ಏರುತ್ತಿರುವ ಅಗತ್ಯ ವಸ್ತುಗಳ ಬೆಲೆಗಳ ಬಗ್ಗೆ ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
‘ಬೆಲೆಗಳು ಗಗನಕ್ಕೇರುತ್ತಿದ್ದರೂ ಕೇಂದ್ರ ಸರ್ಕಾರವು ಮೋದಿ ಅವರ ಇಮೇಜ್ ಉಳಿಸುವುದರತ್ತ ಹಾಗೂ ಕ್ರೋನಿ ಬಂಡವಾಳಶಾಹಿ ಗೆಳೆಯರ ಹಿತ ರಕ್ಷಣೆಯತ್ತ ತನ್ನೆಲ್ಲ ಗಮನ ನೆಟ್ಟಿದೆ’ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಮೋದಿ ಸರ್ಕಾರದ ಜನವಿರೋಧಿ ನೀತಿಗಳಿಂದಾಗಿ ಹಣದುಬ್ಬರವು ಗಗನಕ್ಕೇರುತ್ತಿದೆ’ ಎಂದಿದ್ದಾರೆ.
‘ಒಂದೆಡೆ ಹಣದುಬ್ಬರ ಹೆಚ್ಚುತ್ತಿದೆ, ಮತ್ತೊಂದೆಡೆ ರೈತರು ತಮ್ಮ ಉತ್ಪನ್ನಗಳಿಗೆ ಸರಿಯಾದ ಬೆಲೆಯನ್ನು ಪಡೆಯುತ್ತಿಲ್ಲ. ಎಂಎಸ್ಪಿಯ ಭರವಸೆಯನ್ನು ಇಲ್ಲಿಯವರೆಗೆ ಈಡೇರಿಸಲಾಗಿಲ್ಲ. ರೈತರು ಕಡಿಮೆ ಬೆಲೆಗೆ ಧಾನ್ಯಗಳನ್ನು ಮಾರಾಟ ಮಾಡಲು ಒತ್ತಾಯಿಸಲಾಗುತ್ತದೆ. ಆದರೆ ಕೃಷಿ ಉತ್ಪನ್ನಗಳು ಬಂಡವಾಳಶಾಹಿಗಳ ಗೋದಾಮುಗಳನ್ನು ತಲುಪಿದ ತಕ್ಷಣ, ಅವುಗಳ ಬೆಲೆಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ” ಎಂದು ಜೈರಾಂ ರಮೇಶ್ ಬೆಲೆ ಏರಿಕೆಯ ಪರಿಯನ್ನು ವಿಶ್ಲೇಷಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ: ಏರುತ್ತಿರುವ ರಾಹುಲ್ ಜನಪ್ರಿಯತೆಗೆ ಮೋದಿ ಆತಂಕಗೊಂಡಿದ್ದಾರೆಯೇ? ಅಂಕಿ-ಅಂಶ ಏನು ಹೇಳುತ್ತದೆ?
‘ಈರುಳ್ಳಿಯ ಮೇಲಿನ ರಫ್ತು ಸುಂಕವನ್ನು ಶೇ.40 ರಷ್ಟು ಹೆಚ್ಚಿಸಿದ್ದರಿಂದ ನಾಸಿಕ್ನ ಏಷ್ಯಾದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆ ಮುಚ್ಚಲ್ಪಟ್ಟಿದೆ’ ಎಂದು ರಮೇಶ್ ಟೀಕಿಸಿದ್ದಾರೆ
‘ಈ ಸರ್ಕಾರದ ಸಂಪೂರ್ಣ ಗಮನವು ಪ್ರಧಾನಿಯ ಇಮೇಜ್ ಉಳಿಸುವ ಮತ್ತು ಕ್ರೋನಿ ಬಂಡವಾಳಶಾಹಿ ಗೆಳೆಯರ ಹಿತ ರಕ್ಷಣೆಯತ್ತ ನೆಟ್ಟಿದೆ ಎಂದು ಸಾರ್ವಜನಿಕರು ಈಗ ಅರ್ಥಮಾಡಿಕೊಂಡಿದ್ದಾರೆ’ ಎಂದು ಅವರು ಹೇಳಿದರು.