ವಿಶೇಷ ಸಂದರ್ಭ ಎಂಬಂತೆ 62 ವರ್ಷಗಳ ನಂತರ ದೆಹಲಿ ಹಾಗೂ ಮುಂಬೈ ಮಹಾನಗರಗಳಿಗೆ ಮುಂಗಾರು ಮಳೆ ಒಟ್ಟಿಗೆ ಆಗಮಿಸಿದೆ. ಎರಡೂ ನಗರಗಳಿಗೂ ಜೂನ್ 21ರಂದು ಮುಂಗಾರು ಒಟ್ಟಿಗೆ ತಲುಪಿದ ಕಾರಣ ಭಾರೀ ಮಳೆ ಸುರಿದಿದೆ. 1961ರ ಜೂನ್ 21 ರಂದು ಮುಂಬೈ ಮತ್ತು ದೆಹಲಿಗೆ ಮುಂಗಾರು ಮಳೆ ಏಕಕಾಲಕ್ಕೆ ಆಗಮಿಸಿತ್ತು. ಎರಡು ನಗರಗಳು ಪರಸ್ಪರ 1,430 ಕಿಲೋಮೀಟರ್ ದೂರದಲ್ಲಿವೆ.
ರಾಷ್ಟ್ರ ರಾಜಧಾನಿ ದೆಹಲಿಗೆ ನಿಗದಿತ ಸಮಯಕ್ಕಿಂತ ಎರಡು ದಿನ ಮುಂಚಿತವಾಗಿ, ಮುಂಬೈಗೆ ಎರಡು ವಾರ ತಡವಾಗಿ ಪ್ರವೇಶಿಸುತ್ತದೆ ಎಂದು ಈ ಬಾರಿ ಭಾರತೀಯ ಹವಾಮಾನ ಇಲಾಖೆ ತಿಳಿಸಿತ್ತು.
ಈ ಸುದ್ದಿ ಓದಿದ್ದೀರಾ? 16 ವರ್ಷದವರು ಲೈಂಗಿಕತೆಯ ಬಗ್ಗೆ ನಿರ್ಧರಿಸಬಲ್ಲರು ಎಂದ ಮೇಘಾಲಯ ಹೈಕೋರ್ಟ್; ಪೋಕ್ಸೋ ಎಫ್ಐಆರ್ ರದ್ದು
ನೈಋತ್ಯ ಮುಂಗಾರು ಈಗ ಸಕ್ರಿಯವಾಗಿದೆ. ಇದು ಮುಂಬೈ ಸೇರಿದಂತೆ ಇಡೀ ಮಹಾರಾಷ್ಟ್ರವನ್ನು ಆವರಿಸಿದೆ. ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ ಮತ್ತು ಹರಿಯಾಣ, ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮುವಿನ ಕೆಲವು ಭಾಗಗಳಲ್ಲಿಯೂ ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ಮಹಾನಿರ್ದೇಶಕ ಡಾ ಮೃತ್ಯುಂಜಯ್ ಮೊಹಾಪಾತ್ರ ಹೇಳಿದರು.
ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯು ಸುಡುವ ಶಾಖದಿಂದ ಬಿಡುವು ನೀಡಿದ್ದರೂ, ಗುರುಗ್ರಾಮದ ವಿವಿಧ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ಮುಂಬೈ ಮತ್ತು ಸುತ್ತಮುತ್ತಲಿನ ಉಪನಗರಗಳಲ್ಲಿ ಕಳೆದ 24 ಗಂಟೆಗಳಲ್ಲಿ ಹೆಚ್ಚು ಮಳೆಯಾಗಿದೆ. ಇದರ ಪರಿಣಾಮವಾಗಿ ಅಂಧೇರಿ, ಮಲಾಡ್ ಮತ್ತು ದಹಿಸರ್ ಪ್ರದೇಶಗಳು ಹೆಚ್ಚು ಹಾನಿಗೊಳಗಾಗಿವೆ.
ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ರಾಯಗಡ, ರತ್ನಗಿರಿ, ಪಾಲ್ಘರ್, ಮುಂಬೈ, ಥಾಣೆ ಮತ್ತು ಸಿಂಧುದುರ್ಗಕ್ಕೆ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದೆ.