ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ರ್ಯಾಲಿಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಉಲ್ಲೇಖಿಸುತ್ತಿರುವುದು, ಸಿಖ್ಖರ ಪುಣ್ಯಕ್ಷೇತ್ರ ಕರ್ತಾರ್ಪುರ್ ಕಾಡಿಡಾರ್ ಅಭಿವೃದ್ಧಿಯನ್ನು ಪ್ರಸ್ತಾಪಿಸುವುದು, ಅಫ್ಘಾನ್ನಿಂದ ಸಿಖ್ ಪವಿತ್ರ ಗ್ರಂಥ ಗ್ರಂಥ ಸಾಹೀಬ್ನ ಪ್ರತಿಗಳನ್ನು ಮರಳಿ ತರುವ ಸರ್ಕಾರದ ಕ್ರಮದ ಬಗ್ಗೆ ಮಾತನಾಡುವುದು ಧರ್ಮದ ಹೆಸರಿನಲ್ಲಿ ಮತ ಕೇಳುವ ಮನವಿಯಲ್ಲ. ಈ ಉಲ್ಲೇಖಗಳು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಲ್ಲ ಎಂದು ಚುನಾವಣಾ ಆಯೋಗ ಹೇಳಿರುವುದಾಗಿ ವರದಿಯಾಗಿದೆ.
ಧರ್ಮದ ಹೆಸರಿನಲ್ಲಿ ಮತಯಾಚನೆ ಮಾಡುತ್ತಿರುವ ಪ್ರಧಾನಿ ಮೋದಿ ‘ಮಾದರಿ ನೀತಿ ಸಂಹಿತೆ’ಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ವಕೀಲ ಆನಂದ್ ಜೋಂಡೇಲ್ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ದೂರನ್ನು ಪರಿಶೀಲಿಸಿರುವ ಆರೋಗ, ಪ್ರಧಾನಿ ಉಲ್ಲೇಖಿಸಿರುವ ವಿಷಯಗಳು ನೀತಿ ಸಂಹಿತೆಯ ಉಲ್ಲಂಘನೆಯಲ್ಲ ಎಂದಿರುವುದಾಗಿ ತಿಳಿದುಬಂದಿದೆ.
“ಏಪ್ರಿಲ್ 9 ರಂದು ಉತ್ತರ ಪ್ರದೇಶದ ಪಿಲಿಬಿತ್ನಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮೋದಿ ಅವರು ತಮ್ಮ ಭಾಷಣದಲ್ಲಿ ಹಿಂದು ದೇವತೆಗಳು ಮತ್ತು ಹಿಂದು ಪೂಜಾ ಸ್ಥಳಗಳು ಹಾಗೂ ಸಿಖ್ ದೇವತೆಗಳು ಮತ್ತು ಸಿಖ್ ಪುಣ್ಯಸ್ಥಳಗಳ ಹೆಸರಿನಲ್ಲಿ ಮತ ಕೇಳಿದ್ದಾರೆ” ಎಂದು ಆರೋಪಿಸಿ ಏಪ್ರಿಲ್ 10ರಂದು ಆಯೋಗಕ್ಕೆ ಜೋಂಡೇಲ್ ಅವರು ದೂರು ನೀಡಿದ್ದರು.
“ಮೋದಿ ಅವರ ಹೇಳಿಕೆಗಳು ಸಮುದಾಯಗಳ ನಡುವಿನ ಸಾಮರಸ್ಯವನ್ನು ಹಾಳು ಮಾಡುತ್ತವೆ. ದ್ವೇಷವನ್ನು ಸೃಷ್ಟಿಸುತ್ತವೆ ಅಥವಾ ವಿವಿಧ ಜಾತಿಗಳು ಮತ್ತು ಸಮುದಾಯಗಳ ನಡುವೆ ಉದ್ವಿಗ್ನತೆಯನ್ನು ಉಂಟುಮಾಡುತ್ತವೆ. ಜೊತೆಗೆ, ಜಾತಿ ಅಥವಾ ಕೋಮು ಪ್ರಚೋದನೆಯನ್ನ ನೀಡುತ್ತವೆ. ಚುನಾವಣಾ ಪ್ರಚಾರಕ್ಕಾಗಿ ಮಸೀದಿಗಳು, ಚರ್ಚುಗಳು, ದೇವಾಲಯಗಳು ಮತ್ತು ಇತರ ಪೂಜಾ ಸ್ಥಳಗಳನ್ನು ಬಳಸುವುದನ್ನು ಸಹ ನೀತಿ ಸಂಹಿತೆಯ ನಿಬಂಧನೆಗಳು ನಿರ್ಬಂಧಿಸುತ್ತವೆ” ಎಂದು ಜೋಂಡೇಲ್ ಅವರು ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.
“ಸೆಕ್ಷನ್ 153ಎ ಅಡಿಯಲ್ಲಿ ಮೋದಿ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಈ ಸೆಕ್ಷನ್ – ಧರ್ಮ, ಜನಾಂಗ, ಹುಟ್ಟಿದ ಸ್ಥಳ, ನಿವಾಸ ಮತ್ತು ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಪ್ರಚೋದಿಸುವುದನ್ನು ನಿರ್ಬಂಧಿಸುತ್ತದೆ” ಎಂದು ಚುನಾವಣಾ ಆಯೋಗವನ್ನ ವಕೀಲರು ಒತ್ತಾಯಿಸಿದ್ದರು.
ಅಲ್ಲದೆ, ಏಪ್ರಿಲ್ 21ರಂದು ರಾಜಸ್ಥಾನದ ಬನ್ವರ್ನಲ್ಲಿ ನಡೆದ ರ್ಯಾಲಿಯಲ್ಲಿ ಕಾಂಗ್ರೆಸ್ ಮತ್ತು ಮುಸ್ಲಿ ಸಮುದಾಯದ ವಿರುದ್ಧ ವಾಗ್ದಾಳಿ ನಡೆಸಿದ್ದ ಮೋದಿ, “ಕಾಂಗ್ರೆಸ್ಗೆ ಮತ ಚಲಾಯಿಸಿದರೆ, ‘ಒಳನುಸುಳುವವರು ಮತ್ತು ಹೆಣ್ಣು ಮಕ್ಕಳನ್ನ ಹೊಂದಿರುವವರಿಗೆ’ ರಾಷ್ಟ್ರದ ಸಂಪತ್ತನ್ನ ಅವರು ಹಂಚಿಕೆ ಮಾಡ್ತಾರೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆದರೆ, ಈ ಭಾಷಣದ ಬಗ್ಗೆ ಚುನಾವಣಾ ಆಯೋಗ ಇನ್ನೂ ಯಾವುದೇ ನಿರ್ಧಾರವನ್ನೇ ತೆಗೆದುಕೊಂಡಿಲ್ಲ.
ದೂರು ನೀಡಿ ಐದು ದಿನಗಳಾದರೂ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಳ್ಳದ ಕಾರಣ, ಜೋಂಡೇಲ್ ಅವರು ಏಪ್ರಿಲ್ 15ರಂದು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ದೂರಿನ ಆಧಾರದ ಮೇಲೆ ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳಲು ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್ಗೆ ಅವರು ಮನವಿ ಮಾಡಿದ್ದಾರೆ.
ಈ ವರದಿ ಓದಿದ್ದೀರಾ?: ಮೋದಿ ದ್ವೇಷ ಭಾಷಣ | ಪ್ರಧಾನಿಗೆ ಸಲಹೆ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!
ಅವರ ಅರ್ಜಿಯನ್ನ ಈ ವಾರವೇ ಹೈಕೋರ್ಟ್ ಆಲಿಸುವ ನಿರೀಕ್ಷೆಯಿದೆ. ಹೀಗಾಗಿ, ಚುನಾವಣಾ ಆಯೋಗ ತನ್ನ ನಿರ್ಧಾರವನ್ನ ಜೋಂಡೇಲ್ ಅವರೊಂದಿಗೆ ಹಂಚಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿರುವುದಾಗಿ ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಇತ್ತೀಚೆಗೆ, ಚುನಾವಣಾ ಆಯೋಗ ಚರ್ಚೆ ನಡೆಸಿದ್ದು, ಮೋದಿ ಅವರ ಭಾಷಣಗಳಲ್ಲಿ ನೀತಿ ಸಂಹಿತೆಯ ಉಲ್ಲಂಘನೆ ಕಂಡುಬಂದಿಲ್ಲ. ಪಿಲಿಬಿತ್ನಲ್ಲಿ ಮೋದಿ ಅವರು ತಮ್ಮ ಸರ್ಕಾರದ ಸಾಧನೆಗಳ ಪಟ್ಟಿ ಬಗ್ಗೆಯಷ್ಟೇ ಉಲ್ಲೇಖಿಸಿದ್ದಾರೆ ಎಂದು ಆಯೋಗ ಅಭಿಪ್ರಾಯ ಪಟ್ಟಿದೆ ಎಂದು ವರದಿಯಾಗಿದೆ.
ಇದಲ್ಲದೆ, ಪ್ರಧಾನ ಮಂತ್ರಿಯ ಭಾಷಣವು ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸಿಲ್ಲ. ಪ್ರಚಾರ ಭಾಷಣದಲ್ಲಿ ಧರ್ಮದ ಬಗ್ಗೆ ಕೇವಲ ಉಲ್ಲೇಖಿಸುವುದು ಮಾತ್ರವೇ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲು ಸಾಕಾಗುವುದಿಲ್ಲ ಎಂಬ ತೀರ್ಮಾನಕ್ಕೆ ಆಯೋಗ ಬಂದಿದೆ ಎಂದೂ ಹೇಳಲಾಗಿದೆ.