ರಾಜ್ಯದ ಹಾಲು ಉತ್ಪಾದಕರ ಹಿತದೃಷ್ಟಿಯಿಂದ ಪ್ರತಿ ಲೀಟರ್ ಹಾಲಿಗೆ 5 ರೂ. ಹೆಚ್ಚಿಸಲಾಗುತ್ತಿದೆ. ಜೊತೆಗೆ, ಪ್ರೋತ್ಸಾಹ ಧನವನ್ನು 2 ರೂ.ಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೆಎಂಎಫ್ ನಿರ್ದೇಶಕ ಮೈದನಹಳ್ಳಿ ಕಾಂತರಾಜು ತಿಳಿಸಿದ್ದಾರೆ.
ಮಧುಗಿರಿಯ ಹಾಲು ಶೀಥಲೀಕರಣ ಕೇಂದ್ರಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪಶು ಆಹಾರಗಳ ಬೆಲೆ ಹೆಚ್ಚಳದಿಂದಾಗಿ ಹಾಲು ಉತ್ಪಾದನೆಯಲ್ಲಿ ತೊಡಗಿರುವ ರೈತರು ನಿರಾಸಕ್ತಿ ತೋರುತ್ತಿದ್ದಾರೆ. ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರು ರೈತರ ಬಗ್ಗೆ ಕಾಳಜಿ ಹೊಂದಿದ್ದು, ನೇರವಾಗಿ ಉತ್ಪಾದಕರ ಖಾತೆಗೆ ಹೆಚ್ಚಳದ ಹಣವನ್ನು ನೀಡುವ ಬಗ್ಗೆ ಚರ್ಚಿಸಿದ್ದಾರೆ. ಶೀಘ್ರವೇ ಮುಖ್ಯಮಂತ್ರಿಗಳನ್ನು ಕೆಎಂಎಫ್ ಪದಾಧಿಕಾರಿಗಳ ನಿಯೋಗ ಭೇಟಿ ಮಾಡಲಿದೆ. ಹಾಲಿನ ದರ ಹೆಚ್ಚಳಕ್ಕೆ ಪ್ರಸ್ತಾಪ ಸಲ್ಲಿಸಲಿದೆ” ಎಂದು ಹೇಳಿದರು.
“ಈಗಾಗಲೇ ಸರಿಯಾದ ಸಮಯಕ್ಕೆ ಮಳೆಯಾಗದೆ, ಹಾಲಿನ ಶೇಖರಣೆ ಕಡಿಮೆಯಾಗಿದೆ. ಕ್ಷೇತ್ರದಲ್ಲಿ ಚರ್ಮಗಂಟು ರೋಗವು ನಿಯಂತ್ರಣಕ್ಕೆ ಬರುತ್ತಿದ್ದು, ಲ್ಯಾಕ್ಟೋ ಮೀಟರ್ ರೀಡಿಂಗ್ ಮೂಲಕ ಗುಣಮಟ್ಟದ ಹಾಲಿನ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ. ಉತ್ತಮವಾದ ಹಾಲು ರೈತರಿಂದ ಶೇಖರಣೆಯಾಗಲಿದೆ” ಎಂದರು.
“ಇತ್ತೀಚೆಗೆ ಹಾಲಿನಲ್ಲಿ ನೀರು ಮತ್ತು ಉಪ್ಪು ಬೆರೆಕೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ವರದಿ ಬಂದಾಕ್ಷಣ ತಪ್ಪಿತಸ್ಥರು ಯಾರೇ ಆದರೂ ಅವರುಗಳ ವಿರುದ್ಧ ಅಗತ್ಯ ಕಾನೂನು ಕ್ರಮಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಈ ವೇಳೆ ವಿಸ್ತರಣಾಧಿಕಾರಿ ಶಂಕರ್ ನಾಗ್, ಸುದರ್ಶನ್, ಮಹಾಲಕ್ಷ್ಮೀ, ನಾಗರಾಜು ಹಾಗೂ ಮತ್ತಿತರರು ಇದ್ದರು.