ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ತಮ್ಮ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಇಂದು ಘೋಷಿಸಿದರು.
ಉತ್ತರ ಪ್ರದೇಶದ ಲಖನೌದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಒಕ್ಕೂಟಗಳಿಂದ ನಾವು ಹೆಚ್ಚು ನಷ್ಟ ಅನುಭವಿಸಿದ್ದೇವೆ. ಒಕ್ಕೂಟಗಳ ಅನುಭವದಿಂದ ಪಕ್ಷಕ್ಕೆ ಹೆಚ್ಚು ಅನುಕೂಲವಾಗಿಲ್ಲ” ಎಂದು ಹೇಳಿದರು. ಆದಾಗ್ಯೂ ಚುನಾವಣೋತ್ತರ ಮೈತ್ರಿಯನ್ನು ಬಿಎಸ್ಪಿ ಮುಖ್ಯಸ್ಥೆ ತಳ್ಳಿ ಹಾಕಲಿಲ್ಲ.
”ಒಕ್ಕೂಟಗಳಿಂದ ನಮಗೆ ಹೆಚ್ಚು ನಷ್ಟವಾಗುತ್ತದೆ. ಈ ಕಾರಣದಿಂದ ದೇಶದ ಬಹುತೇಕ ಪಕ್ಷಗಳು ಬಿಎಸ್ಪಿಯೊಂದಿಗೆ ಒಕ್ಕೂಟ ಮಾಡಿಕೊಳ್ಳಲು ಬಯಸುತ್ತವೆ. ಚುನಾವಣೆಯ ನಂತರ ಒಕ್ಕೂಟವನ್ನು ಪರಿಗಣಿಸಲಾಗುವುದು. ಸಾಧ್ಯವಾದರೆ, ಬಿಎಸ್ಪಿ ಚುನಾವಣಾ ನಂತರ ಬೆಂಬಲ ನೀಡಬಹುದು. ಆದರೆ ನಮ್ಮ ಪಕ್ಷ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅನಂತಕುಮಾರ್ ಎಂಬ ಬೆಂಕಿ ಬಾಲಕನೂ, ಜನಿವಾರದಾಟವೂ
ಹಿಂದುಳಿದ ವರ್ಗಗಳು, ದಲಿತರು, ಬುಡಕಟ್ಟು ಸಮುದಾಯ ಹಾಗೂ ಮುಸ್ಲಿಂ ಸಮುದಾಯದ ಜನರ ಬೆಂಬಲದೊಂದಿಗೆ ನಾವು ಪೂರ್ಣ ಬಹುಮತದೊಂದಿಗೆ 2007ರಲ್ಲಿ ಸರ್ಕಾರ ರಚಿಸಿದ್ದೆವು. ಈ ಕಾರಣಕ್ಕಾಗಿಯೇ ನಾವು ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇವೆ. ನಾವು ಜಾತೀಯತೆ ಹಾಗೂ ಕೋಮುವಾದದ ಮೇಲೆ ನಂಬಿಕೆ ಹೊಂದಿರುವವರಿಂದ ಅಂತರ ಕಾಯ್ದುಕೊಳ್ಳುತ್ತೇವೆ. ಬಿಎಸ್ಪಿಗೆ ಅನುಕೂಲಕರ ತೀರ್ಪು ಬರುವುದಕ್ಕಾಗಿ ನಾವು ಸಂಪೂರ್ಣ ಶಕ್ತಿ ವಿನಿಯೋಗಿಸಲಿದ್ದೇವೆ” ಎಂದು ಬಿಎಸ್ಪಿ ಮುಖ್ಯಸ್ಥೆ ಹೇಳಿದರು.
1990-2000ರ ದಶಕದಲ್ಲಿ ಬಿಎಸ್ಪಿ ಉತ್ತರ ಪ್ರದೇಶದಲ್ಲಿ ಪ್ರಮುಖ ರಾಜಕೀಯ ಪಕ್ಷವಾಗಿತ್ತು. ನಂತರದ ವರ್ಷಗಳಲ್ಲಿ ಪಕ್ಷದ ಶಕ್ತಿ ಕಡಿಮೆಯಾಗುತ್ತ ಬಂತು. 2022ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಕೇವಲ ಶೇ.12.8 ರಷ್ಟು ಮತಗಳನ್ನು ಮಾತ್ರ ಗಳಿಸಿತ್ತು. ಇದು ಮೂರು ದಶಕಗಳಲ್ಲಿಯೇ ಅತೀ ಕಡಿಮೆ ಪ್ರಮಾಣದ ಮತವಾಗಿದೆ.
ಇದೇ ಸಂದರ್ಭದಲ್ಲಿ ತಮ್ಮ ಚುನಾವಣಾ ನಿವೃತ್ತಿಯ ಬಗ್ಗೆ ಮಾತನಾಡಿದ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ”ಕಳೆದ ತಿಂಗಳು, ನನ್ನ ರಾಜಕೀಯ ಉತ್ತರಾಧಿಕಾರಿಯಾಗಿ ಅಕ್ಷಯ್ ಆನಂದ್ ಅವರನ್ನು ಘೋಷಿಸಿದ್ದೆ. ಈ ಹಿನ್ನಲೆಯಲ್ಲಿ ಮಾಧ್ಯಮಗಳು ನಾನು ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ ಎಂದು ಊಹಿಸಿ ಬರೆದಿದ್ದವು. ಈ ಬಗ್ಗೆ ನಾನು ಸ್ಪಷ್ಟಪಡಿಸಲು ಬಯಸಲಿದ್ದು, ನಾನು ನನ್ನ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಪೂರ್ಣ ಶ್ರಮವಹಿಸಿ ಕೆಲಸ ಮಾಡುತ್ತೇನೆ” ಎಂದು ಹೇಳಿದರು.