ಜಾತಿ ನಿಂದನೆ ಮತ್ತು ಹಲ್ಲೆಗೆ ಒಳಗಾಗಿದ್ದ ಕಲಬುರಗಿ ಜಿಲ್ಲೆಯ ಜಗದೇವಪ್ಪ ಶಂಕರ ಕ್ವಾಟನೂರು ಅವರು ಚಿಕಿತ್ಸೆ ಫಲಿಸದೆ ಮಂಗಳವಾರ ಮೃತಪಟ್ಟಿದ್ದಾರೆ.
ಜಿಲ್ಲೆಯ ಕಮಲಾಪುರ ತಾಲೂಕಿನ ಹರಕಂಚಿ ಗ್ರಾಮದಲ್ಲಿ ಅಕ್ಟೋಬರ್ 27ರಂದು ಜಗದೇವಪ್ಪ ಮೇಲೆ ಕಲೆವು ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನೆಡಸಿದ್ದರು. 18 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿದ್ದ ಜಗದೇವಪ್ಪ ಮಂಗಳವಾರ ಕೊನೆಯುಸಿರೆಳಿದಿದ್ದಾರೆ.
ಘಟನೆ ಸಂಬಂಧ ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಎಂಟು ಮಂದಿ ವಿರುದ್ಧ ಜಾತಿ ನಿಂದನೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ.
ಅಕ್ಟೋಬರ್ 26ರಂದು ಹರಕಂಚಿ ಗ್ರಾಮದಲ್ಲಿ ಮೆಹಬೂಬ ಸುಬಾನಿ ಸಂದಲ ಜಾತ್ರೆ ಇತ್ತು.ಜಾತ್ರೆಯ ಸಂಭ್ರಮದಲ್ಲಿದ್ದ ಜಗದೇವಪ್ಪ ಮತ್ತು ಸ್ನೇಹಿತರು ಗ್ರಾಮದ ಹನುಮಾನ ಕಟ್ಟೆ ಬಳಿ ಕುಳಿತಿದ್ದರು. ಅಲ್ಲಿಗೆ ಬಂದ ಆರೋಪಿ, ರೌಡಿಶೀಟರ್ ಶಂಕರ ಹಾಗೂ ಸಹಚರರು ಜಗದೇವಪ್ಪ ಮತ್ತು ಸ್ನೇಹಿತರಿಗೆ ಅವಾಜ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದರು.
ಆರೋಪಿಗಳು ಮದ್ಯಪಾನದ ಮತ್ತಿನಲ್ಲಿದ್ದ ಕಾರಣ ಜಗದೇವಪ್ಪ, ಹೀಗೆಲ್ಲ ಮಾತನಾಡಬೇಡಿ. ನಿಮ್ಮ ಮನೆಯವರಿಗೆ ಹೇಳುತ್ತೇನೆ ಎಂದಿದ್ದರು. ಇದರಿಂದ ಕುಪಿತಗೊಂಡ ಆರೋಪಿ ಶಂಕರ ಮತ್ತು ಸಹಕರರು ಜಗದೇವಪ್ಪ ಮೇಲೆ ಹಲ್ಲೆ ಮಾಡಿದ್ದರು. ಜಗದೇವಪ್ಪನಿಗೆ ಶಂಕರ ರಾಡ್ನಿಂದ ಹೊಡೆದಿದ್ದಾನೆ. ಕುಸಿದು ಬಿದ್ದ ಜದೇವಪ್ಪನ ಮೇಲೆ ಶಂಕರನ ಸಹಚರರು ಮತ್ತೆ ಹಲ್ಲೆ ಮಾಡಿದ್ದರು. ಗಂಭೀರವಾಗಿ ಗಾಯಗೊಂಡ ಜಗದೇವಪ್ಪ ಪ್ರಜ್ಞೆತಪ್ಪಿ ಬಿದ್ದಿದ್ದರು ಎಂದು ತಿಳಿದುಬಂದಿತ್ತು.
ಬಳಿಕ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಜಗದೇವಪ್ಪನನ್ನು ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಸತತ 18 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿದ ಜಗದೇವಪ್ಪ, ಮಂಗಳವಾರ ಕೊನೆಯುಸಿರೆಳೆದಿದ್ದಾರೆ.
ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ರೌಡಿಶೀಟರ್ ಶಂಕರ ಮತ್ತು ಆತನ ಸಹಚರರಾದ ಪರಮೇಶ್ವರ ನಾಯ್ಕೋಡಿ, ದೇವರಾಜ ಗುಂಡಪ್ಪ ನಾಯಕೋಡಿ, ಸುನಿಲ ಶಿವಶರಣಪ್ಪ ನಾಯಕೋಡಿ, ಮಾಣಿಕ ಶಾಮರಾವ ನಾಯಕೋಡಿ, ವಿಶಾಲ ತಿಪ್ಪಣ್ಣ ನಾಯಕೋಡಿ, ಅನಿಲ ಗುಂಡಪ್ಪ ನಾಯಕೋಡಿ ಹಾಗೂ ಸಿದ್ರಾಮ ಶಾಮರಾವ ನಾಯಕೋಡಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಶಂಕರ ಪರಮೇಶ್ವರ ನಾಯಕೋಡಿ, ದೇವರಾಜ ಗುಂಡಪ್ಪ ನಾಯಕೋಡಿ, ಸುನೀಲ ಶಿವಶರಣಪ್ಪ ನಾಯಕೋಡಿ, ಮಾಣಿಕ ಶಾಮರಾವ ನಾಯಕೋಡಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಶಾಲ ತಿಪ್ಪಣ್ಣ ನಾಯಕೋಡಿ, ಅನಿಲ ಗುಂಡಪ್ಪ ನಾಯಕೋಡಿ ಹಾಗೂ ಸಿದ್ರಾಮ ಶಾಮರಾವ ನಾಯಕೋಡಿ ಪರಾರಿಯಾಗಿದ್ದಾರೆ.
ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದಾರೆ ಎಂಬ ಆರೋಪದ ಮೇಲೆ ಮಹಾಗಾಂವ ಠಾಣೆಯ ಇಬ್ಬರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.