ಮಂಡ್ಯ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ 109 ʼಕೂಸಿನ ಮನೆʼಗಳ ಸ್ಥಾಪನೆಗೆ 1.9 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಪ್ರತಿ ಕೂಸಿನ ಮನೆಯನ್ನು ₹1 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.
ಮಂಡ್ಯ ತಾಲೂಕಿನ ಇಂಡುವಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಲೆಕೊಪ್ಪಲು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ʼಕೂಸಿನ ಮನೆʼ ಉದ್ಘಾಟಿಸಿ ಮಾತನಾಡಿದರು.
“ಮೊದಲ ಹಂತದಲ್ಲಿ 21 ಗ್ರಾಮ ಪಂಚಾಯಿತಿಗಳಲ್ಲಿ ಕೂಸಿನ ಮನೆಗಳು ಉದ್ಘಾಟನೆಗೆ ಸಿದ್ಧವಾಗಿವೆ. ಅಂತೆಯೇ, ಇತರ ಗ್ರಾಮ ಪಂಚಾಯಿತಿಗಳಲ್ಲಿಯೂ ಸೌಲಭ್ಯಗಳನ್ನು ಪ್ರಾರಂಭಿಸಲಾಗುವುದು. ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ‘ಕೂಸಿನ ಮನೆ’ ಯೋಜನೆಯನ್ನು ಘೋಷಿಸಿದ್ದರು” ಎಂದು ತಿಳಿಸಿದರು.
“ಮನರೇಗಾ ಅಡಿಯಲ್ಲಿ ದಾಖಲಾದ ಗ್ರಾಮೀಣ ಮಹಿಳೆಯರು ತಮ್ಮ ವೃತ್ತಿಜೀವನವನ್ನು ಮುಂದುವರಿಸಲು, ಅವಕಾಶಗಳನ್ನು ಅನ್ವೇಷಿಸಲು ಮತ್ತು ತಮ್ಮ ಮಕ್ಕಳಿಗೆ ಪೌಷ್ಟಿಕ ಆಹಾರ, ವೈದ್ಯಕೀಯ ಆರೈಕೆ ಹಾಗೂ ಸುರಕ್ಷತೆ ಒದಗಿಸಲು ಸುಮಾರು 4,000 ಕೂಸಿನ ಮನೆಗಳನ್ನು ತೆರೆಯಲು ಸರ್ಕಾರ ಪ್ರಸ್ತಾಪಿಸಿದ್ದು, ಸಾಂಕೇತಿಕವಾಗಿ ಮೂಲೆಕೊಪ್ಪಲಿನಲ್ಲಿ ಇಂತಹ ಒಂದು ಕೂಸಿನ ಮನೆ ಕೇಂದ್ರವನ್ನು ತೆರೆಯಲಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ನೆನಪು | ಮಲೆನಾಡಿನ ಜನಮಾನಸದಲ್ಲಿ ಬಂಗಾರಪ್ಪ ಇವತ್ತಿಗೂ ಉಸಿರಾಡುತ್ತಲೇ ಇದ್ದಾರೆ
“ಮಕ್ಕಳ ಮನೆಗಳಲ್ಲಿ ಮಕ್ಕಳನ್ನು ಆರೈಕೆ ಮಾಡುವವರಿಗೆ ಈ ಯೋಜನೆಯಡಿ ದಿನಕ್ಕೆ ₹316 ವೇತನದಂತೆ 100 ದಿನಗಳ ಉದ್ಯೋಗವನ್ನು ಖಾತರಿಪಡಿಸುವುದರಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಾರೆ” ಎಂದು ತಿಳಿಸಿದರು.
ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, “ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ‘ಕೂಸಿನ ಮನೆ’ಯ ಕಾರ್ಯನಿರ್ವಹಣೆಯ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು” ಎಂದು ಸೂಚಿಸಿದರು.