- ಶಾಖ ತಾಪಮಾನದಿಂದಾಗಿ ಸೊಳ್ಳೆಗಳ ಸಂತಾನೋತ್ಪತ್ತಿ ಅವಧಿ ಕಡಿತ
- ಜ್ವರ, ತಲೆನೋವು ಎಂದ ಕೂಡಲೇ ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಿ
ರಾಜ್ಯದಲ್ಲಿ ಕಳೆದ ಕೆಲ ದಿನಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದ ಮತ್ತು ಹವಾಮಾನ ಬದಲಾವಣೆಯಿಂದಾಗಿ ರಾಜ್ಯದಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದ್ದು, ಮಲೇರಿಯಾ, ಡೆಂಗ್ಯೂನಂತಹ ರೋಗಗಳ ಬಗ್ಗೆ ಜಾಗೃತಿವಹಿಸಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.
ಅಕಾಲಿಕ ಮಳೆಯಿಂದಾಗಿ ಅಲ್ಲಲ್ಲಿ ನಿಂತ ನೀರು ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗಿದೆ. ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರಲ್ ರಿಸರ್ಚ್ (ಐಐಎಚ್ಆರ್) ಮತ್ತು ಇತರ ಸಂಸ್ಥೆಗಳ ಕೀಟಶಾಸ್ತ್ರಜ್ಞರು ಸೊಳ್ಳೆಗಳ ಸಂಖ್ಯೆಯಲ್ಲಿನ ಉಲ್ಬಣಕ್ಕೆ ಹವಮಾನ ಬದಲಾವಣೆಯೂ ಕಾರಣ ಎಂದಿದ್ದಾರೆ.
ಸದ್ಯ ಈ ಬಗ್ಗೆ ಕರ್ನಾಟಕದ ಆರೋಗ್ಯ ಇಲಾಖೆ ಎಚ್ಚೆತ್ತಿದ್ದು, ಕೆಲವೆಡೆ ಸೊಳ್ಳೆ ಉತ್ಪತ್ತಿ ತಡೆಗಟ್ಟುವ ರಾಸಾಯಾನಿಕ ಔಷಧಿಗಳನ್ನು ಸಿಂಪಡಿಸಲಾಗುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೆಂಗಳೂರಿನ ಕೆಲವು ಪ್ರದೇಶದಲ್ಲಿ ಈಗಾಗಲೇ ರಾಸಾಯನಿಕ ಔಷಧಿ ಸಿಂಪಡನೆ ಶುರು ಮಾಡಿದೆ.
ಮನೆಯ ಸುತ್ತಮುತ್ತ ಬಿಸಾಡಿದ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ನೀರು ನಿಂತಿರುವುದು ಕಂಡುಬಂದರೆ ಅದನ್ನು ವಿಲೇವಾರಿ ಮಾಡಬೇಕು. ಸ್ವಯಂ ರಕ್ಷಣಾ ವಿಧಾನ ಅಳವಡಿಸಿಕೊಂಡಾಗ ಸೊಳ್ಳೆಗಳ ಉತ್ಪತ್ತಿಯಾಗುವುದು ಕಡಿಮೆಯಾಗುತ್ತದೆ. ಅಲ್ಲದೆ, ಸೊಳ್ಳೆ ಕಡಿತ ಹಾಗೂ ಅವುಗಳಿಂದ ಹರಡುವ ರೋಗದಿಂದ ಮುಕ್ತರಾಗಬಹುದು.
ಸಾಮಾನ್ಯವಾಗಿ ಸೊಳ್ಳೆಗಳ ಮೊಟ್ಟೆ ಒಡೆಯಲು 26 ಡಿಗ್ರಿ ಸೆಲ್ಸಿಯಸ್ನಿಂದ 30 ಡಿಗ್ರಿ ಬೇಕಾಗುತ್ತದೆ. ಸಂತಾನೋತ್ಪತ್ತಿ ಮಾಡಲು 10-14 ದಿನಗಳು ಬೇಕಾಗುತ್ತದೆ. ಇತ್ತೀಚಿನ ಅಧಿಕ ತಾಪಮಾನ ಅಂದರೆ, 32 ಡಿಗ್ರಿ ಮತ್ತು 35 ಡಿಗ್ರಿ ನಡುವಿನ ತಾಪಮಾನದಿಂದಾಗಿ ಅವುಗಳ ಸಂತಾನೋತ್ಪತ್ತಿ ಅವಧಿ 8-10 ದಿನಕ್ಕೆ ಇಳಿಕೆಯಾಗಿದೆ ಎನ್ನಲಾಗಿದೆ.
“ಬೇಸಿಗೆಯಾದ ಕಾರಣ ನೀರಿಗೆ ಅಭಾವ ಹೆಚ್ಚಾಗಿ ಇದ್ದೇ ಇರುತ್ತದೆ. ಈ ಸಮಯದಲ್ಲಿ ಮನೆಯಲ್ಲೇ ನೀರು ಶೇಖರಿಸಿ ಇಡುವವರು ಮೂರು ದಿನಕ್ಕಿಂತ ಹೆಚ್ಚು ದಿನ ಇಡಬಾರದು. ಕೊಳಚೆ ಪ್ರದೇಶಗಳಲ್ಲಿಯೂ ಸಹ ನೀರು ನಿಲ್ಲುವುದಕ್ಕೆ ಬಿಡದೆ ಪ್ರದೇಶವನ್ನು ಸ್ವಚ್ಛವಾಗಿಡಬೇಕು. ಈ ಬಗ್ಗೆ ಆರೋಗ್ಯ ಇಲಾಖೆ ಜನರಿಗೆ ಜಾಗೃತಿ ನೀಡುತ್ತಿದೆ. ಆರೋಗ್ಯಾಧಿಕಾರಿಗಳು ಬೆಂಗಳೂರು ನಗರದಲ್ಲಿರುವ ಕೊಳಚೆ ಪ್ರದೇಶಗಳಿಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ” ಎಂದು ಈ ದಿನ.ಕಾಮ್ಗೆ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಡಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ?: ದೇಶದಲ್ಲಿ ಕೋವಿಡ್ ಹೆಚ್ಚಳ; ಒಂದೇ ದಿನದಲ್ಲಿ 5,676 ಮಂದಿಗೆ ಸೋಂಕು ದೃಢ
ಹಾಸನದ ಸ್ತ್ರೀ ರೋಗ ತಜ್ಞೆಯಾದ ಡಾ. ಸಾವಿತ್ರಿ ಅವರು ಮಾತನಾಡಿ, “ಜ್ವರ ಸುಸ್ತು ಎಂದಾಕ್ಷಣ ವೈದ್ಯರ ಬಳಿ ಚಿಕಿತ್ಸೆ ಪಡೆಯಲೇಬೇಕು. ಕೆಲವರು ಪ್ಯಾರಸಿಟಮಲ್ ಪಡೆದು ಬೇಜಾವಾಬ್ದಾರಿತನದಿಂದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯವಹಿಸುತ್ತಾರೆ. ಇದು ಸರಿಯಾದ ನಡೆಯಲ್ಲ. ಗರ್ಭಿಣಿಯರು ಈ ಸಮಯದಲ್ಲಿ ತಮ್ಮನ್ನು ಕಾಪಾಡಿಕೊಳ್ಳಬೇಕು. ‘ಸೆರಬ್ರಲ್ ಮಲೇರಿಯಾ’ ಜೀವವನ್ನೇ ತೆಗೆಯುತ್ತದೆ. ಸೊಳ್ಳೆಗಳಿಂದ ಬರುವ ಈ ಕಾಯಿಲೆಗಳಿಗೆ ಪ್ರತ್ಯೇಕ ಔಷಧಿಗಳಿರುವ ಕಾರಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ” ಎಂದು ಸಲಹೆ ನೀಡಿದರು.
ಡೆಂಗ್ಯೂ, ಚಿಕನ್ಗುನ್ಯಾ ಬಗ್ಗೆ ಈ ದಿನ.ಕಾಮ್ನೊಂದಿಗೆ ಮಾಹಿತಿ ಹಂಚಿಕೊಂಡ ಮಕ್ಕಳ ತಜ್ಞೆ ಡಾ. ಶ್ಯಾಮಲ, “ಸದ್ಯ ಮಲೇರಿಯಾ, ಡೆಂಗ್ಯು ಪ್ರಕರಣಗಳು ಹೆಚ್ಚು ಕಂಡು ಬರುತ್ತಿಲ್ಲ. ಆದರೂ, ನಮ್ಮ ದೇಹದ ಬಗ್ಗೆ ಕಾಳಜಿವಹಿಸುವುದು ನಮ್ಮ ಕರ್ತವ್ಯ. ಆದಷ್ಟು ಗಿಡದ ಕುಂಡಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸಾಂಕ್ರಾಮಿಕ ರೋಗವಾಗಿರುವ ಮಲೇರಿಯಾ ಅನಾಫಿಲಿಸ್ ಸೊಳ್ಳೆಯಿಂದ ಹರಡುತ್ತದೆ. ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಈ ರೋಗದ ನಿಯಂತ್ರಣ ಸಾಧ್ಯ. ಸದ್ಯ ಬೆಂಗಳೂರಿನಲ್ಲಿ ಎಚ್3ಎನ್2, ಅಡೆನೋವೈರಸ್ ಹೆಚ್ಚಾಗುತ್ತಿದೆ ಇದರ ಬಗ್ಗೆ ಎಚ್ಚರವಿರಲಿ. ಮಾಸ್ಕ್ ಧರಿಸುವುದು ಉತ್ತಮ. ಮಕ್ಕಳು ಮತ್ತು ಹಿರಿಯ ನಾಗರಿಕರು ಮುಂಜಾಗೃತರಾಗಿರಬೇಕು” ಎಂದರು.