ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಹೋರಾಟ ನಡೆಸುತ್ತಿರುವ ಕುಸ್ತಿ ಪಟುಗಳಿಗೆ ಬಿಜೆಪಿಯ ಸಂಸದೆ ಪ್ರೀತಮ್ ಮುಂಢೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಬೀಡ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆಯಾಗಿರುವ ಪ್ರೀತಮ್ ಮುಂಢೆ ಹೋರಾಟನಿರತ ಕುಸ್ತಿ ಪಟುಗಳನ್ನು ಬೆಂಬಲಿಸಿ ಮಾತನಾಡಿದ್ದು, “ಮಹಿಳೆಯರು ಈ ರೀತಿಯ ಗಂಭೀರ ಆರೋಪಗಳನ್ನು ಮಾಡಿದಾಗ ಅವರನ್ನು ಅನುಮಾನದಿಂದ ಕಾಣದೆ ಘಟನೆಯ ಸತ್ಯಾಸತ್ಯತೆಯನ್ನು ತಿಳಿಯುವ ಅಗತ್ಯವಿರುತ್ತದೆ. ಅಧಿಕಾರದಲ್ಲಿರುವ ಯಾವುದೇ ಪಕ್ಷ ಅಥವಾ ಸರ್ಕಾರಗಳು ಈ ರೀತಿಯಲ್ಲಿ ಹೋರಾಟಗಳನ್ನು ಕಡೆಗಣಿಸಬಾರದು. ನಾನು ಕೂಡ ಆಡಳಿತರೂಢ ಸರ್ಕಾರದ ಭಾಗವಾಗಿದ್ಧೇನೆ. ಆದರೆ, ಹೋರಾಟಗಾರರ ಜೊತೆ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಆರೋಪಿತರ ಮೇಲೆ ಅಗತ್ಯ ಕ್ರಮ ಜರುಗಿಸಬೇಕು. ಸರ್ಕಾರ ಈವರೆಗೆ ಕುಸ್ತಿ ಪಟುಗಳ ಜೊತೆಗೆ ಸರಿಯಾದ ರೀತಿಯಲ್ಲಿ ಮಾತುಕತೆಯನ್ನೇ ನಡೆಸಿಲ್ಲ” ಎಂದಿದ್ದಾರೆ.
ಪ್ರೀತಮ್ ಮುಂಢೆ, ಕುಸ್ತಿ ಪಟುಗಳ ಹೋರಾಟವನ್ನು ಬೆಂಬಲಿಸಿ ಹೇಳಿಕೆ ನೀಡುವುದಕ್ಕೆ ಒಂದು ದಿನ ಮೊದಲು, ಅವರ ಸಹೋದರಿ ಮಹಾರಾಷ್ಟ್ರದ ಮಾಜಿ ಬಿಜೆಪಿ ಸಚಿವೆ ಪಂಕಜಾ ಮುಂಢೆ ಕೂಡ ತಮ್ಮ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. “ನಾನು ಬಿಜೆಪಿಗೆ ಸೇರಿದವಳು. ಆದರೆ, ಬಿಜೆಪಿಯಲ್ಲಿ ನನಗೆ ಸ್ಥಾನವಿಲ್ಲ” ಎಂದಿದ್ದರು.
ಈ ಸುದ್ದಿ ಓದಿದ್ದೀರಾ? ಹಿಜಾಬು ಮತ್ತು ಕುಸ್ತಿ ಅಖಾಡದಲ್ಲಿ ಮನುವಾದಿ ಮಸಲತ್ತು
ಪಂಕಜಾ ಮತ್ತು ಪ್ರೀತಮ್ ಮುಂಢೆ ಇಬ್ಬರೂ ಬಿಜೆಪಿಯ ಮಾಜಿ ಕೇಂದ್ರ ಸಚಿವ ಗೋಪಿನಾಥ್ ಮುಂಢೆ ಅವರ ಪುತ್ರಿಯರು. 2014ರಲ್ಲಿ ಗೋಪಿನಾಥ್ ಅವರು ಅಪಘಾತದಲ್ಲಿ ನಿಧನರಾದ ಬಳಿಕ ಪಂಕಜಾ ಮತ್ತು ಪ್ರೀತಮ್ ರಾಜಕೀಯ ಪ್ರವೇಶ ಮಾಡಿದ್ದರು. ಕೇಂದ್ರದಲ್ಲಿ ಮಂತ್ರಿಗಿರಿಯ ಆಸೆ ಇಟ್ಟುಕೊಂಡಿದ್ದ ಪ್ರೀತಮ್ ಮುಂಢೆ ಮೋದಿ, ಅಮಿತ್ ಶಾ ಜೋಡಿ ನಿರಾಸೆಯುಂಟು ಮಾಡಿತ್ತು. ಇತ್ತ ಏಕನಾಥ್ ಶಿಂಧೆ ಹಾಗೂ ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರದಲ್ಲಿ ಪಂಕಜಾ ಅವರಿಗೂ ಮಂತ್ರಿ ಪದವಿ ನೀಡದೆ ಕಡೆಗಣಿಸಲಾಗಿದೆ. ಈ ಹಿನ್ನೆಲೆ ಬಿಜೆಪಿ ನಾಯಕತ್ವದ ವಿರುದ್ಧ ಮುನಿಸಿಕೊಂಡಿರುವ ಮುಂಢೆ ಸಹೋದರಿಯರು ಸ್ವಪಕ್ಷದ ಬಗ್ಗೆ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಜೊತೆಗೆ ಕುಸ್ತಿ ಪಟುಗಳಿಗೂ ಬೆಂಬಲ ಸೂಚಿಸಿದ್ದಾರೆ.
ಕೇವಲ ಪ್ರೀತಮ್ ಮುಂಡೆ ಮಾತ್ರವಲ್ಲ, ಈ ಹಿಂದೆ ಹರ್ಯಾಣದ ಹಿಸಾರ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಬ್ರಿಜೇಂದ್ರ ಸಿಂಗ್ ಕೂಡ ಕುಸ್ತಿ ಪಟುಗಳ ಹೋರಟವನ್ನು ಬೆಂಬಲಿಸಿದ್ದರು.