ತುಮಕೂರು ಜಿಲ್ಲೆಯ ಮಧುಗಿರಿ ಉಪವಿಭಾಗಕ್ಕೆ ತನ್ನದೇ ಆದ ಇತಿಹಾಸವಿದೆ. ಮಧುಗಿರಿ ಜಿಲ್ಲೆಯಾಗಲು ಅರ್ಹವಾಗಿದೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಅಭಿಪ್ರಾಯಪಟ್ಟರು.
ಮಧುಗಿರಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ನೌಕರರ ಮಕ್ಕಳಿಗೆ ಶಾಲಾ ಕಿಟ್ ತಿವರಣೆ ಮಾಡಿ ಅವರು ಮಾತನಾಡಿದರು. “ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಮತ್ತು ಎಸ್ಪಿ ಕಚೇರಿ ಹೊರತು ಪಡಿಸಿ ಜಿಲ್ಲಾ ಕೇಂದ್ರದಲ್ಲಿರಬೇಕಾದ ಎಲ್ಲ ಕಚೇರಿಗಳೂ ಇವೆ. ಮಧುಗಿರಿ ಜಿಲ್ಲೆಯಾದರೆ, ಈ ಭಾಗದ ಬರಪೀಡಿತ ಪ್ರದೇಶಗಳಾದ ಪಾವಗಡ, ಶಿರಾ, ಕೊರಟಗೆರೆ ವ್ಯಾಪ್ತಿಯ ಜನತೆಗೆ ಅನುಕೂಲವಾಗಲಿದೆ” ಎಂದರು.
“ತಾಲೂಕಿನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಿ ಉದ್ಯೋಗ ದೊರಕಿಸಿಕೊಡುವ ಮಹದಾಸೆಯಿದೆ. ಸಂಸದರು ಎಲ್ಲ ಸಂದರ್ಭದಲ್ಲೂ ನಮಗೆ ಸಹಕಾರ ನೀಡುತ್ತಿದ್ದು, ಮಧುಗಿರಿಯ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಅವರು ಯಾವತ್ತೂ ರೈತರ, ಬಡವರ ಮತ್ತು ಅಲ್ಪಸಂಖ್ಯಾತರ ಪರ ಕೆಲಸ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ಈ ಭಾಗದ ಎಲ್ಲ ಕೆರೆಗಳಿಗೂ ನೀರು ಹರಿಸಲಾಗುವುದು. ಸಂಸದರು ನೀರಾವರಿ ಯೋಜನೆಗಳ ಜಾರಿಗೆ ಹೆಚ್ಚಿನ ಸಹಕಾರ ನೀಡಲಿದ್ದಾರೆ” ಎಂದರು.
“ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿರುವವರೆಲ್ಲರೂ ಕಟ್ಟಡ ಕಾರ್ಮಿಕರ ವ್ಯಾಪ್ತಿಗೆ ಬರುತ್ತಾರೆ. ಅವರ ಮಕ್ಕಳ ವಿದ್ಯಾಬ್ಯಾಸಕ್ಕೆ ಅನುಕೂಲ ಮಾಡಿಕೊಡಲು ಪರಿಕರಗಳ ವಿತರಣೆ ಉತ್ತಮ ಕಾರ್ಯಕ್ರಮ. ಯಾರಿಂದಲಾದರೂ ಸರಿ ಯಾವ ರೂಪದಲ್ಲಾದರೂ ಸರಿ ಬಡವರ ಮಕ್ಕಳಿಗೆ ಅನುಕೂಲವಾದರೆ ಸಾಕು. ಇಂದು ವಿದ್ಯಾಬ್ಯಾಸಕ್ಕೆ ಬಹಳಷ್ಟು ಅನುಕೂಲಗಳಿದ್ದು,ವಿದ್ಯೆಯ ಮಹತ್ವವೂ ಬಹಳ ಹೆಚ್ಚಿದೆ. ಕಡು ಬಡತನದಿಂದ ಬಂದವರು ಐಎಎಸ್ ಸೇರಿದಂತೆ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದು, ವಿದ್ಯಾರ್ಥಿಗಳು ಇಂತಹ ವ್ಯಕ್ತಿಗಳನ್ನು ಆದರ್ಶವಾಗಿಟ್ಟುಕೊಂಡು ಉತ್ತಮ ಶಿಕ್ಷಣ ಗಳಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಗುರಿ ಇಟ್ಟುಕೊಳ್ಳಬೇಕು” ಎಂದರು.
ಸಂಸದ ಜಿ.ಎಸ್ ಬಸವರಾಜು ಮಾತನಾಡಿ, “ರಾಜಣ್ಣನವರು ಸಚಿವರಾದ ತಕ್ಷಣ ಕಾರ್ಮಿಕ ಇಲಾಖೆಗೆ ಸರ್ಕಾರಿ ಕಟ್ಟಡ ಒದಗಿಸಿಕೊಟ್ಟಿದ್ದಾರೆ. ಕಾರ್ಮಿಕ ಇಲಾಖೆಯಲ್ಲಿ ಸುಮಾರು 90 ಕೋಟಿ ಅನುದಾನ ಖರ್ಚಾಗದೇ ಉಳಿದಿದೆ. ಸಚಿವರು ಅನುದಾನ ಸದ್ಬಳಕೆಯ ಕಡೆ ಗಮನಹರಿಸಬೇಕು. ಮಧುಗಿರಿಗೆ ತನ್ನದೇ ಆದ ಇತಿಹಾಸವಿದ್ದು, ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಸಹಕಾರ ನೀಡಲಾಗುವುದು” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ?: ಮಹಿಳೆ, ಶೂದ್ರರನ್ನು ಶಿಕ್ಷಣದಿಂದ ದೂರವಿರಿಸಿದ್ದ ಚಾತುರ್ವರ್ಣ ವ್ಯವಸ್ಥೆ : ಸಿಎಂ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ರಿಷಿ ಆನಂದ್, ತಹಶೀಲ್ದಾರ್ ಸಿಬ್ಗತ್ ಉಲ್ಲಾ, ಕಾರ್ಮಿಕ ಅಧಿಕಾರಿ ಕೆ. ತೇಜಾವತಿ , ಕಾರ್ಮಿಕ ನಿರೀಕ್ಷಕರಾದ ಅಬ್ದುಲ್ ರವೂಫ್, ಎಂ.ಎಲ್ ಶ್ರೀಕಾಂತ್ , ಶಿವಕುಮಾರ ಸ್ವಾಮಿ, ಗಂಗಲಕ್ಷ್ಮೀ ಮುಖಂಡರಾದ ತುಂಗೋಟಿ ರಾಮಣ್ಣ , ಎಸ್ ಬಿ ಟಿ ರಾಮು , ಸಾಧಿಕ್, ಪುರಸಭಾ ಮಾಜಿ ಅಧ್ಯಕ್ಷ ಮಹಮದ್ ಅಯುಬ್, ಪುರಸಭಾ ಸದಸ್ಯ ಅಲೀಮ್, ಬಾಲ ಕಾರ್ಮಿಕರ ಯೋಜನಾ ನಿರ್ದೇಶಕ ರವಿಕುಮಾರ್ ಹಾಗೂ ಇತರರಿದ್ದರು.