ಬೆಂಗಳೂರಿನ ಲಕ್ಕಸಂದ್ರ ಸುರಂಗ ಮಾರ್ಗ, ಮೆಟ್ರೋ ನಿಲ್ದಾಣದ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ, ಬನ್ನೇರುಘಟ್ಟ ಮುಖ್ಯರಸ್ತೆಯ ‘ಮೈಕೋ ಸಿಗ್ನಲ್ನಿಂದ ಆನೆಪಾಳ್ಯ ಜಂಕ್ಷನ್’ ನಡುವೆ ವಾಹನ ಸಂಚಾರವನ್ನು ಏಪ್ರಿಲ್ 1ರಿಂದ ಒಂದು ವರ್ಷದ ಅವಧಿಗೆ ಮುಚ್ಚಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ಮಾಹಿತಿ ನೀಡಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಎಂಆರ್ಸಿಎಲ್, “ಲಕ್ಕಸಂದ್ರ ಸುರಂಗ ಮೆಟ್ರೋ ನಿಲ್ದಾಣದ ದಕ್ಷಿಣ ಭಾಗದ ಪ್ರವೇಶ ಕಾಮಗಾರಿಯ ನಿರ್ಮಾಣಕ್ಕೆ ಅನುಕೂಲವಾಗುವಂತೆ, ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಉತ್ತರ ದಿಕ್ಕಿನ ಮಾರ್ಗವನ್ನು ಮೈಕೋ ಸಿಗ್ನಲ್ನಿಂದ ಆನೆಪಾಳ್ಯ ಜಂಕ್ಷನ್ವರೆಗೆ ಸಂಚಾರ ನಿರ್ಬಂಧಿಸಲಾಗಿದೆ” ಎಂದು ಹೇಳಿದೆ.
“ಈ ಸಂಬಂಧ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಡೈರಿ ಸರ್ಕಲ್ ಕಡೆಯಿಂದ ಚಲಿಸುವ ವಾಹನಗಳು ಆನೆಪಾಳ್ಯ ಜಂಕ್ಷನ್ ಕಡೆಗೆ ಚಲಿಸಬೇಕಾದ ವಾಹನಗಳು ಮೈಕೋ ಸಿಗ್ನಲ್ನಲ್ಲಿ ಬಲಕ್ಕೆ ತಿರುಗಿ ಭೋಷ್ ಲಿಂಕ್ ರಸ್ತೆಯ ಮೂಲಕ ಆಡುಗೋಡಿ ಸಿಗ್ನಲ್ ತಲುಪಿ ಎಡಕ್ಕೆ ತಿರುಗಿ ಚಲಿಸಬೇಕು” ಎಂದು ಹೇಳಿದೆ.
“ಆನೆಪಾಳ್ಯ ಜಂಕ್ಷನ್ನಿಂದ ಡೈರಿ ಸರ್ಕಲ್ ಕಡೆಗೆ ಚಲಿಸುವ ವಾಹನ ಸಂಚಾರದಲ್ಲಿ ಯಾವುದೇ ವ್ಯತ್ಯಯವಿರುವುದಿಲ್ಲ. ಡೈರಿ ಸರ್ಕಲ್ನಿಂದ ಶಾಂತಿನಗರ ಕಡೆಗೆ ಚಲಿಸುವ ವಾಹನಗಳು ವಿಲ್ಸನ್ ಗಾರ್ಡನ್ 7ನೇ ಮುಖ್ಯ ರಸ್ತೆಯಲ್ಲಿ ಎಡಕ್ಕೆ ತಿರುವು ತೆಗೆದುಕೊಳ್ಳಬೇಕು” ಎಂದು ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಸೈಬರ್ ವಂಚನೆ | ಭಾರತದವರನ್ನು ಬಳಸಿಕೊಂಡು ಭಾರತೀಯರಿಗೆ ಮೋಸ: ಕಾಂಬೋಡಿಯಾದಲ್ಲಿ ಸಿಕ್ಕಿಬಿದ್ದಿರುವ 5,000 ಭಾರತೀಯರು
ತುರ್ತಾಗಿ ಮೆಟ್ರೋ ಕಾಮಗಾರಿ
ನಗರದ ಮಹದೇವಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಆರ್.ಪುರಂ ಮೆಟ್ರೋ ಸ್ಟೇಷನ್ ನಿಲ್ದಾಣದ ಬಳಿ ತುರ್ತಾಗಿ ಮೆಟ್ರೋ ಕಾಮಗಾರಿ ಕೈಗೊಳ್ಳಲಾಗಿದೆ. ಈ ಕಾಮಗಾರಿಯೂ ಮಾರ್ಚ್ 29 ರಿಂದ ಏಪ್ರಿಲ್ 1ವರಗೆ ನಡೆಯುತ್ತಿದೆ. ಹಾಗಾಗಿ, ಸಿಟಿ ಕಡೆ ಹಾಗೂ ಹೆಬ್ಬಾಳ ಕಡೆಗೆ ಹೋಗುವ ರಸ್ತೆಯ ಅರ್ಧ ಭಾಗ ಮುಚ್ಚಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಹೇಳಿದೆ.