಾಲೆ ಹಾಗೂ ಕಿತ್ತೂರು ತಾಲೂಕಿನ ಹುಲಿಕಟ್ಟಿ ಮತ್ತು ಕಾದರವಳ್ಳಿ ಶಾಲೆಗೆ ಭೇಟಿ ನೀಡಿದರು. pic.twitter.com/pv6sakTVsk
— eedina.com (@eedinanews) December 13, 2023
ಇನ್ನು ವೀರಭದ್ರನಗರದಲ್ಲಿರುವ ಉರ್ದು ಶಾಲೆಯಲ್ಲಿ 1 ರಿಂದ 7 ನೇ ತರಗತಿಯವರೆಗೆ 254 ವಿದ್ಯಾರ್ಥಿಗಳು ಓದುತ್ತಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದರು. ಶಾಲೆಯಲ್ಲಿ ಮಕ್ಕಳಿಗೆ ಸಿಗುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸಿ, ಶಾಲೆಗೆ ಕೂಡಲೇ ಬೆಂಚ್ ಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಇದೇ ಶಾಲೆಯಲ್ಲಿ ಪ್ರೌಢಶಾಲೆ ಆರಂಭಿಸಬೇಕು ಎನ್ನುವ ಪೋಷಕರ ಪ್ರಶ್ನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಸ್ಥಳೀಯ ಶಾಸಕರಿಗೆ ಶಾಲೆಯ ಸಮಗ್ರ ಮಾಹಿತಿ ಸಂಗ್ರಹಿಸಿ ನೀಡಲು ಸಲಹೆ ನೀಡಿದರು.
ಅಲ್ಲದೇ, ಇದೇ ವೇಳೆ 173 ವರ್ಷ ಪೂರೈಸಿರುವ ಸರ್ದಾರ್ ಶಾಲೆಗೆ ಭೇಟಿ ನೀಡಿ, ಬ್ರಿಟಿಷ ಶೈಲಿಯ ಕಟ್ಟಡ ಹೊಂದಿರುವುದನ್ನು ಗಮನಿಸಿದರು. ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಸಂವಾದ ನಡೆಸಿದರು. ಇಂತಹ ಪಾರಂಪರಿಕ ಶಾಲೆಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಿಸಿಯೂಟ ಸವಿದು ಭರವಸೆ ಈಡೇರಿಕೆ
ಅಧಿವೇಶನ ವೀಕ್ಷಣೆಗೆ ತೆರಳಿದ್ದ ಕಿತ್ತೂರು ತಾಲೂಕಿನ ಹುಲಿಕಟ್ಟಿ ಗ್ರಾಮದ ಮಕ್ಕಳನ್ನು ಭೇಟಿ ಮಾಡಿದ್ದ ಸಚಿವ ಮಧು ಬಂಗಾರಪ್ಪ ಅವರು, “ಅಧಿವೇಶನ ಮುಗಿಯುವ ನಡುವೆ ನಿಮ್ಮ ಶಾಲೆಗೆ ಬರುತ್ತೇನೆ. ನಿಮ್ಮ ಶಾಲೆಯಲ್ಲಿಯೇ ನಿಮ್ಮನ್ನು ಭೇಟಿ ಮಾಡಿ, ನಿಮ್ಮ ಶಾಲೆಯಲ್ಲಿ ನೀಡುವ ಬಿಸಿಯೂಟವನ್ನು ಮಾಡೋಣ” ಎಂದು ಭರವಸೆ ನೀಡಿದ್ದರು. ಅದರಂತೆ ಶಿಕ್ಷಣ ಸಚಿವರು, ಹುಲಿಕಟ್ಟಿ ಗ್ರಾಮದ ಸರ್ಕಾರಿ ಶಾಲೆಗೆ ತೆರಳಿ ಮಕ್ಕಳ ಜೊತೆ ಕುಳಿತು ಊಟ ಮಾಡುವ ಮೂಲಕ ಮಕ್ಕಳಿಗೆ ನೀಡಿದ್ದ ಭರವಸೆ ಈಡೇರಿಸಿದರು.
ಈ ಸಂದರ್ಭದಲ್ಲಿ ಜಂಟಿ ನಿರ್ದೇಶಕರಾದ ಎಂ ಎಂ ಸಿಂಧೂರ, ಉಪನಿರ್ದೇಶಕರಾದ ಮೋಹನ್ ಕುಮಾರ್ ಹಂಚಾಟೆ, ಪ್ರಭಾರ ಉಪನಿರ್ದೇಶಕರಾದ ರವಿ ಭಜಂತ್ರಿ, ಬೆಳಗಾವಿ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಲೀಲಾವತಿ ಎಸ್ ಹಿರೇಮಠ, ಕ್ಷೇತ್ರ ಸಮನ್ವಯಾಧಿಕಾರಿ ಆಯ್ ಡಿ ಹಿರೇಮಠ, ಇಸಿಓ, ಬಿ.ಆರ್.ಪಿ, ಸಿ.ಆರ್.ಪಿಗಳು ಮತ್ತು ನಗರ ಸೇವಕರು ಎಸ್ ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಪಾಲಕರು ಮತ್ತಿತರರು ಉಪಸ್ಥಿತರಿದ್ದರು.