2023ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಕ್ಕೆ ಕತೆಗಾರ ಮಂಜುನಾಯಕ ಚಳ್ಳೂರು ಮತ್ತು ಬಾಲ ಪುರಸ್ಕಾರಕ್ಕೆ ಕವಯಿತ್ರಿ ವಿಜಯಶ್ರೀ ಹಾಲಾಡಿ ಆಯ್ಕೆಯಾಗಿದ್ದಾರೆ.
ಯುವ ಕತೆಗಾರ ಮಂಜುನಾಯಕ ಚಳ್ಳೂರು ಅವರ ‘ಫೂ ಮತ್ತು ಇತರ ಕತೆಗಳು’ ಕಥಾ ಸಂಕಲನಕ್ಕೆ 2023ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಲಭಿಸಿದೆ. ವಿಜಯಶ್ರೀ ಹಾಲಾಡಿ ಅವರ ಮಕ್ಕಳ ಕಾದಂಬರಿ ‘ಸೂರಕ್ಕಿ ಗೇಟ್’ ಕೃತಿಗೆ ಬಾಲ ಪುರಸ್ಕಾರ ಲಭಿಸಿದೆ.
‘ಫೂ ಮತ್ತು ಇತರ ಕತೆಗಳು’ ಕಥೆಗಾರ ಮಂಜುನಾಯಕ ಚಳ್ಳೂರು ಅವರ ಮೊದಲ ಕಥಾಸಂಕಲನವಾಗಿದೆ. ಒಟ್ಟು ಏಳು ಕಥೆಗಳು ಇಲ್ಲಿವೆ. ಪ್ರತಿ ಕಥೆಯೂ ತಾಜಾ ರೂಪಕ ಮತ್ತು ವಿಶಿಷ್ಟ ಕಥನ ಕ್ರಿಯೆಯಿಂದ ಕೂಡಿವೆ. ಕುತೂಹಲಕಾರಿ ಭಾಷಾ ಪ್ರಯೋಗ, ದೇಸಿ ನುಡಿಗಟ್ಟಿನ ಬಳಕೆಯಿಂದ ಈ ಕಥೆಗಳ ಓದು ಹೆಚ್ಚು ಆಪ್ತವಾಗುತ್ತದೆ. ಇಲ್ಲಿನ ಬಹುತೇಕ ಕಥೆಗಳು ಮನುಷ್ಯನ ಬದುಕಿನ ಶೋಧವನ್ನೇ ಕೇಂದ್ರವಾಗಿ ಹೊಂದಿದ್ದು, ಗ್ರಾಮೀಣ ಕಟ್ಟುಕಟ್ಟಳೆಗಳ ಬದುಕು ಇಲ್ಲಿನ ಕಥಾವಸ್ತುಗಳಾಗಿವೆ.
ಮಂಜುನಾಯಕ ಚಳ್ಳೂರು ಹುಟ್ಟಿದ್ದು ಆಗಸ್ಟ್ 31, 1993ರಲ್ಲಿ. ಹುಟ್ಟೂರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಚಳ್ಳೂರು. ಧಾರವಾಡದಲ್ಲಿ ಬಿಎಸ್ಸಿ ಪದವಿ, ಬಳಿಕ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಉನ್ನತ ಶಿಕ್ಷಣ. ಕೆಲಕಾಲ ಪತ್ರಕರ್ತನಾಗಿ ದುಡಿಮೆ. ಪ್ರಸ್ತುತ ಕನ್ನಡ ಮನರಂಜನಾ ವಾಹಿನಿ ಕಲರ್ಸ್ ಕನ್ನಡದಲ್ಲಿ ಉದ್ಯೋಗಿ.
‘ಟೊಟೊ ಫಂಡ್ಸ್ ದಿ ಆರ್ಟ್ಸ್’ (ಟಿ.ಎಫ್.ಎ) ಸಂಸ್ಥೆ ನೀಡುವ 2018ರ ಟೊಟೊ ಪ್ರಶಸ್ತಿ ಮತ್ತು ‘ಕಾಜಾಣ ಯುವ ಪುರಸ್ಕಾರ’ ಕನ್ನಡದ ಯುವ ಬರಹಗಾರ ಮಂಜುನಾಯಕ ಚಳ್ಳೂರು ಭಾಜನರಾಗಿದ್ದರು.
ವಿಜಯಶ್ರೀ ಹಾಲಾಡಿ
ಕವಯಿತ್ರಿ ವಿಜಯಶ್ರೀ ಹಾಲಾಡಿ ಅವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದವರು. ತಂದೆ ಬಾಬುರಾವ್ ತಾಯಿ ಎಂ., ರತ್ನಾವತಿ. ಎಂ.ಎ., ಬಿ.ಎಡ್. ಪದವೀಧರರು.
ಕೃತಿಗಳು: ಬೀಜ ಹಸಿರಾಗುವ ಗಳಿಗೆ (ಕವನ ಸಂಕಲನ-2009), ’ಪಪ್ಪು ನಾಯಿಯ ಪ್ರೀತಿ (ಮಕ್ಕಳ ಸಾಹಿತ್ಯ ವಿಭಾಗದ ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2015 ರ ಪುಸ್ತಕ ಬಹುಮಾನ)
ಪ್ರಶಸ್ತಿ-ಪುರಸ್ಕಾರಗಳು: ಮುಂಬೈ ಕನ್ನಡ ಸಂಘದ ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿ, (ಹಸ್ತಪ್ರತಿಗೆ-2007), ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಾರದಾ ಆರ್ ರಾವ್ ದತ್ತಿ ಪ್ರಶಸ್ತಿ ಲಭಿಸಿದೆ.
ಯುವ ಪುರಸ್ಕಾರ ಆಯ್ಕೆ ಸಮಿತಿಯಲ್ಲಿ ಎಚ್ ಎಸ್ ರಾಘವೇಂದ್ರ ರಾವ್, ಡಾ. ಕೆ ಮರುಳಸಿದ್ದಪ್ಪ ಹಾಗೂ ಎಂ ಆರ್ ಕಮಲಾ ಮತ್ತು ಬಾಲ ಪುರಸ್ಕಾರ ಆಯ್ಕೆ ಸಮಿತಿಯಲ್ಲಿ ಡಾ. ಜಯಶ್ರೀ ಕಂಬಾರ, ಡಾ. ಆನಂದ ಪಾಟೀಲ ಹಾಗೂ ಮೂಡ್ನಾಕೂಡು ಚಿನ್ನಸ್ವಾಮಿ ಇದ್ದರು ಎಂದು ಪ್ರಕಟಣೆ ತಿಳಿಸಿದೆ.