ಪ್ರಶ್ನೆಗಾಗಿ ಲಂಚ ಆರೋಪ ಪ್ರಕರಣದ ಮೇಲೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸಂಸತ್ತಿನಿಂದ ಉಚ್ಚಾಟಿಸಲಾಗಿದೆ.
ಸದನದ ನೈತಿಕ ಸಮಿತಿಯ ವರದಿಯನ್ನು ಶುಕ್ರವಾರ ಲೋಕಸಭೆಯಲ್ಲಿ ಮಂಡನೆ ಮಾಡಲಾಯಿತು. ವರದಿ ಮಂಡನೆ ಆಧಾರದ ಮೇಲೆ ಮಹುವಾ ಮೊಯಿತ್ರಾ ಅವರನ್ನು ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಉಚ್ಚಾಟಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಮುಂದೂಡಲ್ಪಟ್ಟ ನಂತರ ಮಧ್ಯಾಹ್ನ ಸದನ ಮತ್ತೆ ಸೇರಿದಾಗ ಸಮಿತಿಯ ಮೊದಲ ವರದಿಯನ್ನು ನೈತಿಕ ಸಮಿತಿ ಅಧ್ಯಕ್ಷ ವಿನೋದ್ ಕುಮಾರ್ ಸೋಂಕರ್ ಅವರು ಮಂಡಿಸಿದರು.
“ಮಹುವಾ ಮೊಯಿತ್ರಾ ಅವರ ಕಡೆಯಿಂದ ಗಂಭೀರವಾದ ದುಷ್ಕೃತ್ಯಗಳು ಕಠಿಣ ಶಿಕ್ಷೆಗೆ ಅರ್ಹವಾಗಿದೆ. ಆದ್ದರಿಂದ ಸಮಿತಿಯು ಹದಿನೇಳನೇ ಲೋಕಸಭೆಯ ಸದಸ್ಯತ್ವದಿಂದ ಸಂಸದ ಮಹುವಾ ಅವರನ್ನು ಉಚ್ಚಾಟಿಸಬಹುದು ಎಂದು ಶಿಫಾರಸು ಮಾಡಿದೆ” ಎಂದು ತಿಳಿಸಿದರು.
ಚರ್ಚೆಯ ನಂತರ, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು “ಅನೈತಿಕ ನಡವಳಿಕೆ”ಗಾಗಿ ಟಿಎಂಸಿ ಸಂಸದರನ್ನು ಉಚ್ಚಾಟಿಸುವ ಪ್ರಸ್ತಾಪವನ್ನು ಮಂಡಿಸಿದರು. ಇದನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ಉಚ್ಚಾಟನೆಯ ನಂತರ ಮಾತನಾಡಿದ ಮಹುವಾ ಮೊಯಿತ್ರಾ, “ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ನನ್ನನ್ನು ಉಚ್ಚಾಟಿಸಲಾಗಿದೆ. ನನಗೆ ಸದನದಲ್ಲಿ ಮಾತನಾಡಲು ಅವಕಾಶವನ್ನೇ ಕೊಡಲಿಲ್ಲ” ಎಂದು ಆರೋಪಿಸಿದರು.
“ನನ್ನನ್ನು ಬಾಯಿ ಮುಚ್ಚಿಸುವ ಮೂಲಕ ಅದಾನಿ ಸಮಸ್ಯೆ ಮುಚ್ಚಿಹಾಕಬಹುದು ಎಂದು ಈ ಮೋದಿ ಸರ್ಕಾರ ಭಾವಿಸಿದ್ದು, ಅದನ್ನು ಕಾಂಗರೂ(ಸಾಕ್ಷ್ಯಾಧಾರ ಅನುಸರಿಸದೆ ಉದ್ದೇಶಪೂರ್ವಕವಾಗಿ ಆರೋಪಿಗಳ ವಿರುದ್ಧವಾಗಿ ತೀರ್ಪು ನೀಡುವುದು) ನ್ಯಾಯಾಲಯದ ಮೂಲಕ ತೋರಿಸಿದೆ ಎಂದು ನಾನು ನಿಮಗೆ ಹೇಳಬಯಸುತ್ತೇನೆ. ನೀವು ನನ್ನ ಪ್ರಕರಣದಲ್ಲಿ ತೋರಿಸಿದ ತರಾತುರಿ ಮತ್ತು ಪ್ರಕ್ರಿಯೆಯ ದುರುಪಯೋಗವು ನಿಮಗೆ ಅದಾನಿ ಎಷ್ಟು ಮುಖ್ಯ ಎಂಬುದನ್ನು ತೋರಿಸುತ್ತದೆ. ಒಂಟಿ ಮಹಿಳಾ ಸಂಸದೆಯನ್ನು ಬಾಯಿ ಮುಚ್ಚಿಸುವ ಮೂಲಕ ನೀವು ಎಷ್ಟು ಕಾಲ ಕಿರುಕುಳ ನೀಡುತ್ತೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೊಯಿತ್ರಾ ಉಚ್ಚಾಟನೆಯ ನಂತರ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಸದಸ್ಯರು ಲೋಕಸಭೆಯ ಹೊರಗೆ ಪ್ರತಿಭಟನೆ ನಡೆಸಿದರು. ವರದಿ ಮಂಡನೆಯಾದ ತಕ್ಷಣ ತೃಣಮೂಲ ಕಾಂಗ್ರೆಸ್ ಸದಸ್ಯರು ಮತ್ತು ಕಾಂಗ್ರೆಸ್ನ ಕೆಲವರು ಸದನದ ಬಾವಿಗಿಳಿದು ವರದಿಯ ಪ್ರತಿಯನ್ನು ನೀಡುವಂತೆ ಘೋಷಣೆಗಳನ್ನು ಕೂಗಿದರು.
Moved the motion to expel TMC MP Mahua Moitra.#WinterSession2023 pic.twitter.com/y2lSdwJLsX
— Pralhad Joshi (@JoshiPralhad) December 8, 2023
ಈ ಸುದ್ದಿ ಓದಿದ್ದೀರಾ? ಮಿಜೋರಾಂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಲಾಲ್ದುಹೋಮಾ
ತೃಣಮೂಲ ಕಾಂಗ್ರೆಸ್ ಸದಸ್ಯ ಕಲ್ಯಾಣ್ ಬ್ಯಾನರ್ಜಿ ವರದಿಯ ಶಿಫಾರಸುಗಳನ್ನು ಮತಕ್ಕೆ ಹಾಕುವ ಮೊದಲು ಅದರ ಬಗ್ಗೆ ಚರ್ಚೆ ನಡೆಸಬೇಕೆಂದು ಒತ್ತಾಯಿಸಿದರು.
ಗದ್ದಲದ ನಡುವೆಯೇ ಸಭಾಪತಿ ಸ್ಥಾನದಲ್ಲಿದ್ದ ಬಿಜೆಪಿ ಸದಸ್ಯ ರಾಜೇಂದ್ರ ಅಗರವಾಲ್ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು. ನಂತರ ನಡೆದ ಚರ್ಚೆಯಲ್ಲಿ ಮಹುವಾ ಅವರನ್ನು ಉಚ್ಚಾಟಿಸಲಾಯಿತು.
ನವೆಂಬರ್ 9 ರಂದು ನಡೆದ ಸಭೆಯಲ್ಲಿ ನೈತಿಕ ಸಮಿತಿಯು ಲೋಕಸಭೆಯಿಂದ ಮೊಯಿತ್ರಾ ಅವರನ್ನು ಉಚ್ಚಾಟಿಸಲು ಶಿಫಾರಸು ಮಾಡುವ ತನ್ನ ವರದಿಯನ್ನು ಅಂಗೀಕರಿಸಿತು.
ಈ ಹಿಂದೆ ಪಕ್ಷದಿಂದ ಅಮಾನತುಗೊಂಡಿದ್ದ ಕಾಂಗ್ರೆಸ್ ಸಂಸದೆ ಪ್ರಣೀತ್ ಕೌರ್ ಸೇರಿದಂತೆ ಸಮಿತಿಯ ಆರು ಸದಸ್ಯರು ವರದಿಯ ಪರವಾಗಿ ಮತ ಹಾಕಿದರು.
ಈ ವರದಿಯನ್ನು ಈ ಹಿಂದೆ ಡಿಸೆಂಬರ್ 4 ರಂದು ಲೋಕಸಭೆಯ ಕಾರ್ಯಸೂಚಿಯಲ್ಲಿ ಪಟ್ಟಿ ಮಾಡಲಾಗಿತ್ತು. ಆದರೆ ಅದನ್ನು ಮಂಡಿಸಲಾಗಿಲ್ಲ.
49 ವರ್ಷದ ಮಹುವಾ ಅವರು ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುವ ಪ್ರಶ್ನೆಗಳನ್ನು ಕೇಳಲು 2 ಕೋಟಿ ನಗದು ಸೇರಿದಂತೆ ಲಂಚ ಪಡೆದ ಆರೋಪ ಹೊತ್ತಿದ್ದಾರೆ.
ಜನರು ತಮ್ಮ ಪ್ರತಿನಿಧಿಯನ್ನು ಆರಿಸಿ ಸಂಸತ್ತಿಗೆ ಕಳುಹಿಸುತ್ತದೆ.
ಸಂಸತ್ತು ಅವರನ್ನು ಉಚ್ಚಾಟಿಸುತ್ತಿದೆ.