ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಮನರೇಗಾ ಯೋಜನೆ ಸಹಕಾರಿಯಾಗಿದೆ. ಹಾಗಾಗಿ ಎಲ್ಲ ಬಡವರ ಏಳಿಗೆಗಾಗಿ ಮನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು ಎಂದು ರೋಣ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ರಿಯಾಜ್ ಖತೀಬ್ ಹೇಳಿದ್ದಾರೆ.
ಗದಗ ಜಿಲ್ಲೆಯ ರೋಣ ತಾಲೂಕು ಪಂಚಾಯತಿ ಕಚೇರಿಯಲ್ಲಿ ನಡೆದ ಮನರೇಗಾ ಕ್ರಿಯಾ ಯೋಜನೆ ತಯಾರಿಕಾ ಕಾರ್ಯಗಾರದಲ್ಲಿ ಅವರು ಮಾತನಾಡಿದರು. “ಮನರೇಗಾ ಯೋಜನೆ ಗ್ರಾಮೀಣ ಪ್ರದೇಶದ ಜನರಿಗೆ ಒಂದು ವರದಾನ. ಗ್ರಾಮೀಣ ಪ್ರದೇಶದ ಕೂಲಿಕಾರರು ಕೆಲಸಕ್ಕಾಗಿ ಅಲೆದಾಡದೇ ತಮ್ಮ ಸ್ವಂತ ಗ್ರಾಮದಲ್ಲಿಯೇ ಬೇಡಿಕೆಯ ಪ್ರಕಾರ 100 ದಿನಗಳ ಖಾತ್ರಿ ಕೆಲಸವನ್ನು ಪಡೆಯಲು ಸಾಧ್ಯವಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿರಿಯ ನಾಗರಿಕರು, ವಿಧವೆಯರು, ವಿಶೇಷ ಚೇತನರಿಗೆ ಮನರೇಗಾ ಯೋಜನೆಯಡಿ ದುಡಿಯಲು ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ” ಎಂದರು.
“ಈ ವರ್ಷದ ಕ್ರಿಯಾ ಯೋಜನೆಯಲ್ಲಿ ತಾಲೂಕಿನಲ್ಲಿ ಒಂದು ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಡುವುದು ನಮ್ಮ ಗುರಿಯಾಗಿದೆ. ನಿಸರ್ಗದಿಂದ ನಾವು ತೆಗೆದುಕೊಳ್ಳುವುದು ಮಾತ್ರ ಮಾಡುತಿದ್ದೇವೆ, ಮರಳಿ ಕೊಡತ್ತಿಲ್ಲ. ಗಿಡಗಳನ್ನು ನೆಟ್ಟು ಹಸಿರುಕರಣಕ್ಕೆ ಶ್ರಮಿಸೋಣ” ಎಂದರು.
“ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿ ಪಡಿಸುವ ಕಾಮಗಾರಿಗಳಾದ ನಾಲಾ ಸುಧಾರಣೆ, ಕೆರೆ ಹೂಳೆತ್ತುವುದು, ಬದು ನಿರ್ಮಾಣ ಕೃಷಿ ಹೊಂಡ, ಮಳೆ ನೀರು ಕೊಯ್ಲು, ಅರಣ್ಯೀಕರಣ ಕಾಮಗಾರಿಗಳನ್ನು 65% ವರೆಗೆ ತೆಗೆದುಕೊಳ್ಳಲು ಅವಕಾಶ, ಉಳಿದ 35% ನಲ್ಲಿ ಶಾಲಾ ಅಭಿವೃದ್ಧಿ ಕಾಮಗಾರಿಳಾದ ಕಂಪೌಂಡ್, ಅಡುಗೆ ಕೋಣೆ, ಆಟದ ಮೈದಾನ, ಮಳೆ ನೀರು ಕೊಯ್ಲು, ಭೋಜನಾಲಯ, ಶೌಚಾಲಯ ಸೇರಿದಂತೆ ಶಾಲಾ ಅಭಿವೃದ್ಧಿ ಪಡಿಸುವ ಸಮಗ್ರ ಕಾಮಗಾರಿಗಳನ್ನು ಮಾಡಬೇಕು” ಸೂಚನೆ ನೀಡಿದರು.
ಕಾರ್ಯಾಗಾರದಲ್ಲಿ ಹಲವು ಅಧಿಕಾರಿಗಳು ಇದ್ದರು.