ಭಾರತೀಯ ಗಣರಾಜ್ಯೋತ್ಸವವನ್ನು ಪ್ರತಿ ವರ್ಷದ ಜನವರಿ 26ರಂದು ನಾವೆಲ್ಲ ಬಹಳ ಸಂಭ್ರಮದಿಂದ ಆಚರಿಸುತ್ತೇವೆ. ಅದಕ್ಕೆ ಕಾರಣ ಭಾರತದಲ್ಲಿ ಸoವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು ಜನವರಿ 26, 1950ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.
ದೇಶದಾದ್ಯಂತ ಸರ್ಕಾರಿ ರಜಾ ದಿನವಾದದರೂ, ಶಾಲೆ ಕಾಲೇಜು ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜ ಧ್ವಜಾರೋಹಣಗೈದು, ವಿಶೇಷವಾಗಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸುವುದು ಸಾಮಾನ್ಯ.
ನಿನ್ನೆ ಜ.26. ಗಣರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ 75ನೇ ಗಣರಾಜ್ಯೋತ್ಸವ ಆಚರಣೆ ವೇಳೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(ಬಿಎಂಆರ್ಸಿಎಲ್)ದ ಎಡವಟ್ಟು ಮಾಡಿಕೊಂಡಿದ್ದಾರೆ. ನಮ್ಮ ಮೆಟ್ರೋದ ಬೈಯ್ಯಪ್ಪನಹಳ್ಳಿ ಡಿಪೋದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಆಚರಣೆ ವೇಳೆ ವೇದಿಕೆಯಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಫೋಟೋ ಮಾತ್ರ ಇಟ್ಟು, ಗೌರವ ನಮನ ಸಲ್ಲಿಸಿ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನೇ ಮರೆತು ಎಡವಟ್ಟು ಮಾಡಿಕೊಂಡಿದ್ದಾರೆ.
Where is Dr BR Ambedkar in your #RepublicDay celebration @cpronammametro?Has he been deliberately left out or was he there elsewhere?
Is it because you don’t want to 🙏🏾 Ambedkar?
Couldn’t find herehttps://t.co/QmekS1PAV8
BTW GoK in 2020 had made it mandatory to include him pic.twitter.com/xbvQO7roi0
— Vinay Kumar (@bahudari) January 27, 2024
ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಮೆಟ್ರೋ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಹಾಗೂ RECLAIM CONSTITUTION ಎಂಬ ನಾಗರಿಕ ಸಂಘಟನೆಯ ವಿನಯ್ ಕುಮಾರ್, “ನಿಮ್ಮ ಗಣರಾಜ್ಯೋತ್ಸವದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಎಲ್ಲಿದ್ದಾರೆ? ಅವರನ್ನು ಉದ್ದೇಶಪೂರ್ವಕವಾಗಿ ಹೊರಗಿಡಲಾಗಿದೆಯೇ ಅಥವಾ ಅವನು ಬೇರೆನಾದರೂ ಕಾರಣವಿದೆಯೇ ಇದ್ದಾನಾ? ಅಂಬೇಡ್ಕರ್ ಬೇಡವಾದರೇ? ನಿಮ್ಮದೇ ಸಂಸ್ಥೆಯ ಯೂಟ್ಯೂಬ್ನಲ್ಲಿ ಹಾಕಿರುವ ವಿಡಿಯೋವನ್ನು ಪೂರ್ತಿಯಾಗಿ ನೋಡಿದೆ. ಎಲ್ಲೂ ಅಂಬೇಡ್ಕರ್ ಅವರ ಫೋಟೋ ನಾನು ಕಂಡಿಲ್ಲ. ಕರ್ನಾಟಕ ಸರ್ಕಾರವು 2020ರಲ್ಲೇ ಅಂಬೇಡ್ಕರ್ ಅವರ ಫೋಟೋ ಇಡುವಂತೆ ಕಡ್ಡಾಯಗೊಳಿಸಿತ್ತು. ಇದು ನಿಮ್ಮ ಗಮನದಲ್ಲಿಲ್ಲವೇ?” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೂವರು ಮಾನಗೆಟ್ಟ ನಾಯಕರು ಮತ್ತು ರಾಜಕಾರಣ
ಈ ಹಿನ್ನೆಲೆಯಲ್ಲಿ ಈ ದಿನ.ಕಾಮ್ ಬಿಎಂಆರ್ಸಿಎಲ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚವ್ಹಾಣ್ ಅವರನ್ನು ಸಂಪರ್ಕಿಸಿದಾಗ, “ಘಟನೆ ನನ್ನ ಗಮನಕ್ಕೆ ಬಂದಿಲ್ಲ. ತಿಳಿದು ಮಾಹಿತಿ ನೀಡುತ್ತೇನೆ” ಎಂದು ತಿಳಿಸಿದ್ದಾರೆ.
ಬೆಂಗಳೂರು ಮೆಟ್ರೊ ರೈಲ್ ಕಾರ್ಪೊರೇಶನ್ ಲಿಮಿಟೆಡ್ನ (ಬಿಎಂಆರ್ಸಿಎಲ್) ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದ ಎಂ. ಮಹೇಶ್ವರ ರಾವ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ವಿನಯ್ ಕುಮಾರ್, “ನಿನ್ನೆಯ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಫೋಟೋ ಇಡದೆ ಬಿಎಂಆರ್ಸಿಎಲ್ ಬೇಜವಾಬ್ದಾರಿ ಮೆರೆದಿದ್ದಾರೆ. ಗಣರಾಜ್ಯೋತ್ಸವ ದಿನ ಅಂಬೇಡ್ಕರ್ ಅವರ ಫೋಟೋ ಇಡಬೇಕೆಂಬುದು ಎಲ್ಲರಿಗೂ ತಿಳಿದಿರುವ ಸಾಮಾನ್ಯ ಸಂಗತಿ. ಐಎಎಸ್ ಮಟ್ಟದ ಅಧಿಕಾರಿಗಳು ಕೂಡ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಉದ್ದೇಶಪೂರ್ವಕವಾಗಿಯೇ ಅಂಬೇಡ್ಕರ್ ಅವರ ಫೋಟೋ ಇಡದೆ ಅಗೌರವ ತೋರಿದ್ದಾರೆ. ಕೇವಲ ಗಾಂಧೀಜಿಯ ಫೋಟೋ ಇಟ್ಟಿದ್ದಾರೆ. ಸಂವಿಧಾನ ಅಪಾಯದಲ್ಲಿದೆ ಎಂಬ ಕೂಗು ದೇಶಾದ್ಯಂತ ಕೇಳುತ್ತಿರುವ ಮಧ್ಯೆಯೇ, ಗಣರಾಜ್ಯೋತ್ಸವ ದಿನದಂದೇ ಸಂವಿಧಾನ ಶಿಲ್ಪಿಯಾಗಿರುವ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನೇ ಮರೆತು ಬಿಟ್ಟಿದ್ದಾರೆ. ಮೆಟ್ರೋ ಅಧಿಕಾರಿಗಳ ನಡೆಯನ್ನು ಖಂಡಿಸುತ್ತೇನೆ. ಇದು ಸರ್ಕಾರಿ ಆದೇಶದ ಸ್ಪಷ್ಟ ಉಲ್ಲಂಘನೆ. ಅಂಬೇಡ್ಕರ್ ಅವರ ಅನುಯಾಯಿಗಳು ಈ ಬಗ್ಗೆ ಧ್ವನಿ ಎತ್ತಬೇಕಿದೆ. ಸರ್ಕಾರ ಕೂಡ ಈ ಬಗ್ಗೆ ಬಿಎಂಆರ್ಸಿಎಲ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ” ಎಂದು ಆಗ್ರಹಿಸಿದ್ದಾರೆ.