ಜಾತಿ ವ್ಯವಸ್ಥೆಯನ್ನು ಪ್ರತಿಪಾದಿಸುವ ಬ್ರಾಹ್ಮಣಶಾಹಿಯ ವಿರುದ್ಧ ಪ್ರತಿಭಟನೆಯ ಅಸ್ತ್ರವಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರು 1927ರ ಡಿಸೆಂಬರ್ 25ರಂದು ಮನುಸ್ಮೃತಿ ದಹಿಸಿದ ಘಟನೆಯ ಸ್ಮರಣಾರ್ಥ ಸೋಮವಾರ ಕಲಬುರಗಿ ನಗರದ ಜಗತ್ ವೃತ್ತದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಕಾರ್ಯಕರ್ತರು ಮನುಸ್ಮೃತಿ ದಹನ ಕಾರ್ಯಕ್ರಮ ಆಯೋಜಿಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಮನುಸ್ಮೃತಿ ಪ್ರತಿಕೃತಿ ಅಣಕು ಶವಯಾತ್ರೆ ಮೂಲಕ ತೆರಳಿ ಜಗತ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿಯ ಹತ್ತಿರ ಸಮಾವೇಶಗೊಂಡು ಮನುಸ್ಮೃತಿ ಪ್ರತಿಕೃತಿಯನ್ನು ಇಟ್ಟು ಪೆಟ್ರೋಲ್ ಸುರಿದು ಬೆಂಕಿ ಹೊತ್ತಿಸಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಅರ್ಜುನ ಭದ್ರೆ ಮಾತನಾಡಿ, “ಭಾರತದಲ್ಲಿ ಬ್ರಾಹ್ಮಣ್ಯದ ನೆಲೆಯನ್ನು ಗಟ್ಟಿಗೊಳಿಸಲು ರೂಪಿಸಿದ ಸಂಹಿತೆಗಳನ್ನು ಚಾಚು ತಪ್ಪದೇ ಪಾಲಿಸಿಕೊಂಡು ಬರುವ ಒಂದು ಬೃಹತ್ ಜನಸಮುದಾಯ ನಮ್ಮ ನಡುವೆ ಇದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ದಹಿಸುವ ಮೂಲಕ ಆ ಗ್ರಂಥ ಭಾರತೀಯ ಸಮಾಜಕ್ಕೆ ಎಷ್ಟು ಅಪಾಯಕಾರಿ ಎನ್ನುವುದನ್ನು ಶೋಷಿತ ಸಮುದಾಯಗಳಿಗೆ ಮನದಟ್ಟು ಮಾಡಿದರು. ಹಾಗೆಯೇ ನಾವು ಇಂದು ಕೇವಲ ಗ್ರಂಥವನ್ನು ಸುಡುತ್ತಿದ್ದೇವೆ. ಮುಂದೊಂದು ದಿನ ಗ್ರಂಥದಲ್ಲಿನ ಜಾತಿ ಶ್ರೇಷ್ಠತೆಯ ವಿಕೃತ ಚಿಂತನೆಗಳನ್ನು ಹೀಗೆಯೇ ದಹಿಸುತ್ತೇವೆ” ಎಂದು ಅವರು ಎಚ್ಚರಿಸಿದರು.
ಮನುಸ್ಮೃತಿಯನ್ನು ಪೋಷಿಸಿಕೊಂಡು ಬರುತ್ತಿರುವ ಹಿಂದುತ್ವ ಭಾರತವನ್ನು ನುಂಗಿದೆ. ಮನುಸ್ಮೃತಿ ಮತ್ತು ಹಿಂದುತ್ವ ಜನರ ತಲೆ ಕೆಡಿಸಬಹುದೇ ಹೊರತು ಹೊಟ್ಟೆಯ ಹಸಿವಿನ ಸಮಸ್ಯೆಗಳನ್ನು ನಿವಾರಿಸಲಾಗುವುದಿಲ್ಲ. ಮನುಸ್ಮøತಿ ಸಮಾಜದ ವ್ಯವಸ್ಥೆ ಹದಗೆಡಿಸಿದೆ. ಮನುಸ್ಮೃತಿಯ ನಿಯಮಗಳನ್ನು ಮುಂದುವರೆಸಿ ಕಾಪಾಡಿಕೊಂಡು ಬರುತ್ತಿರುವ ಸಂಘ ಪರಿವಾರದ ಹುನ್ನಾರಗಳಿಗೆ ಕಡಿವಾಣ ಹಾಕುವುದು ಅವಶ್ಯಕವಾಗಿದೆ ಎಂದು ಅವರು ಪ್ರತಿಪಾದಿಸಿದರು.
“ಡಿಸೆಂಬರ್ 25 ರಂದು ರಾತ್ರಿ 9 ಗಂಟೆಗೆ ಮನುಸ್ಮೃತಿ ಗ್ರಂಥಕ್ಕೆ ಬಾಪು ಸಾಹೇಬ್ ಸೇರಿದಂತೆ ಸಹಸ್ರ ಜನರು ಮನುಸ್ಮೃತಿ ಗ್ರಂಥಕ್ಕೆ ಬೆಂಕಿ ಇಟ್ಟಾಗ ಅವರೊಂದಿಗೆ ಐದು ಜನ ದಲಿತ ಸಮುದಾಯದ ಸ್ವಾಮೀಜಿಗಳು ಜೊತೆಯಲ್ಲಿದ್ದರು. ಅಂದಿನಿಂದ ಇಲ್ಲಿಯವರೆಗೂ ಆ ಘಟನೆ ವಾರ್ಷಿಕೋತ್ಸವವನ್ನು ಆಚರಿಸಲು ಹಲವಾರು ಜನ ಮಹಾಡಕ್ಕೆ ಹೋಗಿ ಮನುಸ್ಮೃತಿ ಪ್ರತಿಕೃತಿ ಸುಡುತ್ತಿದ್ದು, ಅದೇ ರೀತಿ ಚಳುವಳಿ ಮುಂದುವರೆಯಲಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸಾಲ ಮರುಪಾವತಿಸುವಂತೆ ರೈತರಿಗೆ ಬ್ಯಾಂಕ್ಗಳ ನೋಟಿಸ್; ರೈತರ ಆಕ್ರೋಶ
ಪ್ರತಿಭಟನೆಯಲ್ಲಿ ಸಮಿತಿಯ ಪ್ರಮುಖರಾದ ಮಹಾಂತೇಶ್ ಬಡದಾಳ್, ಮಲ್ಲಿಕಾರ್ಜುನ್ ಕ್ರಾಂತಿ, ಮಲ್ಲಿಕಾರ್ಜುನ್ ಖನ್ನಾ, ರಾಜಕುಮಾರ್ ನಿಂಬಾಳ್, ಸೂರ್ಯಕಾಂತ್ ಆಜಾದಪೂರ್, ಶಿವಕುಮಾರ್ ಕೊರಳ್ಳಿ, ಮಹೇಶ್ ಕೋಕಿಲೆ, ಪರಶುರಾಮ್ ಯಡ್ರಾಮಿ, ಸುಭಾಷ್ ಕಲ್ಲೂರೆ, ರಾಜು ಆರೇಕರ್, ಮಾರುತಿ ಕಟ್ಟಿಮನಿ, ಸಾಯಿಬಣ್ಣಾ ಕೋಟನೂರ್, ಕಪಿಲ್ ಸಿಂಗೆ ಸೇರಿಂದಂತೆ ಅನೇಕರು ಪಾಲ್ಗೊಂಡಿದ್ದರು.