ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರಿಗೆ ಹಿಂದಿ ಅಥವಾ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ ಎಂದು ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಹೇಳಿಕೆಗೆ ನೆಟ್ಟಿಗರು ಕಮಲ ಪಕ್ಷದ ರಾಜ್ಯಾಧ್ಯಕ್ಷರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
“ಸ್ಟಾಲಿನ್ ಮತ್ತು ಉದಯನಿಧಿ ಅವರಿಗೆ ಜನರೊಂದಿಗೆ ಮಾತನಾಡಲು ಬೇರೆ ಯಾವುದೇ ವಿಷಯವಿಲ್ಲ. ಪ್ರಧಾನಿ ಮೋದಿ ವಿಶ್ವ ಪ್ರವಾಸದ ವೇಳೆ ತಮಿಳು ಭಾಷೆಯ ಹೆಮ್ಮೆಯ ಬಗ್ಗೆ ಮಾತನಾಡಿದ್ದಾರೆ. ಫ್ರಾನ್ಸ್ನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಹೊರಟಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಡಿಎಂಕೆ ಸೋಲುವುದು ಖಚಿತ’ಎಂದು ಕೆ ಅಣ್ಣಾಮಲೈ ಹೇಳಿದ್ದರು.
ಅಣ್ಣಾಮಲೈ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಕಿಡಿಕಾರಿರುವ ನೆಟ್ಟಿಗರು, ನಮ್ಮದು ದ್ರಾವಿಡ ಭಾಷೆ. ಹಿಂದಿ ನಮಗೆ ಅಗತ್ಯವಿಲ್ಲ. ಹಿಂದಿ ಹೋರಾಟದ ಕಿಚ್ಚು ನಮ್ಮ ರಕ್ತದಲ್ಲಿ ಅಂತರ್ಗತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಭಾರತದ ಭಾಷೆಗಳಿಗೆ ಬಿಡಿಗಾಸು ನೀಡುವ ಕೇಂದ್ರ ಹಿಂದಿ, ಸಂಸ್ಕೃತಕ್ಕೆ ಕೋಟಿಗಟ್ಟಲೆ ನೀಡುತ್ತದೆ. ನಮ್ಮದು ವಿಶ್ವದ ಪುರಾತನ ಭಾಷೆ. ಈ ಬಗ್ಗೆ ನಿಮ್ಮ ಪಕ್ಷದ ಪ್ರಧಾನಿಯ ವಿರುದ್ಧ ಧ್ವನಿಯತ್ತೆ ಎಂದು ಆಗ್ರಹಿಸಿದ್ದಾರೆ.
ಏನಿದು ವಿವಾದ?
ಅಧಿಕೃತ ಭಾಷೆ ಕುರಿತು ಸಂಸದೀಯ ಸಮಿತಿಯ 38ನೇ ಸಭೆಯಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಹಿಂದಿಯನ್ನು ಸ್ವೀಕರಿಸುವುದು ನಿಧಾನವಾದರೂ ಅಂತಿಮವಾಗಿ ನಾವು ಅದನ್ನು ಯಾವುದೇ ವಿರೋಧವಿಲ್ಲದೆ ಸ್ವೀಕರಿಸಲೇಬೇಕು’ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಅಮಿತ್ ಶಾ ಹೇಳಿಕೆಯನ್ನು ತಮಿಳುನಾಡು ಸಿಎಂ ಸ್ಟಾಲಿನ್ ಖಂಡಿಸಿದ್ದರು.
ಈ ಸುದ್ದಿ ಓದಿದ್ದೀರಾ? ಉತ್ತರ ಪ್ರದೇಶ | ಬಾಲಕರಿಗೆ ಮೂತ್ರ ಕುಡಿಸಿ, ಗುದದ್ವಾರದಲ್ಲಿ ಮೆಣಸಿನಕಾಯಿ ಇಟ್ಟು ಚಿತ್ರಹಿಂಸೆ
ಇದು ಹಿಂದಿಯೇತರ ಭಾಷಿಕರನ್ನು ಬಗ್ಗುಬಡಿಯುವ ಯತ್ನ. ತಮಿಳುನಾಡು ಯಾವುದೇ ರೀತಿಯ ಹಿಂದಿ ಪ್ರಾಬಲ್ಯ ಮತ್ತು ಹೇರಿಕೆಯನ್ನು ತಿರಸ್ಕರಿಸುತ್ತದೆ. ನಮ್ಮ ಭಾಷೆ ಮತ್ತು ಪರಂಪರೆ ನಮ್ಮನ್ನು ಗುರುತಿಸುತ್ತದೆ. ನಾವು ಹಿಂದಿಯ ಗುಲಾಮರಾಗುವುದಿಲ್ಲ. ಕರ್ನಾಟಕ, ಪಶ್ಚಿಮ ಬಂಗಾಳದಂತಹ ಹಲವು ರಾಜ್ಯಗಳು ಸಹ ಹಿಂದಿ ಹೇರಿಕೆಯನ್ನು ತೀವ್ರವಾಗಿ ವಿರೋಧಿಸುತ್ತಿವೆ. ಮಾನ್ಯ ಅಮಿತ್ ಶಾ ಅವರೇ, ದಯವಿಟ್ಟು ಹಿಂದಿ ಹೇರಿಕೆಗೆ ಹೆಚ್ಚುತ್ತಿರುವ ಪ್ರತಿರೋಧವನ್ನು ಗಮನಕ್ಕೆ ತೆಗೆದುಕೊಳ್ಳಿ. ಬಿಜೆಪಿ ನಾಯಕರು ಅನುಸರಿಸುತ್ತಿರುವ ಸೋಗಿನ ರಾಜಕೀಯದ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಿದೆ. ತಮಿಳುನಾಡಿಗೆ ಬಂದರೆ ತಮಿಳು ಭಾಷೆಗೆ ಜೇನು ತುಪ್ಪ ಹಚ್ಚುವುದು, ದೆಹಲಿಗೆ ಹೋದಾಗ ನಂಜನ್ನು ಬಿತ್ತರಿಸುವುದು ಬಿಜೆಪಿಯ ರಾಜಕಾರಣ ಎಂಬುದು ನಮಗೆಲ್ಲ ಗೊತ್ತೇ ಇದೆ’ ಎಂದು ಸ್ಟಾಲಿನ್ ಟ್ವೀಟ್ ಮಾಡಿದ್ದರು.