ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ಆದಾಯ ತೆರಿಗೆ ಇಲಾಖೆ ಬರೋಬ್ಬರಿ ₹46 ಕೋಟಿ ತೆರಿಗೆ ಪಾವತಿಸುವಂತೆ ನೋಟಿಸ್ ಕಳುಹಿಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ.
ಪ್ರಮೋದ್ ಕುಮಾರ್ ದಂಡೋಟಿಯಾ (25) ಸಂತ್ರಸ್ತ. ಈತ ಮೂಲತಃ ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿ. ಗ್ವಾಲಿಯರ್ನಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದಾನೆ. ಈತನ ಪಾನ್ ಕಾರ್ಡ್ ದುರ್ಬಳಕೆ ಮಾಡಿಕೊಂಡ ಕಂಪನಿಯೊಂದು ಬರೋಬ್ಬರಿ ₹46 ಕೋಟಿ ಅವ್ಯವಹಾರ ನಡೆಸಿದೆ ಎಂದು ಹೇಳಲಾಗಿದೆ. ಅಲ್ಲದೇ, ವಿದ್ಯಾರ್ಥಿಯ ಪಾನ್ ಕಾರ್ಡ್ಅನ್ನು ಬಳಸಿಕೊಂಡು ಕಂಪನಿಯೊಂದು ನೋಂದಣಿಯಾಗಿದೆ. ಆ ಕಂಪನಿ 2021ರಿಂದ ಮುಂಬೈ ಮತ್ತು ದಿಲ್ಲಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ಆದಾಯ ತೆರಿಗೆ ಇಲಾಖೆಯಿಂದ ತೆರಿಗೆ ನೋಟಿಸ್ ಪಡೆದ ಬಳಿಕವಷ್ಟೆ, ಪ್ರಮೋದ್ ಕುಮಾರ್ ದಾಂಡೋತಿಯಾಗೆ ತನ್ನ ಪಾನ್ ಕಾರ್ಡ್ ಆಧಾರದಲ್ಲಿ ಬೃಹತ್ ಮೊತ್ತದ ವಹಿವಾಟು ನಡೆದಿರುವ ಬಗ್ಗೆ ಗಮನಕ್ಕೆ ಬಂದಿದೆ. ಅಲ್ಲದೇ, ಆತನ ಪಾನ್ ಕಾರ್ಡ್ ಅನ್ನು ಬಳಸಿಕೊಂಡು ಕಂಪನಿಯೊಂದು ನೋಂದಣಿಗೊಂಡಿರುವ ಬಗ್ಗೆ ಆದಾಯ ತೆರಿಗೆ ಇಲಾಖೆ ಹಾಗೂ ಜಿಎಸ್ಟಿ ಇಲಾಖೆ ವಿದ್ಯಾರ್ಥಿಗೆ ಮಾಹಿತಿ ನೀಡಿವೆ.
ಈ ಬಗ್ಗೆ ವಿದ್ಯಾರ್ಥಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
“ಆದಾಯ ತೆರಿಗೆ ಮತ್ತು ಜಿಎಸ್ಟಿಯಿಂದ ನೋಟಿಸ್ ಬಂದಾಗ ನನಗೆ ವಿಷಯ ತಿಳಿಯಿತು. ನನ್ನ ಪಾನ್ ಕಾರ್ಡ್ ಮೂಲಕ ಕಂಪನಿಯೊಂದನ್ನು ನೋಂದಾಯಿಸಲಾಗಿದೆ. ಮುಂಬೈ ಮತ್ತು ದೆಹಲಿಯಲ್ಲಿ ಕಂಪನಿಯೊಂದು 2021ರಿಂದ ಕಾರ್ಯನಿರ್ವಹಿಸುತ್ತಿದೆ. ಗ್ವಾಲಿಯರ್ನಲ್ಲಿ ನಾನು ಕಾಲೇಜು ವಿದ್ಯಾರ್ಥಿಯಾಗಿದ್ದೇನೆ. ಇದು ಹೇಗೆ ನಡೆದಿದೆ ಎಂಬ ಬಗ್ಗೆ ನನಗೆ ತಿಳಿದಿಲ್ಲ. ನನ್ನ ಪ್ಯಾನ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಂಡು ವಹಿವಾಟು ಮಾಡಲಾಗಿದೆ” ಎಂದು ಗ್ವಾಲಿಯರ್ ನಿವಾಸಿ ಪ್ರಮೋದ್ ಕುಮಾರ್ ದಂಡೋಟಿಯಾ ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೇಜ್ರಿವಾಲ್ ಬಂಧನ ಖಂಡಿಸಿ ಎಎಪಿ ಪ್ರತಿಭಟನೆ: ಬೆಂಬಲ ಕೋರಿ ‘ಜಾಗೃತ ಕರ್ನಾಟಕ’ಕ್ಕೆ ಪತ್ರ
“ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ ಪಡೆದ ಕೂಡಲೇ ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತನಾಡಿದ್ದೇನೆ. ಈ ಬಗ್ಗೆ ಹಲವು ಬಾರಿ ಪೊಲೀಸರಿಗೆ ದೂರು ನೀಡಲು ಯತ್ನಿಸಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಶುಕ್ರವಾರ ಮತ್ತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ದೂರು ದಾಖಲಿಸಿದೆ” ಎಂದು ತಿಳಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಶಿಯಾಜ್ ಕೆಎಂ ಮಾತನಾಡಿ, “ಬ್ಯಾಂಕ್ ಖಾತೆಯಿಂದ ₹46 ಕೋಟಿಗೂ ಹೆಚ್ಚು ಮೊತ್ತದ ವಹಿವಾಟನ್ನು ನಡೆಸಲಾಗಿದೆ ಎಂದು ಯುವಕನೊಬ್ಬ ದೂರು ನೀಡಿದ್ದಾರೆ. ಅರ್ಜಿ ಸ್ವೀಕರಿಸಿದ್ದೇವೆ. ಈ ಸಂಬಂಧ ದಾಖಲೆಗಳನ್ನು ಪರಿಶೀಲಿಸಲಾಯಿತು. ಆಗ ಪಾನ್ ಕಾರ್ಡ್ ದುರ್ಬಳಕೆಯಾಗಿರುವುದು ಕಂಡು ಬಂದಿದೆ. ಆ ಪಾನ್ ಕಾರ್ಡ್ ಅನ್ನು ಬಳಸಿಕೊಂಡು ಕಂಪನಿಯೊಂದನ್ನು ನೋಂದಾಯಿಸಲಾಗಿದೆ. ಆ ಮೂಲಕ ದೊಡ್ಡ ಪ್ರಮಾಣದ ವಹಿವಾಟನ್ನು ನಡೆಸಿರುವುದು ಪತ್ತೆಯಾಗಿದೆ. ಇಡೀ ಪ್ರಕರಣದ ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.